ಪೊಲೀಸರ ಮೇಲೆ ಮಚ್ಚು ಎತ್ತಿದ ರೌಡಿಗೆ ಗುಂಡು
ಬೆಂಗಳೂರು, ನವೆಂಬರ್ 09 : ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಮಚ್ಚು ಬೀಸಿದ ರೌಡಿಗೆ ಬೆಂಗಳೂರಿನ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ಕೈದಿ ಕೈಯಲ್ಲಿ ಪೆಟ್ಟು ತಿಂದ ಪೊಲೀಸ್
ಎಲೆ ಕಲಾಲೋನಿ ವಾಸವಿದ್ದ ರೌಡಿ ಶ್ರೀನಿವಾಸ್ ಅಲಿಯಾಸ್ ಭೋಜ ನವೆಂಬರ್ 8 ರ ರಾತ್ರಿ ತನ್ನ ಸಹಚರರೊಂದಿಗೆ ಸೇರಿ ಎಲೆ ಕಾಲೋನಿಯಲ್ಲಿ ಹತ್ತಾರು ಕಾರುಗಳ ಗಾಜು ಪುಡಿ ಮಾಡಿ ದಾಂದಲೆ ನಡೆಸಿದ್ದ. ಸಾರ್ವಜನಿಕರು ನೀಡಿದ ದೂರಿನನ್ವಯ ನವೆಂಬರ್ 9 ರ ಗುರುವಾರ ಬೆಳಿಗ್ಗೆ ಪೊಲೀಸರು ಭೋಜನನ್ನು ಬಂಧಿಸಲು ತೆರಳಿದ್ದರು.
ಕುಡಿದ ಮತ್ತಿನಲ್ಲಿದ್ದ ಭೋಜ ಪೊಲೀಸರ ಮೇಲೆ ಮಚ್ಚು ಬೀಸಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಆತ್ಮರಕ್ಷಣೆಗೆಂದು ಪೊಲೀಸ್ ಇನ್ಸ್ಪೆಕ್ಟರ್ ಶೇಖರ್ ಭೋಜನ ಮೇಲೆ ಪೈರಿಂಗ್ ಮಾಡಿದ್ದಾರೆ.
ಇದೀಗ ಭೊಜನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಮುಂಚೆಯೂ ಭೋಜನ ಮೇಲೆ ಎರಡು ಕೊಲೆ ಪ್ರಕರಣಗಳು ನ್ಯಾಯಾಲಯದಲ್ಲಿದ್ದವು. ಅದಲ್ಲದೆ ಸ್ಥಳೀಯರಿಗೆ ವಿಪರೀತ ತೊಂದರೆ ಕೊಡುತ್ತಿದ್ದ ಎಂಬ ದೂರುಗಳು ಭೋಜನ ಮೇಲೆ ಕೇಳಿ ಬಂದಿದ್ದವು.