ನಂದಿಗಿರಿಧಾಮ ಇನ್ನು ಪ್ಲಾಸ್ಟಿಕ್ ಮುಕ್ತ, ಪರಿಸರ ಸ್ನೇಹಿ ವಾಹನ ಸಂಚಾರ
ಬೆಂಗಳೂರು ಗ್ರಾಮಾಂತರ, ಅಕ್ಟೋಬರ್ 5: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ನಂಧಿ ಗಿರಿಧಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ಕೂಡ ನಡೆಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಂದಿ ಗಿರಿಧಾಮದ ನೆಹರೂ ನಿಲಯದಲ್ಲಿ ಅಧಿಕಾರಿಗಳ ಜತೆಗೆ ಪ್ರವಾಸೋದ್ಯಮ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಇರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.[ಬೆರಳ ತುದಿಯಲ್ಲಿ ಚಿತ್ತಾಕರ್ಷಕ ನಂದಿಗಿರಿಧಾಮ]
'ನಂದಿ ಲೆಜೆಂಡ್ ಸರ್ಕೀಟ್' ಎಂಬ ಹೆಸರಿನಲ್ಲಿ ಧಾರ್ಮಿಕ, ಪ್ರಾಕೃತಿಕ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರ ಆಕರ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಿಂದ ಪ್ರಕೃತಿಯ ಮೇಲೂ ಯಾವುದೇ ಹಾನಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ನಂದಿಗಿರಿಧಾಮಕ್ಕೆ ವಾಹನ ನಿಷೇಧಿಸುವುದು, ಗಿರಿಧಾಮದ ಪ್ರದೇಶದಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸುವಂಥ ಮಹತ್ವದ ಯೋಜನೆಗಳು ಚರ್ಚೆಯಲ್ಲಿವೆ, ಗಿರಿಧಾಮದ ತಪ್ಪಲಿನಿಂದ ಮೇಲಕ್ಕೆ ಪರಿಸರ ಸ್ನೇಹಿ ವಾಹನಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲೂ ಚಿಂತನೆ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.[ನಂದಿ ಬೆಟ್ಟದಲ್ಲಿ ಗಿಡ ನೆಟ್ಟ ಯುನೈಟೆಡ್ ವೇ ಬೆಂಗಳೂರು]
ಇನ್ನು ಗೌರಿಬಿದನೂರು ತಾಲೂಕಿನಲ್ಲಿರುವ, 'ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್' ಎಂದೇ ಖ್ಯಾತಿ ಪಡೆದಿರುವ ವಿದುರಾಶ್ವತ್ಥದಲ್ಲಿ ಧ್ವನಿ, ಬೆಳಕು ಪ್ರದರ್ಶನಾಲಯ, ಇದೇ ತಾಲೂಕಿನ ಕುಡುಮಲುಕುಂಟೆ ಕೈಗಾರಿಕಾ ಪ್ರದೇಶದಲ್ಲಿ ವಿಜ್ಞಾನ ವಸ್ತು ಪ್ರದರ್ಶನಾಲಯ ಮತ್ತು ವಿಶ್ವೇಶ್ವರಯ್ಯ ಮ್ಯೂಸಿಯಂ ನಿರ್ಮಾಣಕ್ಕಾಗಿ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಸಂಸತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಇತಿಹಾಸ ಪ್ರಸಿದ್ಧ ತಾಣಗಳನ್ನು ಪ್ರವಾಸಿ ತಾಣಗಳಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಕ್ರಮಗಳ ಕುರಿತು ಈಗಾಗಲೇ ಪ್ರವಾಸೋಧ್ಯಮ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಆದಷ್ಟು ಶೀಘ್ರದಲ್ಲಿ ಇವುಗಳ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.[ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್]
ಬೆಂಗಳೂರು ಗ್ರಾಮಾಂತರ ಜ್ಲಿಲೆಯ ಕೆಂಪೇಗೌಡ ಜನ್ಮಸ್ಥಳ ಆವತಿ, ಟಿಪ್ಪುಸುಲ್ತಾನ್ ಜನ್ಮಸ್ಥಳ ದೇವನಹಳ್ಳಿ, ಘಾಟಿ ಸುಬ್ರಹ್ಮಣ್ಯ, ಬಾಗೇಪಲ್ಲಿ ತಾಲೂಕಿನ ಗುಮ್ಮನಾಯಕನಪಾಳ್ಯ, ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ, ರಂಗಸ್ಥಳ, ಸೇರಿದಂತೆ ಅನೇಕ ಸ್ಥಳಗಳ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸಲಾಗಿದೆ ಎಂದರು.