ಕನ್ನಡಿಗರೇ ಸಂಕ್ರಾಂತಿ ಚಳಿ ಎದುರಿಸಲು ಸಿದ್ಧರಾಗಿ
ಬೆಂಗಳೂರು, ಜ, 12: ಬೆಳಗ್ಗೆ ಹಾಸಿಗೆ ಬಿಟ್ಟು ಏಳಲು ಮನಸ್ಸಾಗುವುದೇ ಇಲ್ಲ. ಗಂಟೆ 9 ಆದರೂ ಸೂರ್ಯ ಸರಿಯಾಗಿ ಕಣ್ಣು ಬಿಟ್ಟಿರಲ್ಲ. ಅಂತೂ ಹಾಸಿಗೆ ಬಿಟ್ಟು ಎದ್ದು ಟ್ರಾಫಿಕ್ ತಪ್ಪಿಸಿಕೊಂಡು ಕಚೇರಿಗೆ ತೆರಳುವುದರೊಳಗೆ ಸಾಕು ಸಾಕಾಗಿ ಹೋಗುತ್ತದೆ.
ಬೆಳಗ್ಗಿನ ತಿಂಡಿ ಗಂಟಲಿಗೆ ಇಳಿಯುವುದೇ ಇಲ್ಲ. ಅದೂ ಹಿಂದಿನ ದಿನದ ಚಿತ್ರಾನ್ನವಾಗಿದ್ದರೇ ಕತೆಯೇ ಮುಗೀತು. ಎದ್ದ ಗಡಿಬಿಡಿಯಲ್ಲಿ ಹೊಸದಾಗಿ ತಿಂಡಿ ಮಾಡಲಿಕ್ಕಾಗುವುದಿಲ್ಲ. ರಾತ್ರಿ ಉಳಿದಿದ್ದು ಹೊಟ್ಟೆಗೆ ಇಳಿಯಲ್ಲ.[ಶತಾಬ್ದಿ ರೈಲಲ್ಲಿ ಮನರಂಜನೆಗೆ ಕೊರತೆಯಿಲ್ಲ]
ಈ ಅನುಭವ ಬೆಂಗಳೂರಿಗರಿಗೆ ಆಗಿದ್ದರೆ ಯಾವ ಆಶ್ಚರ್ಯವಿಲ್ಲ. ಇದಕ್ಕೆಲ್ಲ ಕಾರಣ ಚಳಿ, ಚಳಿ, ಚಳಿ....ಕಳೆದ ಮೂರು ದಿನಗಳಿಂದ ಬೆಂಗಳೂರಲ್ಲಿ ವಿಪರೀತ ಚಳಿ ಬೀಳುತ್ತಿದೆ.[ಪಿಟಿಐ ಚಿತ್ರ]
ಸೋಮವಾರ ಬೆಂಗಳೂರಿನಲ್ಲಿ ಅತಿ ಕಡಿಮೆ 14 ಡಿಗ್ರಿ ಉಷ್ಣತೆ ದಾಖಲಾಗಿತ್ತು. ನಾಳೆ , ನಾಡಿದ್ದು ಮತ್ತೆ ಚಳಿಯ ಪ್ರಭಾವ ಮುಂದುವರಿಯಲಿದ್ದು ಕನಿಷ್ಠ ಉಷ್ಣಾಂಶ 12 ಡಿಗ್ರಿ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲೂ ಚಳಿ ಆರ್ಭಟ ಜೋರಾಗಿದೆ. ವಿಜಯಪುರದಲ್ಲಿ ಅತಿ ಕಡಿಮೆ ಅಂದರೆ 7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಧಾರವಾಡದಲ್ಲಿ 9 ಡಿಗ್ರಿ, ಗದಗ, ರಾಯಚೂರು, ಕೊಪ್ಪಳದಲ್ಲಿ, 11 ಡಿಗ್ರಿ, ಹಾವೇರಿ, ಬೆಳಗಾವಿಯಲ್ಲಿ 12 ಡಿಗ್ರಿ, ಬಿಸಿಲ ನಾಡು ಕಲಬುರಗಿ, ಮತ್ತು ಬೀದರ್ ನಲ್ಲಿ 15 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಇಡೀ ರಾಜ್ಯದಲ್ಲಿ ಚಳಿಯ ವಾತಾವರಣವಿದೆ. ಮುಂದಿನ ಒಂದು ವಾರ ಕಾಲ ಇದೇ ರೀತಿಯ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಎಲ್ಲಾ ಭಾಗದಲ್ಲೂ 3 ರಿಂದ 4 ಡಿಗ್ರಿ ಕಡಿಮೆ ಉಷ್ಣಾಂಶ ದಾಖಲಾಗುತ್ತಿದೆ.