ಪರಂಗೆ ಶಾಸಕಾಂಗ ಪಕ್ಷದ ನಾಯಕತ್ವ ತಪ್ಪಿದ್ದು ಇದೇ ಕಾರಣಕ್ಕಾ?
ಹೈದರಾಬಾದ್, ಮೇ 19 : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಗೊಂಡು ರಾಜ್ಯದ ಪ್ರಪ್ರಥಮ ದಲಿತ ಉಪಮುಖ್ಯಮಂತ್ರಿ ಎಂಬ ದಾಖಲೆ ಸಾಧಿಸಲು ಹೊರಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಗೆ ಮತ್ತೆ ಅವಮಾನವಾಗಿದೆ.
ಶುಕ್ರವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಆಧ್ಯಕ್ಷರನ್ನಾಗಿ ಚುನಾಯಿಸಲು ನಿರಾಕರಿಸುವ ಮೂಲಕ ಮತ್ತೊಮ್ಮೆ ಅವರಿಗೆ ಡಿಸಿಎಂ ಹುದ್ದೆ ನಿರಾಕರಿಸಲಾಗಿದೆ ಎಂಬ ಮಾತುಗಳು ಅವರ ಬೆಂಬಲಿಗರಲ್ಲಿ ತಳಮಳವನ್ನುಂಟು ಮಾಡಿದೆ.
ಶಾಸಕಾಂಗ ಪಕ್ಷದ ನಾಯಕ: ಪರಮೇಶ್ವರ್ ಬದಲಿಸಿ ಸಿದ್ದರಾಮಯ್ಯಗೆ ಮಣೆ
ಮೂಲಗಳ ಪ್ರಕಾರ ಡಾ. ಜಿ ಪರಮೇಶ್ವರ್ ಶಾಸಕಾಂಗ ಪಕ್ಷದ ನಾಯಕನಾಗುವ ಇಚ್ಛೆಯನ್ನು ಸಭೆಯಲ್ಲಿ ಪ್ರಕಟಿಸಿದ ಬೆನ್ನಿಗೆ ಇತರೆ ನಾಯಕರು ಕೂಡಾ ಸ್ಪರ್ಧೆಗಿಳಿಯುವ ಇಚ್ಛೆ ಪ್ರಕಟಿಸಿದರು. ಇದರಿಂದ ಮತದಾನ ಅನಿವಾರ್ಯ ಎನ್ನುವ ಪರಿಸ್ಥಿತಿ ಎದುರಾಯಿತು.
ಪರಂ ಸೋತರೆ ಅದು ದಲಿತ ವರ್ಗಕ್ಕೆ ತಪ್ಪು ಸಂದೇಶ ನೀಡಬಹುದು ಎನ್ನುವ ಕಾರಣದಿಂದ ಸರ್ವಾನುಮತದ ಆಯ್ಕೆಗೆ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ನಾಯಕರ ನಡುವಣ ಒಮ್ಮತಾಭಿಪ್ರಾಯ ಮೂಡದ ಹಿನ್ನಲೆಯಲ್ಲಿ ಕೊನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಮುಂದುವರಿಸಲು ನಿರ್ಧರಿಸಲಾಯಿತು.
ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು
ಮೂಲಗಳ ಪ್ರಕಾರ ಪರಂಗೆ ಡಿಸಿಎಂ ಹುದ್ದೆ ತಪ್ಪಿಸಲೆಂದೇ ಅವರಿಗೆ ಶಾಸಕಾಂಗ ಪಕ್ಷದ ನಾಯಕತ್ವ ನಿರಾಕರಿಸಲಾಗಿದೆ. ಏಕೆಂದರೆ ಆ ಹುದ್ದೆಯ ಮೇಲೆ ಈಗಾಗಲೆ ಹಲವರು ಕಣ್ಣಿಟ್ಟಿದ್ದಾರೆ. ಈ ಪೈಕಿ ಮಾಜಿ ನೀರಾವರಿ ಸಚಿವ ಎಂ ಬಿ ಪಾಟೀಲ್ ಕೂಡಾ ಒಬ್ಬರು.
ಸಹಜವಾಗಿ ಇದು ಪರಂ ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಅಸಮಾಧಾನವನ್ನು ಪರಂ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೆ ಜಗಜ್ಜಾಹೀರುಗೊಳಿಸಿದ್ದು ಮುಂದೇನಾಗುತ್ತೋ ಕಾದು ನೋಡ ಬೇಕಿದೆ.