ಗೌರಿ ದಿನ: ಮೋದಿಯನ್ನು ಕರ್ನಾಟಕದೊಳಗೆ ಬಿಡಬಾರದು ಎಂದ ದೊರೆಸ್ವಾಮಿ
Recommended Video
ಬೆಂಗಳೂರು, ಜನವರಿ 29: 'ಗೌರಿ ಅಮರ್ ರಹೇ ಅಮರ್ ರಹೇ , ನಾನು ಗೌರಿ, ನಾನು ಗೌರಿ' ಎಂಬ ಘೋಷಣೆಗಳು ಮೊಳಗಿದವು. ಸಂವಿಧಾನ ಬೋಧನೆಯ ಪ್ರಮಾಣ ಬೋಧಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸೋಮವಾರ ಆಯೋಜಿಸಿರುವ ಗೌರಿ ದಿನ ಸಮಾವೇಶದಲ್ಲಿ.
ಶಾಸಕ ಜಿಗ್ನೇಶ್ ಮೇವಾನಿ, ಕನ್ಹಯ್ಯಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ , ಕವಿತಾ ಲಂಕೇಶ್, ನಟ ಪ್ರಕಾಶ್ ರೈ, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ವಿಮರ್ಶಕ ರಹಮತ್ ತರೀಕರೆ, ಬರಹಗಾರ್ತಿ ಕೆ.ನೀಲಾ ಸೇರಿದಂತೆ ಹಲವರು ಭಾಗಿಯಾದರು.
ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನ 'ಗೌರಿ ದಿನ'ವಾಗಿ ಆಚರಣೆ
ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರು ಪ್ರಧಾನಿ ನರೇಂದ್ರ್ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೌರಿ ಲಂಕೇಶ್ ಬಗ್ಗೆ ಬರೆದಿರುವ ಪುಸ್ತಕವನ್ನು ಒಂದು ಲಕ್ಷ ರುಪಾಯಿ ಕೊಟ್ಟು ಖರೀದಿಸುತ್ತೇನೆ ಎಂದು ಪ್ರಕಾಶ್ ರೈ ಅವರು ಘೋಷಿಸಿದರು. ಈ ಸಮಾವೇಶದಲ್ಲಿ ಹಲವರು ಮಾತನಾಡಿದರು. ಯಾರು- ಏನು ಮಾತನಾಡಿದರು ಎಂಬುದನ್ನು ತಿಳಿಯಬೇಕೆಂದರೆ ಮುಂದೆ ಓದಿ.
ಪ್ರಕಾಶ್ ರೈ
ಕೆಲವು ದುರುಳರು, ರಾಕ್ಷಸರಿಗೆ ಒಂದು ವಿಷಯ ಅರ್ಥವಾಗುವುದಿಲ್ಲ. ಸಮಾಜದ ಒಳಿತಿಗಾಗಿ ಧ್ವನಿ ಎತ್ತುವವರು ಮಡಿದಾಗ ಸಮಾಧಿ ಮಾಡುವುದಿಲ್ಲ, ಬಿತ್ತುತ್ತೇವೆ. ನಾವು ಗೌರಿಯನ್ನು ಸಮಾಧಿ ಮಾಡಲಿಲ್ಲ, ಬಿತ್ತಿದ್ದೇವೆ. ಕೆಲವು ಮರಣಗಳೇ ಹಾಗೇ ಸಾಯುವುದಿಲ್ಲ. ದಲಿತರ ಮರಣ ಕಂಡಾಗ ಜಿಗ್ನೇಶ್ ಮೇವಾನಿ ಧ್ವನಿಯಾದರು ಗೌರಿಯ ಸಾವಿನ ನಂತರ ನಾನು ಧ್ವನಿಯಾದೆ. ಈ ಧ್ವನಿ ಇನ್ನೂ ಹೆಚ್ಚಾಗುತ್ತದೆ.
ಇವತ್ತು ನಾನೇಕೆ ದನಿ ಎತ್ತುತ್ತೇನೆ ಅಂದರೆ ಗೌರಿ ನನ್ನನ್ನು ಕಾಡ್ತಾಳೆ. ಇಷ್ಟು ಜನ ಗೌರಿಯಿಂದ ಉತ್ತೇಜಿತರಾಗಿ ಬಂದಿದ್ದಾರೆ. ಅಧ್ಯಾತ್ಮ ಅಂತೆಲ್ಲಾ ಹೇಳ್ತಾರಲ್ಲ, ಆಗ ಮೇಲು ನಿಂತು ನೋಡ್ತಿದ್ದಾರೆ ಅಂತೀವಿ. ಗೌರಿಯಂಥವರು ಸತ್ತಾಗ ನಮ್ಮ ಧ್ವನಿಗಳಲ್ಲಿ ಬರುತ್ತಾರೆ. ಜಗತ್ತಿನ ಯಾವುದೇ ಫ್ಯಾಸಿಸ್ಟ್ ವ್ಯವಸ್ಥೆ ಹೆಚ್ಚು ಕಾಲ ಉಳಿಯುವುದಿಲ್ಲ.
ಫ್ಯಾಸಿಸ್ಟ್ ಶಕ್ತಿಗಳು ಇನ್ನು ಬಹಳ ದಿನ ಉಳಿಯಲ್ಲ
ಗೌರಿ ಸಾವಿನ ಧ್ವನಿ ಇನ್ನೂ ದೊಡ್ಡದಾಗುತ್ತದೆ. ಫ್ಯಾಸಿಸ್ಟ್ ಶಕ್ತಿಗಳು ಇನ್ನು ಬಹಳ ದಿನ ಉಳಿಯಲ್ಲ. ಹೆಚ್ಚು ಅಂದರೆ ಐದು ವರ್ಷ. ಇನ್ನೊಂದು ಐದು ವರ್ಷ ಕಷ್ಟಪಟ್ಟು ಇರುತ್ತಾರೆ. ಆಮೇಲೆ ಹೋಗಲೇಬೇಕು. ಇವರ ಶಕ್ತಿಯನ್ನು ನಾವು ತಡೆಗಟ್ಟಬೇಕು. ಸ್ವಲ್ಪ ಸಮಯ ನಾವು ಸುಮ್ಮನಿದ್ದೆವು. ಅದಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ದೊಡ್ಟಮಟ್ಟದಲ್ಲಿ ವಿಜೃಂಭಿಸಿದವು.
ಲಂಕೇಶ್ ಕೂಡ ಆಕ್ಟಿವಿಸ್ಟ್ ಪತ್ರಕರ್ತರಾಗಿದ್ದರು. ಕಾಂಗ್ರೆಸ್ ವಿರೋಧಿ ಅಲೆಗೂ ಅವರು ಕಾರಣರಾಗಿದ್ದರು. ಚುನಾವಣೆ ಬಂದಾಗ ಇಂಥವರನ್ನು ಗೆಲ್ಲಿಸಿ, ಸೋಲಿಸಿ ಅಂತ ಫರ್ಮಾನು ಹೊರಡಿಸಿದರು. ಗೌರಿ ಕೂಡ ತಂದೆಯ ಹಾದಿಯನ್ನು ತುಳಿದಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಉಣ್ಣುವ ಅನ್ನವೇ ವಿಷ ಆಗುತ್ತಿದೆ. ನಮ್ಮ ನೆರಳನ್ನು ನಂಬದ ಕಾಲ. ಯುದ್ಧದ ಕಾಲ.
ದಿನೇಶ್ ಅಮಿನ್ ಮಟ್ಟು
ಗೌರಿಯು ಅಪ್ಪನ ಬಗ್ಗೆ ನೆನೆದಾಗಲೆಲ್ಲ ನಾನು ಕಿಚಾಯಿಸುತ್ತಿದ್ದೆ. ನಾವೂ ಕೂಡ ಲಂಕೇಶ್ ವಾರಸುದಾರರು ಅನ್ನುತ್ತಿದ್ದೆ. ಲಂಕೇಶ್ ಗಿಂತ ಅಪಾರ ಹೆಸರು ಗೌರಿ ಮಾಡಿದಳು ಅನಿಸುತ್ತದೆ. ಆಕೆಯನ್ನು ಎಷ್ಟು ಜನ ಅಮ್ಮ, ಅವ್ವ, ಅಕ್ಕ ಅನ್ನುತ್ತಿದ್ದಾರೆ. ಗುಬ್ಬಚ್ಚಿಯಂತಹ ಪುಟ್ಟ ದೇಹದೊಳಗೆ ವಿಶಾಲ ಪ್ರೀತಿ ಇತ್ತು. ಮಕ್ಕಳ ಮುಗ್ಧತೆ ಆಕೆಗಿತ್ತು. ಗೌರಿ ಕೊನೆಯವರೆಗೂ ಯಾರನ್ನೂ ವೈಯಕ್ತಿಕ ದ್ವೇಷ ಮಾಡಿಲ್ಲ. ಆಕೆಗೆ ದ್ವೇಷ ಒಗ್ಗುತ್ತಿರಲಿಲ್ಲ.
ಕವಿತಾ ಲಂಕೇಶ್
ಹ್ಯಾಪಿ ಬರ್ತ್ ಡೇ ಗೌರಿ. ಗೌರಿ ಎಲ್ಲಿದ್ದಾಳೋ ಗೊತ್ತಿಲ್ಲ. ಸ್ವರ್ಗದಲ್ಲೂ ನರಕದಲ್ಲೂ ಆದರೆ ಆಕೆಗೆ ಇದ್ಯಾವುದರ ಬಗ್ಗೆ ನಂಬಿಕೆ ಇಲ್ಲ. ಆಕೆ ಇಲ್ಲೇ ಎಲ್ಲೋ ಇರಬಹುದು. ಆರೆಸ್ಸೆಸ್ ಚಡ್ಡಿಗಳು ಅಂತೆಲ್ಲ ಗೌರಿ ಕಾಮೆಂಟ್ ಮಾಡಿದಾಗಲೆಲ್ಲ ನಾನು ಬೈದು ಸುಮ್ಮನಾಗುತ್ತಿದ್ದೆ. ನನಗೆ ರಾಜಕೀಯ ಆಸಕ್ತಿಯಿಲ್ಲ. ಆದರೆ ಗೌರಿಯ ಸಿದ್ಧಾಂತವನ್ನು ಈಗ ಉಳಿಸಬೇಕು ಅಂತ ನನಗೆ ಅನಿಸುತ್ತಿದೆ.
ಗೌರಿಯ ಸಾವಿನಿಂದ ನಾವೆಲ್ಲ ಎಚ್ಚೆತ್ತುಕೊಂಡಿದ್ದೀವಿ. ಆರೆಸ್ಸೆಸ್- ಲಿಂಗಾಯತ ಈ ಬಗ್ಗೆಯೆಲ್ಲ ಗೌರಿ ಮಾತನಾಡಿದಾಗ ನಾನು ಕಡೆಗಣಿಸುತ್ತಿದ್ದೆ. ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ನನಗೆ. ಹಿಂದೂ ರಾಷ್ಟ್ರ ಒಡೆದು ಆಳುವ ನೀತಿಯಿಂದ ರಾಷ್ಟ್ರಕ್ಕೆ, ಜಾತ್ಯತೀತತೆಗೆ ಉಳಿಗಾಲವಿಲ್ಲ. ನನ್ನಲ್ಲೂ ಗೌರಿಯಿಂದಾಗಿ ಸಾಕಷ್ಟು ಬದಲಾವಣೆ ಆಗಿದೆ. ಗೌರಿಯನ್ನು ನಂಬಿದವರ ಜೊತೆ ನಾನಿದ್ದೇನೆ. ಗೌರಿ ಇದ್ದಾಗಲೂ ನನಗೆ ಪ್ರತ್ಯೇಕ ಗುರುತು ಇರಲಿಲ್ಲ. ಈಗಲೂ ನಾನು ಗೌರಿ ಲಂಕೇಶ್ ತಂಗಿಯಾಗಿ ಮಾತ್ರ ಗುರುತಿಸಿಕೊಳ್ಳುತ್ತೇನೆ.
ದೊರೆಸ್ವಾಮಿ
ಎಸ್ ಐಟಿ ಇಬ್ಬರನ್ನು ಹಿಡಿದಿದೆ ಅಂತಾರೆ. ಆದರೆ ಯಾರನ್ನು ಹಿಡಿದಿದ್ದಾರೆ ಗೊತ್ತಿಲ್ಲ. ದಕ್ಷಿಣ ಕನ್ನಡದ ಮೇಲೆ ಪೊಲೀಸ್ ಅಧಿಕಾರಿಗಳು ಒಂದು ಕಣ್ಣಿಡಬೇಕು. ಈಗ ರಾಜಕೀಯವಾಗಿ ಹೋರಾಡುವ ಪರಿಸ್ಥಿತಿ ಬಂದಿದೆ. ಮೋದಿ ಕರ್ನಾಟಕಕ್ಕೆ ಬರದಂತೆ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಕುಲಗೆಟ್ಟು ಹೋಗಿವೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಓಡಿಸಿ. ಕರ್ನಾಟಕದ ಯಾವ ಕ್ಷೇತ್ರದಲ್ಲೂ ಬಿಜೆಪಿಯನ್ನು ಗೆಲ್ಲಿಸಬಾರದು. ಕರ್ನಾಟಕದಲ್ಲಿ ಮೋದಿಗೆ ಅವಕಾಶ ಕೊಡಬಾರದು. ಇದು ಒಂದು ಪಕ್ಷದ ಓಲೈಕೆಗಲ್ಲ. ಗೌರಿ ಬಳಗ ಈ ತೀರ್ಮಾನ ಮಾಡಲೇಬೇಕು. ಮೋದಿ ಎಲ್ಲರಿಗೂ ಸಮಾನ ಶತ್ರು.
ಬಿಜೆಪಿಗೆ ಮತ ಹಾಕಬೇಡಿ
ಚುನಾವಣೆ ಬರುತ್ತಿದೆ. ಬಿಜೆಪಿಗೆ ಮತ ಹಾಕಬೇಡಿ. ಕೆಲವೊಂದು ರಾಜ್ಯ ಹೊರತುಪಡಿಸಿದರೆ ಎಲ್ಲ ಕಡೆ ಬಿಜೆಪಿ ಆಡಳಿತ ಇದೆ. 30 ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಪ್ರಯತ್ನ ಪಡುತ್ತಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಮೋದಿ ನಮ್ಮ ರಾಜ್ಯಕ್ಕೆ ಬಾರದಂತೆ ನೋಡಿಕೊಳ್ಳಿ.
ಜೆಎನ್ ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್
ನಮ್ಮ ದೇಶದಲ್ಲಿ ಬಹಳಷ್ಟು ರೋಬೋಟ್ ಗಳಿವೆ. ಅದರಲ್ಲೊಂದು ರೋಬೋಟ್ ಭಾಯಿಯೋ- ಬೆಹನೋ ಅಂತ ಮಾತನಾಡುತ್ತದೆ.
ಜೆಎನ್ ಯು ವಿದ್ಯಾರ್ಥಿ ಮುಖಂಡ ಶೆಹ್ಲಾ ರಶೀದ್
ದೇಶಕ್ಕೆ ಆರೆಸ್ಸೆಸ್ ರೋಗ ಇದ್ದಂತೆ. ಆ ರೋಗವನ್ನು ಹೊಡೆದು ಉರುಳಿಸಬೇಕು. ಈ ದೇಶದ ಫ್ಯಾಸಿಸ್ಟ್ ಬಿಜೆಪಿಯನ್ನು ಎತ್ತಿ ಬಿಸಾಡುತ್ತೇವೆ. ಕರ್ನಾಟಕದಲ್ಲೂ ಬಿಜೆಪಿಯನ್ನು ಎತ್ತಿ ಬಿಸಾಡಬೇಕು. ಆರೆಸ್ಸೆಸ್ ಒಂದು ಉಗ್ರಗಾಮಿ ಸಂಘಟನೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಲ್ಲಿಗೆ ಬಂದು ಭಾಷಣ ಮಾಡ್ತಾರೆ.
ಆದರೆ, ಅಲ್ಲಿ ಹಸುಗೂಸುಗಳು ಆಮ್ಲಜನಕ ಇಲ್ಲದೇ ಸಾವನ್ನಪ್ಪಿದ್ದವು. ಉಮರ್ ಖಾಲಿದ್ ಯಾವತ್ತೂ ಭಾರತ ತುಂಡಾಗಬೇಕು ಅಂತ ಹೇಳಲೇ ಇಲ್ಲ. ಆದರೆ ಕರ್ಣಿ ಸೇನಾ ಭಾರತ ತುಂಡು ತುಂಡಾಗಬೇಕು ಅಂದಿದ್ದನ್ನು ಈ ದೇಶ ಒಪ್ಪಿಕೊಳ್ಳುತ್ತದೆ.
ಸೆಪ್ಟೆಂಬರ್ ನಲ್ಲಿ ಗೌರಿ ಹತ್ಯೆ
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯ ಬಳಿ ಹಂತಕರ ಗುಂಡಿಗೆ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾದರು. ಆ ನಂತರ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿ, ತನಿಖೆ ನಡೆಸುತ್ತಿದ್ದರೂ ಇನ್ನೂ ಹಂತಕರ ಸುಳಿವು ಪತ್ತೆಯಾಗಿಲ್ಲ.