ಕ್ಯಾಬ್ ಬ್ಯಾನ್: ಬೆಂಗಳೂರು ಟ್ಯಾಕ್ಸಿ ಚಾಲಕರು ಏನಂತಾರೆ?
ಬೆಂಗಳೂರು. ಡಿ. 11 : 'ನಮ್ಮ ಹೊಟ್ಟೆ ಮೇಲೆ ಸುಮ್ಮನೆ ಹೊಡಿಬೇಡಿ, ಎಲ್ಲೋ ರೇಪ್ ಆಯ್ತು ಅಂಥ ಎಲ್ಲರೂ ಹಾಗೆ ಇರ್ತಾರಾ? ಪರಿಶಿಲನೆ, ದಾಖಲಾತಿ ಹೆಸರಲ್ಲಿ ದಿನಂಪ್ರತಿ ಠಾಣೆಗೆ ಅಲೆದಾಡಿಸಬೇಡಿ, ನೀವು ನೀಡಿರುವ ಸೂಚನೆ ಅನುಷ್ಠಾನಕ್ಕೆ ಮೊದಲು ಕ್ರಮ ತಗೊಳ್ಳಿ' ಇದು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರಿಂದ ಕೇಳಿಬಂದ ಅಭಿಪ್ರಾಯ ಜತೆಗೆ ಪೊಲೀಸ್ ಇಲಾಖೆಗೆ ಮಾಡಿಕೊಂಡ ವಿನಂತಿ.
ದೆಹಲಿ ಟ್ಯಾಕ್ಸಿ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಡಿ.31ರೊಳಗೆ ಕಡ್ಡಾಯವಾಗಿ ಡಿಸ್ಪ್ಲೇ ಕಾರ್ಡ್ ಸೇರಿದಂತೆ ಎಲ್ಲ 25 ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದೆ.[ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?]
ಆದರೆ ಸೂಚನೆಗಳ ಅನುಷ್ಠಾನ ಯಾವ ರೀತಿಯಲ್ಲಿದೆ? ಡಿಸೆಂಬರ್ 31 ರ ಡೆಡ್ ಲೈನ್ ಸರಿಯೇ? ಈ ಬಗ್ಗೆ ಚಾಲಕರು ಮತ್ತು ಮಾಲೀಕರು ಏನೆನ್ನುತ್ತಾರೆ? ಗ್ರಾಹಕರ ನಿಜ ಕಾಳಜಿಯೇನು? ಎಂಬ ಮಾಹಿತಿ ಕಲೆ ಹಾಕಿದಾಗ ಅನೇಕ ಅಂಶಗಳು ಬಹಿರಂಗವಾದವು.
'ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿರುವುದು ಸರಿ. ಆದರೆ ನಾವು ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ಕೇಳಿದರೆ ಇಂದು ಬೇಡ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಇತ್ತ ಬೇರೆ ಕಡೆ ವಾಹನಕ್ಕೆ ಕೈ ಮಾಡಿ ದಂಡನೂ ಅವರೇ ಹಾಕ್ತಾರೆ' ಎಂದು ಜಯನಗರ ಕಾಫಿ ಶಾಪ್ ಬಳಿ ನಿಂತಿದ್ದ ಚಾಲಕ ಹರಿ ಹೇಳುತ್ತಾರೆ.[ದೆಹಲಿ: ಅತ್ಯಾಚಾರಿ ಟ್ಯಾಕ್ಸಿ ಚಾಲಕ ಬಂಧನ]
'ಇವರು (ಪೊಲೀಸರು) ಅದೆಲ್ಲೋ ಮೀಟಿಂಗ್ ಮಾಡಿ ಸೂಚನೆಗಳನ್ನೇನೋ ಕೊಟ್ಟುಬಿಡ್ತಾರೆ. ಆದರೆ ಅದರ ಜಾರಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದಿನಕ್ಕೆ ಒಂದು ಸಾವಿರನೋ ಅಥವಾ ಎರಡು ಸಾವಿರನೋ ಟ್ಯಾಕ್ಸಿಗಳಿಗೆ ಮಾಹಿತಿ ನೀಡಿ ಕಾಗದ ಪತ್ರ ತಯಾರಿಸಿ ನೀಡಿದರೆ ಕೆಲಸಕ್ಕೆ ತೊಂದರೆಯಾಗಲ್ಲ. ಕಾಲಾವಕಾಶ ತುಂಬಾ ಕಡಿಮೆಯಾಯಿತು. ಇದು ಲಂಚಕ್ಕೂ ಕಾರಣವಾಗಬಹುದು' ಎಂಬುದು ತಿಲಕ್ ನಗರದ ಕ್ಯಾಬ್ ಮಾಲೀಕ ಮತ್ತು ಚಾಲಕ ಪ್ರವೀಣ್ ಅಭಿಪ್ರಾಯ.
'ಯಾರೋ ಒಬ್ಬರು ಅತ್ಯಾಚಾರ ಮಾಡಿದ್ರು ಅಂಥ ಎಲ್ಲರ ಮೇಲೆ ಕಟ್ಟಳೆ ಹೇರೋದು ತಪ್ಪು. ಅದು ಕಾನೂನಾತ್ಮಕವಾಗಿದ್ದರೆ ಒಪ್ಪಿಕೊಳ್ಳೋಣ. ಪ್ರತಿದಿನ ಠಾಣೆಗೆ ಅಲೆದಾಡಲು ಸಾಧ್ಯವಿಲ್ಲ. ವಾರದ ಕೊನೆಯಲ್ಲೋ ಅಥವಾ ನಿಗದಿತ ದಿನದಂದೋ ಕಾಗದ ಪತ್ರ ತಯಾರು ಮಾಡಲು ಅವಕಾಶಮಾಡಿಕೊಟ್ಟರೆ ಉತ್ತಮ' ಎಂದು ಮಂಡ್ಯದ ಚಾಲಕ ಲವ ಹೇಳುತ್ತಾರೆ.
'ನಮ್ಮ ಜೀವನ ನಡೆಯುತ್ತಿರುವುದೇ ಟ್ಯಾಕ್ಸಿ ಆಧಾರದಲ್ಲಿ. ಗ್ರಾಹಕರಿಗೆ ನಿಗದಿತ ಸಮಯಕ್ಕೆ ಸೇವೆ ನೀಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ದಿಢೀರ್ ಎಂದು ಕರೆಮಾಡಿ ಠಾಣೆಗೆ ಬರಲು ಹೇಳಿದರೆ ಆವತ್ತಿನ ದುಡಿಮೆ ಕಳೆದುಕೊಳ್ಳಬೇಕಾಗುತ್ತದೆ' ಎಂದು ತಮಿಳುನಾಡು ಮೂಲದ ನವೀನ್ ಆತಂಕ ತೋಡಿಕೊಳ್ಳುತ್ತಾರೆ.[ಹಗ್ಗ ಕಟ್ಟಿ ಬರಿಗೈಯಲ್ಲಿ ಟ್ಯಾಕ್ಸಿ ಎಳೆದು ಭಾರೀ ಪ್ರತಿಭಟನೆ]
ಒಂದು ಕಾಲದಿಂದ ನಿರ್ದಿಷ್ಟ ಟ್ಯಾಕ್ಸಿ ಕಂಪನಿಯನ್ನೋ ಅಥವಾ ಪರಿಚಯಸ್ಥ ಚಾಲಕನ ಬಳಿಯೋ ಸೇವೆ ಪಡೆಯುತ್ತಿದ್ದೇವೆ. ಈಗ ಏಕಾಏಕಿ ಅದನ್ನು ಬದಲಿಸಲು ಸಾಧ್ಯವಿಲ್ಲ ಅಥವಾ ಅವರ ಬಗ್ಗೆ ಅನುಮಾನ ಪಡಲು ಸಾಧ್ಯವಿಲ್ಲ. ದೆಹಲಿಯಲ್ಲಿ ಒಂದು ಘಟನೆ ನಡೆಯಿತು ಎಂದ ಮಾತ್ರಕ್ಕೆ ಎಲ್ಲರನ್ನು ದೂರಬಾರದು ಎಂದು ಸಂಜೆ ಏರ್ ಪೋರ್ಟ್ ಗೆ ತೆರಳಲಿರುವ ಕತ್ರಿಗುಪ್ಪೆಯ ನಾಗರಾಜ ಹೇಳುತ್ತಾರೆ.
ಮುಕ್ಕಾಲು ಭಾಗ ಚಾಲಕರಿಗೆ ಆನ್ ಲೈನ್ ಮೂಲಕ ಸಲ್ಲಿಕೆ ಗೊತ್ತಿಲ್ಲ. ಇಲ್ಲಿ ಕೇವಲ ಅತ್ಯಾಚಾರ ತಡೆ ಮಾತ್ರ ಮುಖ್ಯವಾಗಲ್ಲ. ಚಾಲಕ, ಮಾಲೀಕ ಮತ್ತು ಗ್ರಾಹಕರ ಹಿತವೂ ಮುಖ್ಯವಾಗುತ್ತದೆ. ಅವರ ದುಡಿಮೆಗೆ ಕಲ್ಲು ಬೀಳದಂತೆ ಯೋಜನೆ ಕಾರ್ಯಗತವಾಗಬೇಕಿದೆ.