ಮುಂಬೈನಲ್ಲಿ ಶಾಸಕರು, ಬಿಜೆಪಿಯಿಂದ ಆಪರೇಷನ್ ಕಮಲ : ಡಿಕೆಶಿ
ಬೆಂಗಳೂರು, ಜನವರಿ 14: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲದ್ದಂತೆ ಯತ್ನಿಸುತ್ತಿದೆ. ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ, ಕುದುರೆ ವ್ಯಾಪಾರಕ್ಕಿಳಿದಿದೆ. ಮೂರು ಮಂದಿ ಶಾಸಕರು ಸದ್ಯ ಮುಂಬೈನ ಹೋಟೆಲ್ ನಲ್ಲಿದ್ದೆ. ಶಾಸಕರನ್ನು ಬಿಜೆಪಿ ಕಾಪಾಡುತ್ತಿದೆ ಎಂದು ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೂರು ಜನ ಶಾಸಕರು ಮುಂಬೈನಲ್ಲಿದ್ದಾರೆ. ಅವರು ಯಾವ ಪಕ್ಷದವರು ಎಂಬುದು ಬೇಡ. ಹೆಸರು ಹೇಳಿದರೆ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೀರಿ, ಅವರಿಗೆ ತೊಂದರೆಯಾಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂಬೈಗೆ ಯಾರನ್ನು ಭೇಟಿಯಾಗಲು ಹೋಗಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಯಾವ ಹೋಟೆಲ್ನಲ್ಲಿ ಇದ್ದಾರೆ ಎಂಬುದು ಗೊತ್ತಿದೆ ಎಂದರು. ಅಲ್ಲದೆ, ಬಿಜೆಪಿ ಆಪರೇಶನ್ ಕಮಲಕ್ಕೆ ತಿರುಗೇಟು ನೀಡಲು ಸಿದ್ಧ. ಆ ಪಕ್ಷದ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.
ಬಿ.ಸಿ.ಪಾಟೀಲ್ ಅವರು ಮಗಳ ಮದುವೆ ಮಾಡುತ್ತಿದ್ದು ಅದರ ಓಡಾಟದಲ್ಲಿದ್ದಾರೆ. ಅವರಿಗೂ ಮುಂದೆ ಒಳ್ಳೆ ಸ್ಥಾನ ಸಿಗುತ್ತದೆ. ಉಳಿದ ಶಾಸಕರೆಲ್ಲ ಅವರವರ ಕ್ಷೇತ್ರದಲ್ಲೇ ಇದ್ದಾರೆ ಎಂದು ತಿಳಿಸಿದರು.
'ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ' ಎಂದು ಹೇಳುವ ಮೂಲಕ ಬಿಜೆಪಿಯವರು ಗೊಂದಲ, ಅಸ್ಥಿರತೆ ಮೂಡಿಸುತ್ತಿದ್ದಾರೆ. ಮುಹೂರ್ತ ಫಿಕ್ಸ್ ಮಾಡಿದ್ದೇವೆ, ಜೈಲಿಗೆ ಕಳುಹಿಸುತ್ತೇವೆ ಎಂದೆಲ್ಲ ಹೇಳುತ್ತಾರೆ. ಅವರಿಂದ ಆಗುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಆಸೆ ಪಡುತ್ತಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.