ಪಿಂಕ್ ಹೊಯ್ಸಳ ಚುರುಕು ಕಾರ್ಯಾಚರಣೆ: ಹತ್ತೇ ನಿಮಿಷದಲ್ಲಿ ಕಾಮುಕ ಬಂಧನ
ಬೆಂಗಳೂರು, ಮೇ 13: ಕಾಮುಕನ ಕುಚೇಷ್ಟೆಗಳಿಗೆ ಬೇಸತ್ತಿದ್ದ ಯುವತಿಯೊಬ್ಬಳಿಂದ ದೂರು ಬಂದ ಕೂಡಲೇ ಕಾರ್ಯಾಚರಣೆಗೆ ಇಳಿದ ಪಿಂಕ್ ಹೊಯ್ಸಳ ಸಿಬ್ಬಂದಿ ದೂರು ಬಂದ ಹತ್ತೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಬೀದಿ ಕಾಮಣ್ಣರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಬಂಧಿತನ ಹೆಸರು ಮಧುಸೂಧನ್ ರಾವ್ (47).
ಉದ್ಯೋಗಿ ಮಹಿಳೆಯೊಬ್ಬರು ತಮ್ಮ ಕಂಪನಿಯಿಂದ ಕೆಲಸ ಮುಗಿಸಿಕೊಂಡು ವೈಟ್ ಫೀಲ್ಡ್ ವ್ಯಾಪ್ತಿಗೆ ಬರುವ ಬಿಎಂಟಿಸಿ ಬಸ್ ನಿಲ್ದಾಣವೊಂದರಿಂದ ಬಿಎಂಟಿಸಿ ವೋಲ್ವೇ ಬಸ್ ಹತ್ತಿದ್ದಾರೆ.
ಯುವತಿ ಕುಳಿತಿದ್ದ ಸೀಟಿನ ಹಿಂದಿನ ಆಸನದಲ್ಲಿದ್ದ ಮಧುಸೂಧನ್, ಬಸ್ ಚಲಿಸಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ತನ್ನ ಚೇಷ್ಟೆ ಶುರುವಿಟ್ಟುಕೊಂಡಿದ್ದಾನೆ.
ಯುವತಿಯ ಮೈ ಮುಟ್ಟುವುದು ಮುಂತಾದ ಚೇಷ್ಟೆಗಳಿಂದ ಆಕೆಗೆ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತ ಯುವತಿ, ತಕ್ಷಣವೇ ಬೆಳ್ಳಂದೂರು ಪೊಲೀಸ್ ಠಾಣೆಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಿದ್ದಾಳೆ.
ಯುವತಿ ನೀಡಿ ಮಾಹಿತಿಯ ಮೇರೆಗೆ ತಕ್ಷಣವೇ ಕಾರ್ಯ ಪ್ರವೃತ್ತರಾದ ಪಿಂಕ್ ಹೊಯ್ಸಳ, ಯುವತಿ ಸಾಗುತ್ತಿದ್ದ ಬಿಎಂಟಿಸಿ ಬಸ್ ಅನ್ನು ಗುರುತಿಸಿ ಅದನ್ನು ಚೇಸ್ ಮಾಡಿ ಹೋಗಿ, ಬಸ್ ನಿಲ್ಲಿಸಿದ್ದಲ್ಲದೆ, ಬಸ್ ಪ್ರವೇಶಿಸಿ ಕಾಮುಕ ಮಧುಸೂಧನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹೀಗೆ, ಯುವತಿಗೆ ಕಾಟ ಕೊಟ್ಟಿದ್ದ ಆ ಕಾಮಣ್ಣ, ಪಿಂಕ್ ಹೊಯ್ಸಳದ ಕಾನ್ ಸ್ಟೇಬಲ್ ಗಳಾದ ಬಿ. ಮಹೇಶ್, ಬಿ. ಪವಿತ್ರಾ, ಆರಿಫ್ ಪಾಷಾ ಅವರ ಅತಿಥಿಯಾಗಿದ್ದಾನೆ. ಈತನನ್ನು ವಿಚಾರಣೆಗೊಳಪಡಿಸಲಾಗಿದ್ದು, ಈತ ಬೆಳ್ಳಂದೂರಿನಲ್ಲಿ ವೈಟ್ ಫೀಲ್ಡ್ ನ ಕಂಪನಿಯೊಂದರಲ್ಲಿ ಉದ್ಯೋಗಿ ಎಂದು ತಿಳಿದುಬಂದಿದೆ.