ರುದ್ರೇಶ್ ಕೊಲೆ ಹಿಂದೆ ಕಾರ್ಪೊರೇಟರ್ ಕೈವಾಡ?
ಬೆಂಗಳೂರು, ಅಕ್ಟೋಬರ್, 17: ಭಾನುವಾರ ನಡೆದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆಯಲ್ಲಿ ಕಾರ್ಪೊರೇಟರ್ ಒಬ್ಬರ ಪಾತ್ರವಿದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶಂಕಿತ ಕಾರ್ಪೊರೇಟರ್ ನಿವಾಸಕ್ಕೆ ಪರಿಶೀಲಿಸಲು ಹೋದಾಗ ಆತ ಆತ ಅಲ್ಲಿ ಇರಲಿಲ್ಲ. ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಪೊರೇಟರ್ ಮತ್ತು ರುದ್ರೇಶ್ ನಡುವೆ ವೈಯಕ್ತಿಕ ವೈಷಮ್ಯವಿದ್ದ ವಿಷಯ ತಿಳಿದು ಬಂದಿದ್ದು, ಘಟನೆಗೆ ಈ ಕಾರಣವೂ ಇರಬಹುದೆಂದು ಪೊಲೀಸರು ಕಾರ್ಪೊರೇಟರ್ ಮೇಲೆ ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುತ್ತಿದ್ದಾರೆ.[ರುದ್ರೇಶ್ ಕೊಲೆ ಪ್ರಕರಣ: ಭುಗಿಲೆದ್ದ ಬಿಜೆಪಿ ಆಕ್ರೋಶ]
ಘಟನೆ ಸಂಬಂಧ ರುದ್ರೇಶ್ ಅವರ ಕಾಲ್ ಡಿಟೇಲ್ಸ್ ನ್ನು ಪೊಲೀಸ್ ಸಿಬ್ಬಂದಿ ಕಲೆ ಹಾಕುತ್ತಿದ್ದಾರೆ. ಶಿವಾಜಿನಗರದ ಕಾಮರಾಜ್ ರಸ್ತೆ ಬಿಇಒ ಕಚೇರಿ ಬಳಿ ಟೀ ಅಂಗಡಿಯೊಂದರ ಮುಂದೆ ನಿಂತಿದ್ದ ರುದ್ರೇಶ್ ಅವರನ್ನು ದುರ್ಷರ್ಮಿಯೊಬ್ಬ ಮಾರಕಾಸ್ತ್ರದಿಂದ ಕೊಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]
ಘಟನಾ ಸ್ಥಳದ ಸುತ್ತಮುತ್ತಲಿನ 22 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ದುಷ್ಕರ್ಮಿಗಳು ಪಲ್ಸರ್ ಬೈಕ್ ನಲ್ಲಿ ಬಂದು ದಾಳಿ ಮಾಡಿರುವ ದೃಶ್ಯ ಸಿಸಿಟಿಯವಲ್ಲಿ ಸೆರೆಯಾಗಿದೆ.
ತನಿಖೆಗೆ ತಾಂತ್ರಿಕ ವಿಭಾಗದ ಸಹಾಯವನ್ನು ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಘಟನೆ ಸಂಬಂಧ ಸ್ಥಳೀಯರಿಂದ ಮಾಹಿತಿಯನ್ನೂ ಸಹ ಪೊಲೀಸರು ಕಲೆ ಹಾಕುತ್ತಿದ್ದಾರೆ.