ಗೂಂಡಾಗಿರಿ ತೋರಿದ ಕೈ ಮುಖಂಡ ನಾರಾಯಣಸ್ವಾಮಿ ಮೇಲೆ 6 ಕೇಸು
ಬೆಂಗಳೂರು, ಫೆಬ್ರವರಿ 20: ಕೆ.ಆರ್.ಪುರಂ ಬಿಬಿಎಂಪಿ ಕಚೇರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ವಿರುದ್ಧ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ಭೈರತಿ ಬಸವರಾಜು ಅವರ ಬಲಗೈ ಭಂಟ ಮತ್ತು ಮುಖ್ಯಮಂತ್ರಿಗಳಿಗೂ ಆಪ್ತ ಎನ್ನಲಾಗಿರುವ ನಾರಾಯಣಸ್ವಾಮಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಕೆ.ಆರ್.ಪುರಂ ಬಿಬಿಎಂಪಿ ಕಚೇರಿಗೆ ನುಗ್ಗಿ ಪೀಠೋಪಕರಣಗಳು, ದಾಖಲೆಗಳಿಡಲಾಗಿದ್ದ ಬೀರು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿದ್ದರು, ಇವರ ಈ ದುರ್ವರ್ತನೆಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಾಂಗ್ರೆಸ್ನಿಂದ ನಾರಾಯಣಸ್ವಾಮಿ ಉಚ್ಚಾಟನೆ
ನಾರಾಯಣಸ್ವಾಮಿ ಅವರು ವರ್ತನೆ ಕುರಿತು ವಿಧಾನಸಭಾ ಕಲಾಪದಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದ್ದರು, ಆಗ ಮುಖ್ಯಮಂತ್ರಿಗಳೇ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು.
ವಿಡಿಯೋ ವೈರಲ್ ಆದ ಬಳಿಕ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ನಾರಾಯಣಸ್ವಾಮಿ ವಿರುದ್ಧ ಐಪಿಸಿ ಕಾಯ್ದೆ 353, 427, 341, 504 ಮತ್ತು 506 ಅಡಿಯಲ್ಲಿ ಕೇಸು ಜಡಿದಿದ್ದಾರೆ.
ಪ್ರಸ್ತುತ ಆರೋಪಿ ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದು, ಆತನ ಮೊಬೈಲ್ ಕೂಡ ಸ್ವಿಚ್ಆಫ್ ಆಗಿದೆ. ನಾರಾಯಣಸ್ವಾಮಿಯನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷವು ನಾರಾಯಣಸ್ವಾಮಿ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಉಚ್ಛಾಟನೆ ಮಾಡಿದೆ.