ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ
ಬೆಂಗಳೂರು, ಡಿ. 27: ಡಾ. ರಾಜ್ಕುಮಾರ್ ನಂತರ ಕರ್ನಾಟಕ ಕಂಡ ಮತ್ತೋರ್ವ ಮೇರು ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಭಾರತೀ ವಿಷ್ಣುವರ್ಧನ್ ಹೇಳಿದ್ದರು. ಆದರೆ, ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ ಎದುರಾಗಿದೆ.
ಕೆಂಗೇರಿ ಬಳಿಯ ಮೈಲಸಂದ್ರದ ಸರ್ವೆ ನಂ. 22ರ ಎರಡು ಎಕರೆ ಜಾಗದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಈ ಜಾಗ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಬಫರ್ ವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಪರಿಸರ ಪ್ರೇಮಿ ಆರ್. ಶರತ್ಬಾಬು ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. [ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿ ಬಂತು]
ಶರತ್ಬಾಬು ವಾದವೇನು? : ರಾಜ್ಯ ಅರಣ್ಯ ಕಾಯ್ದೆ ಸೆಕ್ಷನ್ 41 ಹಾಗೂ 41(2) ಪ್ರಕಾರ ಮೀಸಲು ಅರಣ್ಯ ಪ್ರದೇಶವಿರುವ ಜಾಗದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ.
ಈಗ ನಿಗದಿಪಡಿಸಿರುವ ಪ್ರದೇಶ ಕೆಂಗೇರಿ ಹೋಬಳಿಯ ಸರ್ವೆ ನಂ. 22ಕ್ಕೆ ಹೊಂದಿಕೊಂಡಿದೆ. ಇಲ್ಲಿಯ 79.2 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಿ 2014ರ ಫೆ. 28ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಪ್ರದೇಶಕ್ಕೆ ಹೊಂದಿಕೊಂಡಿರುವ 2 ಎಕರೆ ಜಾಗವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತದೆ. ಇಲ್ಲಿ ವೈವಿಧ್ಯಮಯ ಸಸ್ಯ ನೆಡಲು ಹಾಗೂ ಸಂಶೋಧನೆಗೆ ಅವಕಾಶವಿದೆ. [ವಿಷ್ಣು ಸ್ಮಾರಕಕ್ಕೆ ಭೂಮಿ ಹಸ್ತಾಂತರ]
ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಇದೇ ಪ್ರದೇಶವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಮಾರ್ಚ್ 4ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಈ ಜಾಗ ಮೀಸಲು ಅರಣ್ಯ ಪ್ರದೇಶದ 100 ಮೀ. ವ್ಯಾಪ್ತಿಯೊಳಗೆ ಬರುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕೆಂದು ಶರತ್ಬಾಬು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಅರ್ಜಿ ಕುರಿತು ವಿಚಾರಣೆಯನ್ನು ಹೈ ಕೋರ್ಟ್ ಡಿ. 30ಕ್ಕೆ ಮುಂದೂಡಿದೆ. ಆದರೆ, ನಿಗದಿತ ದಿನದಂದೇ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಸರ್ಕಾರ ಹಾಗೂ ಬಿಬಿಎಂಪಿ ನಿರ್ಧರಿಸಿದೆ.