ನೂತನ ಸಭಾಧ್ಯಕ್ಷ ರಮೇಶ್ ಕುಮಾರ್ಗೆ ಪ್ರಮುಖ ನಾಯಕರಿಂದ ಅಭಿನಂದನೆ
ಬೆಂಗಳೂರು, ಮೇ 25: ಬಿಜೆಪಿಯ ಸುರೇಶ್ ಕುಮಾರ್ ಅವರು ಸ್ಪೀಕರ್ ಸ್ಥಾನದಿಂದ ನಾಮಪತ್ರ ವಾಪಸ್ ಪಡೆದ ಕಾರಣ ಕಾಂಗ್ರೆಸ್ನ ರಮೇಶ್ ಕುಮಾರ್ ಅವರು ಅವಿರೋಧವಾಗಿ ಸಭಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಶ್ರೀನಿವಾಸಪುರ ಕ್ಷೇತ್ರದ ಶಾಸಕರಾಗಿರುವ ರಮೇಶ್ ಕುಮಾರ್ ಅವರು ಎರಡನೇ ಬಾರಿ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದು, ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದ 15ನೇ ವಿಧಾನಸಭೆ ಕಾರ್ಯ ನಿರ್ವಹಿಸಲಿದೆ.
ಕರ್ನಾಟಕ ವಿಶ್ವಾಸಮತ LIVE: ಅನುಭವಿ ಸ್ಪೀಕರ್ ಗೆ ಅಭಿನಂದನೆಯ ಸುರಿಮಳೆ
ವಿಶೇಷ ಅಧಿವೇಶನದ ಈ ದಿನ ವಿಶ್ವಾಸಮತ ಯಾಚನೆಗೂ ಮೊದಲಿಗೆ ಕಲಾಪದಲ್ಲಿ ಹಾಜರಿರುವ ವಿವಿಧ ಪಕ್ಷಗಳ ಪ್ರಮುಖ ನಾಯಕರುಗಳು ನೂತನ ಸಭಾಧ್ಯಕ್ಷರಿಗೆ ಅಭಿನಂದನಾ ನುಡಿಯನ್ನು ಸಮರ್ಪಿಸಿದರು.
ತಂದೆಯ ಕಾಲದಲ್ಲೂ ನೀವೇ ಸಭಾಧ್ಯಕ್ಷರಾಗಿದ್ದಿರಿ
ನೂತನ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಮ್ಮ ತಂದೆ ದೇವೇಗೌಡರು ರಾಜ್ಯದ ಮುಖ್ಯ ಮಂತ್ರಿ ಆಗಿದ್ದಾಗಲೂ ನೀವೇ ಸಭಾಧ್ಯಕ್ಷರಾಗಿದ್ದಿರಿ ಈಗ ನಿಮ್ಮ ಅಧ್ಯಕ್ಷತೆಯಲ್ಲಿ ಸರ್ಕಾರ ನಡೆಸುವ ಜವಾಬ್ದಾರಿ ನನಗೆ ಸಿಕ್ಕಿರುವುದು ಭಾಗ್ಯ ಎಂದರು. ಕಲಾಪವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಿರೆಂಬ ವಿಶ್ವಾಸವಿದೆ ಎಂದರು. ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರಿಗೂ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದರು.
ವಿರೋಧ ಪಕ್ಷದ ನಾಯಕರಿಂದ ಅಭಿನಂದನೆ
ಪಕ್ಷದ ಹಂಗಿಲ್ಲದೆ ಕಾರ್ಯ ನಿರ್ವಹಿಸುವ ನಿಮ್ಮ ಕಾರ್ಯ ವೈಖರಿಯನ್ನು ಈ ಹಿಂದೆಯೂ ನಾವು ನೋಡಿದ್ದೇವೆ, ಅದೇ ವಿಶ್ವಾಸದಿಂದ ನಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರವನ್ನು ನಾವು ವಾಪಸ್ ಪಡೆದಿದ್ದೇವೆ, ವಿರೋಧ ಪಕ್ಷಕ್ಕೆ ಅಧಿಕಾರದಲ್ಲಿನ ಪಕ್ಷದಷ್ಟೆ ಸಮಾನ ಅವಕಾಶ ನೀಡುತ್ತೀರೆಂದು ಆಶಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹೇಳಿದರು.
ಸ್ಪೀಕರ್ ಚುನಾವಣೆ: ಸರ್ವಾನುಮತದಿಂದ ಆಯ್ಕೆಯಾದ ರಮೇಶ್ ಕುಮಾರ್
ಉಪ ಮುಖ್ಯಮಂತ್ರಿ ಪರಮೇಶ್ವರ್ ಅಭಿನಂದನೆ
ರಮೇಶ್ ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲೆಂದು ಬಿಜೆಪಿ ಅಭ್ಯರ್ಥಿಯ ನಾಮಪತ್ರ ವಾಪಾಸ್ ಪಡೆಯುವ ನಿರ್ಣಯ ತಳೆದ ಬಿಜೆಪಿಗೆ ಪರಮೇಶ್ವರ್ ಅವರು ಧನ್ಯವಾದ ಅರ್ಪಿಸಿದರು. ಸಂವಿಧಾನ ಬದ್ಧವಾಗಿ ಸದನವನ್ನು ನಡೆಸಿಕೊಂಡು ಹೋಗುತ್ತೀರೆಂಬ ವಿಶ್ವಾಸವಿದೆ ಎಂದು ಪರಮೇಶ್ವರ್ ಹೇಳಿದರು.
ಸಿದ್ದರಾಮಯ್ಯ
ವೈಕುಂಠ ಬಾಳಿಗಾ ಅವರು ಈವರೆಗಿನ ಅತ್ಯುತ್ತಮ ಸಭಾಧ್ಯಕ್ಷ ಎಂದು ನಾವೆಲ್ಲಾ ಕೇಳಿದ್ದೇವೆ, ತಾವು ಕೂಡ ಹಾಗೆಯೇ ಎಂಬುದು ನಮ್ಮ ನಂಬಿಕೆ ಎಂದ ಸಿದ್ದರಾಮಯ್ಯ. ಸಣ್ಣ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದ ನಿಮ್ಮ ಕಾನೂನು ಜ್ಞಾನ ಅತ್ಯುತ್ತಮವಾದುದ್ದು. ನಾವು ಕಾನೂನು ಪದವಿ ಗಳಿಸಿದ್ದರೂ ಕೂಡ ನಮ್ಮನ್ನು ಮೀರಿಸುವ ಜ್ಞಾನ ನೀವು ಅನುಭವದಿಂದಲೇ ಪಡೆದಿದ್ದೀರಿ. ರಾಜಕೀಯಕ್ಕೆ ಬರದಿದ್ದರೆ ನೀವು ಒಳ್ಳೆ ಲಾಯರ್ ಆಗುತಿದ್ದೀರಿ ಎಂದು ಹೊಗಳಿದರು. ವಿಧಾನಸಭೆಯಲ್ಲಿ ಚರ್ಚೆಯ ಗುಣಮಟ್ಟ ಕಡಿಮೆ ಆಗುತ್ತಿದೆ ಎಂಬ ಭಾವನೆ ಜನರಲ್ಲಿ ಇದೆ ಅದನ್ನು ಹೋಗಲಾಡಿಸಿ ನಿಮ್ಮ ಅಧ್ಯಕ್ಷತೆಯಲ್ಲಿ ಹಳೆಯ ವೈಭವ ವಿಧಾನಸಭೆಗೆ ಬರಲಿ. ಇದು ಸಮ್ಮಿಶ್ರ ಸರ್ಕಾರ, ವಿರೋಧ ಪಕ್ಷವೂ ಬಲಯುತವಾಗಿ ಆದರೂ ಪಕ್ಷೇತರವಾಗಿ ಕಾರ್ಯ ನಿರ್ವಹಿಸುವ ಶಕ್ತಿ ನಿಮಗಿದೆ. ಸರ್ವಾನುಮತದಿಂದ ಸ್ಪೀಕರ್ ಆಯ್ಕೆ ಮಾಡುವ ಸಂಪ್ರದಾಯ ಪಾಲಿಸಿದ ವಿರೋಧ ಪಕ್ಷಕ್ಕೆ ಅಭಿನಂದನೆ ಎಂದು ಸಿದ್ದರಾಮಯ್ಯ ಹೇಳಿದರು.
ಸಭಾಧ್ಯಕ್ಷರಿಗೆ ಏಕವಚನ ಪ್ರಯೋಗಿಸಿದ ಸಿದ್ದರಾಮಯ್ಯ
ಸಭಾಧ್ಯಕ್ಷರಿಗೆ ಗೌರವ ಸೂಚಕ ಪದಗಳನ್ನು ಬಳಸುವುದು ಪ್ರತೀತಿ ಆದರೆ ಸಿದ್ದರಾಮಯ್ಯ ಅವರು ಸಭಾಧ್ಯಕ್ಷರಿಗೆ ಅಭಿನಂದನಾ ನುಡಿ ನಡೆಯುತ್ತಾ ಏಕವಚನ ಪ್ರಯೋಗ ಮಾಡಿದರು. ಕೂಡಲೇ ಕ್ಷಮೆ ಕೋರಿದ ಸಿದ್ದರಾಮಯ್ಯ ಸಲಿಗೆಯಿಂದ ಹಾಗೆಂದೆ ಕ್ಷಮಿಸಿ ಎಂದು ಸದನದ ಕ್ಷಮೆ ಕೋರಿದರು.
ಹಲವರಿಗೆ ಅವಕಾಶ ನೀಡಿದ ರಮೇಶ್ ಕುಮಾರ್
ಅಭಿನಂಧನೆ ಸಲ್ಲಿಸಲು ಹಲವು ಅವಕಾಶ ಕೋರಿದ್ದರು. ಮೊದಲ ದಿನವೇ ಹೊಸಬರಿಗೆ ಬೇಸರ ಮೂಡಿಸುವುದು ಬೇಡ ಎಂದ ರಮೇಶ್ ಕುಮಾರ್ ಬೇಗ ಬೇಗ ಅಭಿನಂಧನಾ ನುಡಿ ಮುಗಿಸಿ ಎಂದು ಸೂಚನೆ ನೀಡಿದರು. ಡಿಕೆ ಶಿವಕುಮಾರ್, ಕೃಷ್ಣಭೈರೇಗೌಡ, ಸುರೇಶ್ ಕುಮಾರ್, ಗೋವಿಂದ ಕಾರಜೋಳ ಹಲವರು ನೂತನ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.