ನೋಟು ಬದಲಿಸಲು ಕ್ಯೂನಲ್ಲಿ ನಿಂತಾಗ ಸತ್ತರೆ ಯಾರು ಬರ್ತಾರೆ?
ಬೆಂಗಳೂರು, ನವೆಂಬರ್ 10: ನನಗೀನ ಎಪತ್ತು ವರ್ಷ, ನಾನೂ ಪೋಸ್ಟ್ ಆಫೀಸಿನಲ್ಲಿ ಕ್ಯೂ ನಿಂತಿದ್ದೇನೆ. ಇನ್ನ ಅಂಕೌಂಟ್ ಚಲನ್ ನಂ 256, ಬೆಳಗ್ಗಿನಿಂದ ಕಾಯುತ್ತಿರುವ ನನ್ನ ಪಾಳಿ ಬರುವ ವೇಳೆಗೆ ಸಂಜೆಯಾದರೂ ಆಗಬಹುದು ಎಂದು ಪೋಸ್ಟ್ ಆಫೀಸಿನಲ್ಲಿ ಹೊಸ ನೋಟಿನಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನು ಹೇಳುತ್ತಾರೆ ಜಯನಗರ ನಿವಾಸಿ ಶ್ರೀಕಂಠಯ್ಯ.
ವಯಸ್ಸಾದವರು, ಅಂಗವಿಕಲರು ಏನು ಮಾಡಬೇಕು? ಯಾರಾದರೂ ಸತ್ತರೆ ಹಣ ಪಡೆಯಲು ಅಂಚೆ ಕಚೇರಿ, ಬ್ಯಾಂಕ್ಗಳಲ್ಲಿ ಹಣವಿಲ್ಲ. ಜನರಿಗೆ ಸ್ವಲ್ಪ ಸಮಯವನ್ನು ನೀಡಿ ವ್ಯವಸ್ಥೆ ಮಾಡಬೇಕಿತ್ತು. ಹಾಗೆ ಮಾಡಿದಿದ್ದರೆ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ ಶ್ರೀಕಂಠಯ್ಯ.[FAQ: 500, 1000 ನೋಟು ಬದಲಾವಣೆ ಬ್ಯಾಂಕ್ ನಿಯಮಗಳು]
ಪೋಸ್ಟ್ ಆಫೀಸಿನಲ್ಲಿ ತಮ್ಮ ಅಕೌಂಟ್ ಹೊಂದಿರುವವರೂ ಸಹ ಬ್ಯಾಂಕಿನಂತೆಯೇ ಆಧಾರ್, ಐಡಿ, ಮತ್ತು ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಜನರ ಪರದಾಡುತ್ತಿದ್ದು, ದಾಖಲಾತಿಯನ್ನು ಒದಗಿಸಲು ಜನರು ಮನೆಗೂ ಬ್ಯಾಂಕ್ ಪೋಸ್ಟಾಫಿಸಿಗೂ ಅಲೆದಾಡುತ್ತಿದ್ದಾರೆ.
ಬುಧವಾರ ಪೋಸ್ಟ್ ಆಫೀಸ್ಗಳು ತೆರೆದಿದ್ದರೂ ಜನರು ಎಷ್ಟೇ ಕೇಳಿಕೊಂಡರೂ ತಮಗೆ ಹಿರಿಯ ಅದಿಕಾರಿಗಳಿಂದ ಸಂದೇಶ ಬಂದಿಲ್ಲ ಎಂದು ವ್ಯವಹಾರವನ್ನೇ ನಡೆಸಿಲ್ಲ. ಮೊದಲು ಅಂಚೆ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ಮಾಡಿರುವ ಜನತೆ ಕೊನೆ ವೇಳೆಗೆ ಕೆಲವೆಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನ ಸೇವೆಗೆಂದು ಇರುವ ಅಂಚೆ ಕಚೇರಿಗಳು ಸ್ಪಂದಿಸದಿರುವುದಕ್ಕೆ ಹಿಡಿ ಶಾಪ ಹಾಕಿ ಮನೆಗೆ ಹೋಗಿದ್ದಾರೆ.[ಅಂತ್ಯ ಸಂಸ್ಕಾರದ ವೇಳೆಯೂ ಸದ್ದು ಮಾಡಿದ ನೋಟು ರದ್ದು]
ಗುರುವಾರ ಅಂಚೆ ಕಚೇರಿಯಲ್ಲಿ ನಗದು ಜಮಾ ಮಾಡಿಕೊಳ್ಳುತ್ತಿದ್ದು, ಮತ್ತೆ ವಾಪಸ್ ಹಣ ನೀಡಲು ಅವರ ಬಳಿ ಹೊಸ ಕರೆನ್ಸಿ ನೋಟುಗಳು ಪೂರೈಕೆಯಾಗಿಲ್ಲ ಎಂದಿದ್ದಾರೆ. ಇರುವ ನೂರು ರು ನೋಟುಗಳನ್ನು ನೀಡಿ ವ್ಯವಹಾರ ಮುಂದುವರೆಸಿದ್ದಾರೆ.