ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ, ತಂದೆಯಿಂದ ಮಗಳ ಕೊಲೆ
ಬೆಂಗಳೂರು, ನವೆಂಬರ್ 23 : ರಾಜ್ಯದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಕ್ಕಪ್ಪನಹಳ್ಳಿ ಗ್ರಾಮದಲ್ಲಿ ಮರ್ಯಾದೆ ಹತ್ಯೆ ನಡೆದಿದೆ.
ಕರ್ನಾಟಕವನ್ನು ತಲ್ಲಣಿಸುವಂತೆ ಮಾಡಿರುವ ಮರ್ಯಾದಾ ಹತ್ಯೆಗಳು
15 ವರ್ಷದ ಲಕ್ಷ್ಮಿದೇವಿಯನ್ನು ಅದೇ ಗ್ರಾಮದ ಲಕ್ಷ್ಮಿನಾರಾಯಣ(20) ಪರಸ್ಪರ ಇಬ್ಬರು ಪ್ರೀತಿಸಿದ್ದರು, ಇದರಿಂದ ಆಕ್ರೋಶಗೊಂಡ ಲಕ್ಷ್ಮಿದೇವಿಯ ತಂದೆ ಚಿಕ್ಕನರಸಿಂಹಯ್ಯ ಮಗಳನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾನೆ.
ಲಕ್ಷ್ಮಿದೇವಿ ಮತ್ತು ಲಕ್ಷ್ಮಿನಾರಾಯಣ ಅನ್ಯ ಜಾತಿಯವರಾಗಿದ್ದು, ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಮಗಳು ಬೇರೆ ಯುವಕನೊಂದಿಗೆ ಹೆಚ್ಚಾಗಿ ಮಾತನಾಡುವುದನ್ನು ತಿಳಿದ ಚಿಕ್ಕನರಸಿಂಹಯ್ಯ ಬುದ್ಧಿವಾದ ಹೇಳಿ, ಯುವಕನಿಗೆ ಎಚ್ಚರಿಕೆ ನೀಡಿದ್ದ.
ಆದರೂ ಲಕ್ಷ್ಮಿದೇವಿ ಮತ್ತು ಲಕ್ಷ್ಮಿ ನಾರಾಯಣ ಅವರ ನಡುವೆ ಪ್ರೀತಿ ಮುಂದುವರೆದು ಮನೆ ಬಿಟ್ಟು ಹೋಗಿದ್ದರು. ಇದರಿಂದ ಕೆರಳಿದ ಚಿಕ್ಕನರಸಿಂಹಯ್ಯ ಮಗಳನ್ನು ಮನೆಗೆ ಕರೆದು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ಶವವನ್ನು ಸುಟ್ಟುಹಾಕಿದ್ದಾನೆ.
1 ತಿಂಗಳ ನಂತರ ಈ ವಿಚಾರ ಪೊಲೀಸರ ಗಮನಕ್ಕೆ ಬಂದು ತನಿಖೆ ನಡೆಸಿದಾಗ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.