ಮೋದಿ ಆಯ್ತು ಈಗ ಯೋಗಿಗೆ ಗುರಿ ಇಟ್ಟ ಪ್ರಕಾಶ್ ರೈ
ಬೆಂಗಳೂರು, ಡಿಸೆಂಬರ್ 22: ಇಷ್ಟು ದಿನ ಮೋದಿ ಅವರನ್ನು ಗುರಿಯಾಗಿಸಿಕೊಂಡು ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದ ಪ್ರಕಾಶ್ ರೈ ಈಗ ತಮ್ಮ #ಜಸ್ಟ್ ಆಸ್ಕಿಂಗ್ ಬಾಣವನ್ನು ಯೋಗಿ ಆದಿತ್ಯಾನಾಥ ಅವರ ಕಡೆ ತಿರುಗಿಸಿದ್ದಾರೆ.
ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ಟಿಪ್ಪು ಜಯಂತಿ ಆಚರಿಸಬೇಡಿ ಹನುಮ ಜಯಂತಿ ಆಚರಿಸಿ ಎಂದು ಕರೆ ನೀಡಿದ ವಿಷಯವನ್ನು ಹಿಡಿದಿರುವ ಪ್ರಕಾಶ್ ರೈ ತಮ್ಮ ಪ್ರಶ್ನೆಯನ್ನು ಟ್ವಿಟರ್ ನಲ್ಲಿ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿಯಲ್ಲಿ ತೇಲಿ ಬಿಟ್ಟಿದ್ದಾರೆ.
'ಯೋಗಿ ಆದಿತ್ಯನಾಥ್ ದೇವರನ್ನು ಗುತ್ತಿಗೆ ಪಡೆದಿದ್ದಾರೆಯೇ?'
ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಖಂಡರುಗಳಾದ ಜಗದೀಶ್ ಶೆಟ್ಟರ್ ಮುಂತಾದವರು ಟಿಪ್ಪು ರೀತಿ ಖಡ್ಗ ಹಿಡಿದು ಟೋಪಿ ತೊಟ್ಟ ಚಿತ್ರಗಳನ್ನು ಟ್ವಿಟರ್ ನಲ್ಲಿ ಹಾಕಿರುವ ಪ್ರಕಾಶ್ ರೈ ಅದರೊಟ್ಟಿಗೆ ಯೋಗಿಯವರಿಗೆ ಪ್ರಶ್ನೆಯನ್ನೂ ಬರೆದಿದ್ದಾರೆ.
ಇಂದು ಮಧ್ಯಾಹ್ನ ಟ್ವೀಟ್ ಮಾಡಿರುವ ಪ್ರಕಾಶ್ ರೈ "ಪ್ರಿಯ ಯೋಗಿ ಜಿ ಅವರೆ, ಏಕೆ ನೀವು ಕರ್ನಾಟಕದಲ್ಲಿ ಕೋಮುದ್ವೇಷದ ಬೀಜ ಬಿತ್ತುತ್ತಿದ್ದೀರಿ, ನಾನು ಇಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ಸ್ವಲ್ಪ ಗಮನವಿಟ್ಟು ನೋಡಿರಿ ಆ ಚಿತ್ರಗಳು ನಿಮ್ಮ ಬಿಜೆಪಿಯವರದ್ದೆ, ನಿನ್ನೆ ನೀವು ಟಿಪ್ಪು ಜಯಂತಿ ಮಾಡಬೇಡಿ ಎಂದಾಗ ಅಲ್ಲೆ ನಿಮ್ಮ ಜೊತೆ ವೇದಿಕೆ ಹಂಚಿಕೊಂಡವರೇ ಅವರು' ಎಂದು ಹೇಳಿದ್ದಾರೆ.
ನಂತರ ಮುಂದುವರೆದು 'ಅವರೆಲ್ಲಾ ಕೆಲವೇ ವರ್ಷಗಳ ಹಿಂದೆ ಟಿಪ್ಪು ಜಯಂತಿ ಆಚರಿಸಿದ್ದರು, ಆಗ ನಿಮಗೆ ಟಿಪ್ಪು ಜಯಂತಿ ಸಮಸ್ಯೆಯಾಗಿ ಕಾಣಲಿಲ್ಲ, ಆದರೆ ಈಗ ಏಕೆ ಅದು ಸಮಸ್ಯೆಯಾಗಿ ಕಾಣುತ್ತಿದೆ' ಎಂದು ಪ್ರಶ್ನಿಸಿದ್ದಾರೆ.
ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
'ಚುನಾವಣೆ ಎದುರಿಸಲು ಇಂಥಹಾ ಕೋಮು ವಿಷಯಗಳನ್ನು ಬಿಟ್ಟು ಬೇರೆ ಏನೂ ನಿಮಗೆ ಸಿಗುವುದಿಲ್ಲವೇ?' ಎಂದು ಅವರು ಕೇಳಿದ್ದಾರೆ. ಕೊನೆಗೆ ತಮ್ಮ ಎಂದಿನ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.
ಪ್ರಕಾಶ್ ರೈ ಅವರ ಈ ಟ್ವೀಟ್ಗೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ, ಯೋಗಿ ಆದಿತ್ಯಾನಂದ ಅವರ ಪರ ಬ್ಯಾಟ್ ಮಾಡಿರುವ ಪ್ರತಿಕ್ರಿಯೆಗಳೇ ಹೆಚ್ಚಿವೆ.