ಬೆಂಗಳೂರು ರಸ್ತೆ ಗುಂಡಿಗಳು, ಓದುಗರು ಕಳಿಸಿದ ಚಿತ್ರಗಳು
ಬೆಂಗಳೂರು, ಅಕ್ಟೋಬರ್ 11 : ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಇದುವರೆಗೂ 5 ಜನರು ಬಲಿಯಾಗಿದ್ದಾರೆ. ಗುಂಡಿಗಳನ್ನು ಮುಚ್ಚಿಲ್ಲ ಎಂದು ಬಿಬಿಎಂಪಿಗೆ ಜನರು ಪ್ರತಿದಿನ ಮಂಗಳಾರತಿ ಮಾಡುತ್ತಿದ್ದಾರೆ. ಹಲವು ರಸ್ತೆಗಳ ಗುಂಡಿಗಳು ಇನ್ನೂ ಬಾಯ್ತೆರೆದು ಕೂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
'ಜನರಿಗೆ ಗುಂಡಿ ಭಾಗ್ಯ, ಕಾಂಗ್ರೆಸ್ಗೆ ಹುಂಡಿ ಭಾಗ್ಯ'
ಬೆಂಗಳೂರು ನಗರದಲ್ಲಿ ಸುಮಾರು 15 ಸಾವಿರ ಗುಂಡಿಗಳಿವೆ ಎಂದು ಬಿಬಿಎಂಪಿ ಅಂದಾಜಿಸಿದೆ. ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಲಾಗಿದೆ. ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ದಿನಗಳ ಗಡುವು ನೀಡಿದ್ದಾರೆ.
ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಕಾರ್ಯಪಡೆ ರಚನೆ
ನಾಯಂಡಹಳ್ಳಿ, ಸಂಪಂಗಿ ರಾಮನಗರ, ಮಾಗಡಿ ಮುಖ್ಯರಸ್ತೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಗುಂಡಿಗಳನ್ನು ಮಚ್ಚಲು ಬಿಬಿಎಂಪಿ ಕಾರ್ಯಾಚರಣೆ ಆರಂಭಿಸಿದೆ. ನಗರದ ವಿವಿಧ ಭಾಗಗಳಲ್ಲಿ ಗುಂಡಿಗಳು ಇನ್ನೂ ಬಾಯ್ತೆರೆದು ಕೂತಿವೆ. ಒನ್ ಇಂಡಿಯಾ ಕನ್ನಡದ ಓದುಗರು ಅದರ ಚಿತ್ರಗಳನ್ನು ಕಳುಹಿಸಿದ್ದಾರೆ. ಓದುಗರು ಕಳುಹಿಸಿದ ಚಿತ್ರಗಳು ಇಲ್ಲಿವೆ....
ರಸ್ತೆಯ ದುಸ್ಥಿತಿ ತೆರೆದಿಡುವ ಓದುಗರು ಕಳುಹಿಸಿದ ಚಿತ್ರಗಳು
ನಾಗರಬಾವಿ ಕೆಎಲ್ಇ ಸ್ಕೂಲ್ ರಸ್ತೆ
ಬೆಂಗಳೂರಿನ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿ ಹೋಗಿದೆ. ಕಳೆದ ಐದು ವರ್ಷಗಳಿಂದ ರಸ್ತೆಯನ್ನು ಸರಿಯಾಗಿ ದುರಸ್ಥಿ ಮಾಡಿಲ್ಲ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಕೆಎಲ್ಇ ಸ್ಕೂಲ್ ರಸ್ತೆಯ ಚಿತ್ರವನ್ನು ಓದುಗರು ಕಳುಹಿಸಿದ್ದಾರೆ.
ನಾಗವಾರ ವಾರ್ಡ್ ನಂ 6
ಬಿಬಿಎಂಪಿಯ ವಾರ್ಡ್ ನಂಬರ್ 6ರ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಗುಂಡಿಗಳಿಂದ ತುಂಬಿ ಹೋಗಿದೆ. ಮಳೆ ನೀರು ರಸ್ತೆಯಲ್ಲಿ ತುಂಬಿಕೊಂಡಿದೆ. ಒಳಚರಂಡಿ ನೀರು ಸಹ ರಸ್ತೆ ಮೇಲೆ ಹರಿಯುತ್ತಿದೆ ಎಂದು ಸ್ಥಳೀಯರು ಹೇಳಿದ್ದು ಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ.
ಕಾಟನ್ ಪೇಟೆ ರಸ್ತೆ ಸ್ಥಿತಿ
ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಕಾಟನ್ ಪೇಟೆ (ವಾರ್ಡ್ ನಂಬರ್ 29) ಯ ಬೇಲಿಮಠ ರಸ್ತೆಯ ಸ್ಥಿತಿ ನೋಡಿ. ರಸ್ತೆಗಳ ತುಂಬಾ ಗುಂಡಿಗಳು ಬಿದ್ದಿವೆ. ಕಸವನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ನಮ್ಮ ಓದುಗರು ರಸ್ತೆಯ ಚಿತ್ರವನ್ನು ಕಳುಹಿಸಿದ್ದಾರೆ.
ಕಾಡಗೋಡಿ ರಸ್ತೆ
ಹೋಪ್ ಫಾರ್ಮ್ ಮತ್ತು ಕಾಡುಗೋಡಿ ಬ್ರಿಡ್ಜ್ ನಡುವಿನ ರಸ್ತೆ ಹದಗೆಟ್ಟಿದೆ. ರಸ್ತೆಯನ್ನು ರಿಪೇರಿ ಮಾಡಿಸಿ ಎಂದು ಜನರು ಬಿಬಿಎಂಪಿಯನ್ನು ಒತ್ತಾಯಿಸಿದ್ದಾರೆ.
ವಿಶ್ವಪ್ರಿಯ ಲೇಔಟ್
ಬೇಗೂರಿನ ವಿಶ್ವಪ್ರಿಯ ಲೇಔಟ್ ರಸ್ತೆಯಲ್ಲಿ ಮಳೆ ನೀರು ಸರಿಯಾಗಿ ರಾಜಕಾಲುವೆಗೆ ಹರಿದು ಹೋಗುತ್ತಿಲ್ಲ. ಇದರಿಂದಾಗಿ ರಸ್ತೆಯಲ್ಲಿ ನೀರು ನಿಂತು ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.