ಗಾಂಜಾ ಮಾರುತ್ತಿದ್ದವನ ಬಂಧಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು, ನವೆಂಬರ್ 7 : ನಗರದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ನವೆಂಬರ್ 6ರ ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಮಾರಾಟ ಜಾಲ ನಿರ್ವಹಿಸುತ್ತಿದ್ದ ವಿಕ್ರಮನ್ ನಾಯರ್ ಅಲಿಯಾಸ್ ವಿಜಯನ್ (28) ಎಂಬುವನನ್ನು ಬಿಂಧಿಸಿದ್ದಾರೆ.
ಕನ್ನಡ ಸಿನಿ ನಟರ ಡ್ರಗ್ಸ್ ಚಟ ಬಯಲು ಮಾಡಿತೇ ಈ ಅಪಘಾತ ಪ್ರಕರಣ?
ಇಂದಿರಾನಗರ ಠಾಣಾ ಸರಿಹದ್ದಿಗೆ ಸೇರುವ ಎಚ್.ಎ.ಎಲ್ 2ನೇ ಹಂತ, ಡಬಲ್ ರಸ್ತೆಯ, 11ನೇ ಮುಖ್ಯ ರಸ್ತೆಯಲ್ಲಿರುವ ಯಮಹಾ ಥಾಮ್ಸನ್ ಮ್ಯೂಸಿಕ್ ವರ್ಲ್ಡ್ ನ ಮುಂಭಾಗ ಗಾಂಜಾ ದಂದೆಯಲ್ಲಿ ತೊಡಗಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 1 ಕೆ.ಜಿ ಗಾಂಜಾ, ಮೊಬೈಲ್ ಫೋನ್, ನಗದು ಹಣ, ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ 90000 ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮೂಲಕ ವಿಜಯನ್ ಬೆಂಗಳೂರಿನ ಪರಶುರಾಮ ಗಾರ್ಡನ್ಸ್, ಅಲಸೂರಿನಲ್ಲಿ ವಾಸವಿದ್ದಕೊಂಡು ಗಾಂಜಾ ದಂಧೆ ನಡೆಸುತ್ತಿದ್ದ.
ಆರೋಪಿಯು ವ್ಯವಸ್ಥಿತ ರೀತಿಯಲ್ಲಿ ಗಾಂಜಾ ಖರೀದಿ ಮಾಡಿಕೊಂಡು ಬಂದು ಅದಕ್ಕೆ ಮತ್ತಷ್ಟು ಅಮಲು ಪದಾರ್ಥಗಳನ್ನು ಬೆರೆಸಿ ತನ್ನ ಪರಿಚಿತರಿಗೆ ಮಾರಾಟ ಮಾಡುತ್ತಿದ್ದ. ಮಾರಾಟದ ಪ್ರಕ್ರಿಯೆಗೆ ಈತ ಮತ್ತೊಬ್ಬ ಸಹಚರನನ್ನು ಬಳಸಿಕೊಳ್ಳುತ್ತಿದ್ದ ಆದರೆ ಪೊಲೀಸರ ದಾಳಿಯ ವೇಳೆ ಆತ ತಪ್ಪಿಸಿಕೊಂಡಿದ್ದು ಆತನಿಗಾಗಿ ಇಂದಿರಾ ನಗರ ಪೊಲೀಸರು ಬಲೆ ಬೀಸಿದ್ದಾರೆ.