'ನಾವು ಮನುಷ್ಯರು, ನಮ್ಮನ್ನು ಘನತೆಯಿಂದ ಬದುಕಲು ಬಿಡಿ'
ಬೆಂಗಳೂರು, ನವೆಂಬರ್. 23: 'ನಾವು ಮನುಷ್ಯರು. ಘನತೆ, ಗೌರವದಿಂದ ಬದುಕಲು ಬಿಡಿ, ಸಲ್ಲದ ಕಾನೂನು ಹೇರಿ ಬದುಕುವ ಹಕ್ಕು ಕಸಿದುಕೊಳ್ಳಬೇಡಿ' ಎಂಬ ಘೋಷಣೆಗಳು ಬೆಂಗಳೂರಿನಲ್ಲಿ ಮಾರ್ದನಿಸಿದವು.
'ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ'ದ ಅಂಗವಾಗಿ ಆಯೋಜಿಸಿದ್ದ ಈ ಮೆರವಣಿಗೆಯಲ್ಲಿ, ದೇಶದ ನಾನಾ ಭಾಗಗಳ ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಭಾಗವಹಿಸಿ ಸರ್ಕಾರಕ್ಕೆ ತಮ್ಮ ಬೇಡಿಕೆ ಮತ್ತು ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟರು.
ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಘನತೆಯ ಬದುಕಿನ ಹಕ್ಕಿಗೆ ಆಗ್ರಹಿಸಿ, ತುಳಸಿ ತೋಟದಿಂದ (ಚಿಕ್ಕ ಲಾಲ್ಬಾಗ್) ನಗರದ ಪುರಭವನದವರೆಗೆ ಮೆರವಣಿಗೆಯಲ್ಲಿ ತೆರಳಿದರು. [ಸಲಿಂಗಕಾಮ ರೋಗದ ಲಕ್ಷಣವಲ್ಲ]
ಭಾರತೀಯ ದಂಡ ಸಂಹಿತೆ ಕಲಂ 377 ಅನ್ನು ರದ್ದು ಮಾಡಬೇಕು. ದಾಖಲು ಮಾಡಿರುವ ಸುಳ್ಳು ಪ್ರಕರಣ ಹಿಂದಕ್ಕೆ ಪಡೆಯಬೇಕು. ಸಲಿಂಗ ಕಾಮ ಅಪರಾಧ ಎನ್ನುವ ಬಗೆಯ ಕಾನೂನುಗಳು ಸಂಪೂರ್ಣವಾಗಿ ಮಾಯವಾಗಬೇಕು ಎಂದು ಆಗ್ರಹಿಸಿದರು.
ನಮಗೂ ಜೀವನವಿದೆ
ಎಲ್ ಜಿಬಿಟಿ ಒಕ್ಕೂಟದ ಸಹ ಸಂಸ್ಥಾಪಕರಾದ ಅಕ್ಕೈ ಪದ್ಮಸಾಲಿ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ನಿಕೃಷ್ಟವಾಗಿ ಕಾಣುವುದನ್ನು ನಿಲ್ಲಿಸಬೇಕು. ಐಪಿಸಿ ಕಲಂ 377 ನ್ನು ತೆಗೆದು ಹಾಕಿದರೆ ನಮ್ಮ ಹೋರಾಟಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಕಾಯ್ದೆ ರದ್ದು ಮಾಡಿ
ಲೈಂಗಿಕ ಅಲ್ಪಸಂಖ್ಯಾತರ ಮೇಲೆ ನಿಗಾ ಇಡುವ ಕರ್ನಾಟಕ ಪೊಲೀಸ್ ಕಾಯ್ದೆ- 36(ಎ) ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುವಂತಿದೆ. ಇದರ ನೆರವು ಪಡೆದುಕೊಳ್ಳುವ ಪೊಲೀಸರು ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.
2008 ರಿಂದ ಆರಂಭ
ಬೆಂಗಳೂರು ಮೂಲದ ಸಿಎಸ್ಎಂಆರ್ ಸಂಸ್ಥೆ ಮೆರವಣಿಗೆ ಆಯೋಜಿಸಿತರ್ತು. ಸಲಿಂಗಿ, ಉಭಯಲಿಂಗಿ, ತೃತೀಯ ಲಿಂಗಿ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧಿಕ ಸಂಘಟನೆ 2008ರಿಂದ 'ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ'ವನ್ನು ಆಚರಿಸಿಕೊಂಡು ಬರುತ್ತಿದೆ.
ನಮ್ಮ ಅಭಿಪ್ರಾಯಕ್ಕೆ ಬೆಲೆ ಇಲ್ಲ
ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಯಾವುದೇ ಕರಡು ಮಾಡುವ ಮುನ್ನ ಸರ್ಕಾರಗಳು ನಮ್ಮ ಅಭಿಪ್ರಾಯ ಪಡೆಯದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿವೆ. ಕಾನೂನು ನಮ್ಮ ವಿರುದ್ಧ ನಿರ್ಮಾಣವಾಗುತ್ತಿರುವುದಕ್ಕೆ ಇದೇ ಮೂಲ ಕಾರಣ ಎಂದು ಆರೋಪಿಸಿದರು.