ಪಿಂಕ್ ಹೊಯ್ಸಳ: ಮಹಿಳಾ ರಕ್ಷಣೆಯತ್ತ ದಿಟ್ಟ ಹೆಜ್ಜೆ
ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ನಡೆಯುತ್ತಿರುವ ಮಹಿಳಾ ದೌರ್ಜನ್ಯವನ್ನು ನಿಯಂತ್ರಿಸುವುದಕ್ಕಾಗಿ 'ಪಿಂಕ್ ಹೊಯ್ಸಳ' ಎಂಬ ಹೊಸ ಸೌಲಭ್ಯವನ್ನು ರಾಜ್ಯ ಸರ್ಕಾರ ಪರಿಚಯಿಸಿದೆ.
ಬೆಂಗಳೂರು, ಏಪ್ರಿಲ್ 10: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಪಿಂಕ್ ಹೊಯ್ಸಳ ಪಡೆಯನ್ನು ನಿಯೋಜಿಸಲಿದೆ.
ಮಹಿಳಾ ರಕ್ಷಣೆಗಾಗಿ 51 ಪಿಂಕ್ ಹೊಯ್ಸಳ ವಾಹನಗಳನ್ನು, ಸುರಕ್ಷಾ ಎಂಬ ಆಪ್ ಅನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಮಹಿಳಾ ರಕ್ಷಣೆಯತ್ತ ಸರ್ಕಾರದ ದಿಟ್ಟ ಹೆಜ್ಜೆ ಎಂದಿದ್ದಾರೆ. ಲಂಡನ್ ಮಾದರಿಯ ಈ ಸೌಲಭ್ಯವನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿದ್ದು, ರಾಜಧಾನಿಯಲ್ಲಿ ಹೆಣ್ಣು ಮಕ್ಕಳು ಇನ್ನುಮುಂದೆ ನಿರ್ಭಯವಾಗಿ ಓಡಾಡಬಹುದಾದ ವಾತಾವರಣ ಸೃಷ್ಟಿಯಾಗಲಿದೆ ಎಂದು ಸರ್ಕಾರ ಹೇಳಿದೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]
|
ರಸ್ತೆಗಿಳಿದ ಗುಲಾಬಿ ಪಡೆ
ಇಂದು (ಏಪ್ರಿಲ್ 10) ಬೆಳಗ್ಗೆ ವಿಧಾನ ಸೌಧದ ಮುಂಭಾಗದಲ್ಲಿ 51 ಪಿಂಕ್ ಹೊಯ್ಸಳ ವಾಹನಗಳಿಗೆ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನಗಳನ್ನು ಪಿಂಕ್ ಹೊಯ್ಸಳ ಸೇವೆಗೆ ಕಳಿಸುವ ಉದ್ದೇಶ ಇರುವುದಾಗಿ ಸರ್ಕಾರ ಹೇಳಿದೆ.
ಸಿಬ್ಬಂದಿಗಳೂ ಮಹಿಳೆಯರೇ
ಡಯಲ್ -100 ಮತ್ತು ಸುರಕ್ಷಾ ಆಪ್ ಗಳಿಗೆ ಬರುವ ದೂರುಗಳಿಗೆ ಪಿಂಕ್ ಹೊಯ್ಸಳ ಸಿಬ್ಬಂದಿಗಳು ಶೀಘ್ರವಾಗಿ ಸ್ಪಂದಿಸಲಿದ್ದಾರೆ. ಕರೆ ಬಂದ 15 ನಿಮಿಷಗಳಲ್ಲಿ ರಕ್ಷಣೆಯ ಅಗತ್ಯವಿರುವ ಸ್ಥಳಕ್ಕೆ ಪಿಂಕ್ ಹೊಯ್ಸಳ ತಲುಪಿರುತ್ತದೆ! ಇವುಗಳ ಉಸ್ತುವಾರಿಯನ್ನು ಮಹಿಳಾ ಅಧಿಕಾರಿಗಳೇ ವಹಿಸಲಿದ್ದು, ಮಹಿಳೆಯರು ಮುಜುಗರ ಪಟ್ಟುಕೊಳ್ಳುವ ಅಗತ್ಯವೂ ಇರುವುದಿಲ್ಲ.[ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಡ್ಯಾನ್ಸ್ ಅಧ್ಯಾಪಕನಿಂದ ಅತ್ಯಾಚಾರ]
ಸುರಕ್ಷಾ ಆಪ್ ವಿಶೇಷತೆ
ಮಹಿಳೆಯರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಸುರಕ್ಷಾ ಆಪ್ ಡೌನ್ ಲೋಡ್ ಮಾಡಿಕೊಂಡು, ಅದರಲ್ಲಿ ತಮ್ಮ ಹೆಸರು, ವಿಳಾಸ ನಮೂದಿಸಬೇಕು. ಜೊತೆಗೆ ತುರ್ತುಸಮಯದಲ್ಲಿ ಸಂಪರ್ಕಿಸಬೇಕಾದ ಪೋಷಕರ, ಪತಿ, ಸ್ನೇಹಿತ, ಬಂಧು, ಯಾರಾದರೂ ಇಬ್ಬರ ಹೆಸರು ಮತ್ತು ಫೋನ್ ನಂಬರ್ ಅನ್ನು ದಾಖಲಿಸಿದರೆ ನಿಮ್ಮ ಫೋನಿಗೆ ಒಂದು ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬರುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ಹೆಸರು ರಿಜಿಸ್ಟರ್ ಆದಂತೆ. ತೊಂದರೆ ಎದುರಾದಾಗ ಆ ಆಪ್ ನಲ್ಲಿ ಕಾಣುವ ಕೆಂಪು ಬಟನ್ ಅನ್ನು ಅಥವಾ ನಿಮ್ಮ ಮೊಬೈಲ್ ನ ಪವರ್ ಬಟನ್ ಅನ್ನು 5 ಬಾರಿ ಒತ್ತಿದರೆ ಪೊಲೀಸರಿಗೆ, ನೀವು ದಾಖಲಿಸಿದ ಸಂಬಂಧಿಕರ ನಂಬರಿಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ.
ಲಂಡನ್ ಮಾದರಿ
ಇತ್ತೀಚೆಗೆ ಲಂಡನ್ನಿನಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಕುರಿತು ಕಾರ್ಯಾಗಾರವೊಂದು ನಡೆದಿತ್ತು. ಅದರಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಕರ್ನಾಟಕದ ಕೆಲ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಲಂಡನ್ನಿನಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಯಾವೆಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಂಡ ಬೆಂಗಳೂರಿನ ಪೊಲೀಸರು ಅದೇ ಮಾದರಿಯನ್ನು ರಾಜಧಾನಿಯಲ್ಲೂ ಜಾರಿಗೆ ತರಲು ನಿರ್ಧರಿಸಿದ್ದಾರೆ. ಅದರ ಫಲವೇ ಪಿಂಕ್ ಹೊಯ್ಸಳ.
ಲೈವ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ
ಡಯಲ್ 100 ಮತ್ತು ಸುರಕ್ಷಾ ಆಪ್ ಗಳಿಗೆ ಬರುವ ದೂರುಗಳನ್ನು ಸ್ವೀಕರಿಸುವ ಸಿಬ್ಬಂದಿ ತೊಂದರೆಯಲ್ಲಿರುವ ವ್ಯಕ್ತಿ ಇರುವ ಸ್ಥಳವನ್ನು ಲೈವ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಂ ಮೂಲಕ ಪತ್ತೆ ಮಾಡಿ ಅವರ ಪಾಲಕರಿಗೆ ಅಥವಾ ಬಂಧುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಾರೆ. ಇದರ ಜೊತೆಗೆ ಅಷ್ಟೇ ಶೀಘ್ರವಾಗಿ ರಕ್ಷಣೆಯ ಅಗತ್ಯವಿರುವ ವ್ಯಕ್ತಿಗೆ ಹತ್ತಿರದಲ್ಲಿರುವ ಪಿಂಕ್ ಹೊಯ್ಸಳ ವಾಹನ ಯಾವುದೆಂದು ಪತ್ತೆ ಮಾಡಿ ಅವರಿಗೂ ಮಾಹಿತಿ ರವಾನಿಸಲಾಗುತ್ತದೆ.[ಬೆಂಗಳೂರಿನಲ್ಲಿ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ]