ಗಣಪತಿ ಹಾಸಣಗಿ ಅವರಿಗೆ ಇನ್ಫೋಸಿಸ್-ಬಾಲೇಖಾನ್ ಪ್ರಶಸ್ತಿ ಪ್ರದಾನ
ಬೆಂಗಳೂರು, ಸೆಪ್ಟೆಂಬರ್ 11: "ನಮ್ಮ ದೇಶದ ಸತ್ವವುಳ್ಳ ಹಾಗೂ ಪರಂಪರೆಯ ಮೂಲ ಭಾಗವಾಗಿರುವ ಹಿಂದೂಸ್ಥಾನಿ ಸಂಗೀತವನ್ನು ಕಡೆಗಣಿಸುತ್ತಿರುವುದು ಬಹಳ ವಿಷಾದನೀಯ" ಎಂದು ಪದ್ಮಶ್ರೀ ನಾಡೋಜ ಡಾ. ಕೆ. ಎಸ್ ನಿಸಾರ್ ಆಹ್ಮದ್ ವಿಷಾದ ವ್ಯಕ್ತಪಡಿಸಿದರು.
ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್ ಹಾಗೂ ಇನ್ಪೋಸಿಸ್ ಫೌಂಡೇಶನ್ ಬೆಂಗಳೂರಿನ ಜೆಎಸ್ ಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 'ಇನ್ಫೋಸಿಸ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ' ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಪರಂಪರೆಯನ್ನು ನಾವೇ ಕಡೆಗಣಿಸುತ್ತಿರುವುದು ಬಹಳ ವಿಷಾದನೀಯ ಸಂಗತಿ. ನಮ್ಮ ಸಂಗೀತ ಹಾಗೂ ಪರಂಪರೆಯ ಬಹಳಷ್ಟು ಭಾಗಗಳ ಪರಿಚಯ ನಮ್ಮ ಇಂದಿನ ಯುವಜನಾಂಗಕ್ಕೆ ಇಲ್ಲ. ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗಿರುವ ಬಹಳಷ್ಟು ಮಂದಿಗೆ ನಮ್ಮ ಅಂತಃಸತ್ವವುಳ್ಳ ಹಿಂದೂಸ್ಥಾನಿ ಸಂಗೀತ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಬೇಕಾಗಿದೆ" ಎಂದರು.
"ಉಸ್ತಾದ್ ಬಾಲೇಖಾನ್ ಅವರ ಪರಿಚಯ ನನಗೆ 1975 ರಲ್ಲಿ ಆಯಿತು. ಶಿವಮೊಗ್ಗೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾಲೇಖಾನ್ ಅವರ ಸಂಗೀತ ವಿದ್ವತ್ ನೋಡಿ ನಾನು ದಂಗಾಗಿ ಹೋಗಿದ್ದೆ. ಆದರೆ ಬಾಲೇಖಾನ್ ಅವರ ಸೌಮ್ಯ ಹಾಗೂ ಮುಗ್ಧ ವ್ಯಕ್ತಿತ್ವ ನನ್ನನ್ನು ಇನ್ನೂ ಹೆಚ್ಚು ಅವರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಯಿತು".
ಪಂ.ಗಣಪತಿ ಭಟ್ ಗೆ ಇನ್ಫೋಸಿಸ್-ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ
"ನಮ್ಮ ದೇಶದ ಕೆಲವೇ ಸಂಸ್ಥೆಗಳು ನಮ್ಮ ದೇಶದ ಪರಂಪರೆಯ ಭಾಗವಾಗಿರುವ ಸಂಗೀತವನ್ನು ಪ್ರಚುರ ಪಡಿಸುತ್ತಿವೆ. ಬಾಲೇಖಾನ್ ಟ್ರಸ್ಟ್, ಇನ್ಫೋಸಿಸ್ ಫೌಂಡೇಶನ್ ಸಹಯೋಗದಲ್ಲಿ ಸಂಗೀತಾಸಕ್ತರಿಗೆ ಇಂತಹ ವೇದಿಕೆಯನ್ನು ಒದಗಿಸಿರುವುದು ಶ್ಲಾಘನೀಯ" ಎಂದರು.
ಖ್ಯಾತ ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, 'ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಸಂಗೀತ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಇವರು ಪದ್ಮ ಪ್ರಶಸ್ತಿಗೂ ಅರ್ಹರು' ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು, "ಬಾಲೇಖಾನ್ ಅವರು ನನ್ನ ಅಣ್ಣನಿಂದ್ದಂತೆ, ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಬಹಳ ಸಂತಸದ ವಿಷಯ. ಧಾರವಾಡ ನಗರ ಉತ್ತರ ಮತ್ತು ದಕ್ಷಿಣ ಭಾರತದ ಕಲೆಗಳ ಸಂಗಮ ಸ್ಥಳವಾಗಿದೆ. ಅಂತಹ ಸಂಗಮ ಸ್ಥಳ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಉಸ್ತಾದ್ ಬಾಲೇಖಾನ್ ಅವರನ್ನು ನೋಡುವ ಹಾಗೂ ಅವರ ಸಂಗೀತ ಕೇಳುವ ಸದಾವಕಾಶ ನನಗೆ ಸಿಕ್ಕಿತ್ತು. ಬಾಲೆಖಾನ್ ಸಂಗೀತದಲ್ಲಿ ಕಿರಾಣಾ-ಗ್ವಾಲಿಯರ್ ಘರಾಣಗಳ ಸಮ್ಮಿಶ್ರಣವಿತ್ತು. ಅವರ ಕುಟುಂಬದವರು ಅವರ ಹೆಸರಿನಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ' ಎಂದರು.
ಹಿಂದುಸ್ಥಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಗೆ ಉಸ್ತಾದ್ ಬಾಲೆಖಾನ್ ಸ್ಮರಣಾರ್ಥ ಪ್ರಶಸ್ತಿ, ಫಲಕ ಹಾಗೂ ಒಂದು ಲಕ್ಷ ರೂ.ಗಳ ಚೆಕ್ ನೀಡಿ ಗೌರವಿಸಲಾಯಿತು. ಬಿಎನ್ ಎಂ ಚಾರಿಟೀಸ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀ ನಾರಾಯಣ ರಾವ್ ಆರ್ ಮಾನೆ, ಉಸ್ತಾದ್ ಬಾಲೆಖಾನ್ ಪುತ್ರ ಹಫೀಜ್ ಬಾಲೇಖಾನ್ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ರೈಸ್ ಬಾಲೇಖಾನ್ ಮತ್ತು ಹಫೀಸ್ ಬಾಲೇಖಾನ್ ಅವರು ಹಾಡಿರುವ ಮತ್ತು ಉಸ್ತಾದ್ ರಫೀಕ್ ಖಾನ್ ಮತ್ತು ಪಂಡಿತ್ ಶ್ರೀನಿವಾಸ್ ಜೋಶಿ ಅವರು ಸಂಗೀತ ಸಂಯೋಜನೆಯನ್ನು ಮಾಡಿರುವ ವಚನ ಸ್ವರಧಾರೆ ಸಿಡಿಯನ್ನು ಕವಿ ಕೆ ಎಸ್ ನಿಸಾರ್ ಅಹ್ಮದ್ ಬಿಡುಗಡೆಗೊಳಿಸಿದರು.
ಇದೇವೇಳೆ, ಎಂ.ಆರ್.ಕಲಾವತಿ ಅವರಿಗೆ ಸೌಭಾಗ್ಯ ಲಕ್ಷ್ಮಿ ವಸಂತರಾವ್ ಜಾಜೀ ಶಿಷ್ಯವೇತನವನ್ನು, ಬಿ.ಕೆ.ಮಮತಾ ಅವರಿಗೆ ಹಮೀದಾ ಬೇಗಂ ಬಾಲೇಖಾನ್ ಶಿಷ್ಯವೇತನವನ್ನು ನೀಡಿ ಗೌರವಿಸಲಾಯಿತು.
ನಂತರ ಗಣಪತಿ ಭಟ್ ಹಾಸಣಗಿ ನಡೆಸಿಕೊಟ್ಟ ಸಂಗೀತ ಕಚೇರಿ ಎಲ್ಲರ ಗಮನ ಸೆಳೆಯಿತು. ಶ್ರೀಧರ್ ಮಾಂಡ್ರೆ ತಬಲ ಮತ್ತು ಗುರುಪ್ರಸಾದ್ ಹೆಗ್ಡೆ ಅವರು ಹಾರ್ಮೋನಿಯಂ ಸಾಥ್ ನೀಡಿದರು.