ಪಿಚ್ ಟು ದಿ ಗವರ್ನ್ ಮೆಂಟ್’- ಹ್ಯಾಕಥಾನ್ ಸ್ಪರ್ಧಾ ಕಾರ್ಯಕ್ರಮ
ಬೆಂಗಳೂರು ಸೆಪ್ಟೆಂಬರ್ 16: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನವ್ಯೋದ್ಯಮಗಳಿಂದ ತಂತ್ರಜ್ಞಾನ ಪಡೆದುಕೊಳ್ಳುವ '
ಪಿಚ್ ಟು ದಿ ಗವರ್ನ್ ಮೆಂಟ್'- ಎಂಬ ಹ್ಯಾಕಥಾನ್ ಸ್ಪರ್ಧಾ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರವು ಹಮ್ಮಿಕೊಂಡಿದೆ.
ಪ್ರವಾಸೋದ್ಯಮ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವ್ಯೋದ್ಯಮಗಳಿಂದ ನವನವೀನ ಪರಿಹಾರಗಳು ಮತ್ತು ಉತ್ಪನ್ನಗಳನ್ನು ಸಮೂಹ-ಸಂಪನ್ಮೂಲವಾಗಿಸಲು (crowd-source) ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ಕೆಬಿಟ್ಸ್ ಸಂಸ್ಥೆಯ ಕರ್ನಾಟಕ ಸ್ಟಾರ್ಟ್ ಅಪ್ ಕೋಶದ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವಾದ 27, ಸೆಪ್ಟೆಂಬರ್ 2016 ಸಂದರ್ಭಕ್ಕೆ ಮುಕ್ತ ಸವಾಲಿನ ಸ್ಪರ್ಧೆ ಆಯೋಜಿಸುತ್ತಿದೆ.
ವಿಶ್ವದ 15 ಮೇರು ನವ್ಯೋದ್ಯಮ ಪರ್ಯಾವರಣಗಳಲ್ಲಿ ಭಾರತದ ಏಕೈಕ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಭಾರತದ ಮೊಟ್ಟಮೊದಲ ಬಹುವಲಯ ನವ್ಯೋದ್ಯಮ ನೀತಿಯನ್ನು ಕಳೆದ ವರ್ಷ ರಾಜ್ಯ ಸರ್ಕಾರವು ಘೋಷಿಸಿದ್ದು, ಈವರೆಗೆ ರಾಜ್ಯದಲ್ಲಿ ನಾವೀನ್ಯತೆ ಪ್ರೇರಿತ ನವ್ಯೋದ್ಯಮವನ್ನು ಪ್ರೋತ್ಸಾಹಿಸಲು ಅನೇಕ ಉಪಕ್ರಮಗಳನ್ನು ಪ್ರಾರಂಭಿಸಿದೆ.
ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಪ್ರವರ್ತಕವಾಗಿರುವ ಸಂಪ್ರದಾಯಕ್ಕೆ ತಕ್ಕಂತೆ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಉತ್ಪನ್ನ/ ಪರಿಹಾರಗಳನ್ನು ಅಳವಡಿಸಿಕೊಂಡು ಜಾರಿಗೊಳಿಸಲು ರಾಜ್ಯ ಸರ್ಕಾರವು ಪೂರ್ವಹಂತದ ಸ್ಟಾರ್ಟ್ ಅಪ್ ಗಳಿಂದ ಅಂತಹ ಉತ್ಪನ್ನ/ ಪರಿಹಾರಗಳನ್ನು ಪ್ರಸ್ತುತಪಡಿಸಲು ಪ್ರಸ್ತಾವನೆಗಳನ್ನು ಆಮಂತ್ರಿಸುತ್ತಿದೆ.
ಪ್ರವಾಸೋದ್ಯಮಕ್ಕೆ ಸೌಲಭ್ಯ ಒದಗಿಸುವ ಹಾಗೂ ಅದನ್ನು ಪ್ರೋತ್ಸಾಹಿಸುವ ಉತ್ಪನ್ನಗಳು ಹಾಗೂ ಅನ್ವಯಿಕೆಗಳಿರುವ ನವ್ಯೋದ್ಯಮಗಳು ಸ್ಟಾರ್ಟ್ ಅಪ್ ಕರ್ನಾಟಕ http://www.startup.karnataka.gov.in/events ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಗೊಳ್ಳುವ 3 ಅತ್ಯುತ್ತಮ ನವ್ಯೋದ್ಯಮಗಳು ಕರ್ನಾಟಕ ಸರ್ಕಾರದ ಐಡಿಯಾ2ಪಿಓಸಿ ಅನುದಾನಕ್ಕಾಗಿ ಅರ್ಹರಾಗುತ್ತಾರೆ. ಉತ್ಪನ್ನವೊಂದನ್ನು ಅದರ ಪ್ರಾರಂಭಿಕ ಹಂತದಿಂದ ಅಭಿವೃದ್ಧಿಪಡಿಸಲು ಈ ಅನುದಾನದಡಿಯಲ್ಲಿ ರೂ.50.00 ಲಕ್ಷಗಳವರೆಗೆ ಹಣಕಾಸು ಬೆಂಬಲ ಒದಗಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು 'ಇಂತಹ ಉಪಕ್ರಮವು ದೇಶದಲ್ಲೇ ಪ್ರಪ್ರಥಮ ರೀತಿಯದ್ದಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸ್ಟಾರ್ಟ್ ಅಪ್ ಗಳಿಗೆ ತಮ್ಮ ತಂತ್ರಜ್ಞಾನ ಪರಿಹಾರಗಳನ್ನು ಪ್ರದರ್ಶಿಸಲು ಹಾಗೂ ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಸರ್ಕಾರದ ಕಾರ್ಯದೊಳಗೆ ಮತ್ತು ಕೈಗಾರಿಕಾ ತಜ್ಞರ ತಂಡದೊಗೆ ಸೇರಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಅಥವಾ ಪ್ರವಾಸಿಗರ ಅನುಭವಕ್ಕೆ ಪ್ರೇರಕವಾಗಲು ಕೆಲವು ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಬಹುದೆಂದು ನಾನು ಆಶಿಸುತ್ತೇನೆಂದು ಸಚಿವರು ತಿಳಿಸಿದ್ದಾರೆ.