ಈರುಳ್ಳಿ ಬೆಲೆ ದಿಢೀರ್ ಕುಸಿತ, 900 ಲಾರಿಗಳ ಏಕಾಏಕಿ ಪ್ರವೇಶ
ಬೆಂಗಳೂರು, ಸೆಪ್ಟೆಂಬರ್, 29 : ಬೆಲೆ ಏರಿಕೆಯಿಂದ ಖರೀದಿ ವೇಳೆಯೂ ಜನರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಬೆಲೆ ದಿಢೀರ್ ಕುಸಿದಿದೆ. ಇದರ ಪರಿಣಾಮ ನಗರದ ಎಪಿಎಂಸಿ ಮಾರುಕಟ್ಟೆಗೆ ಸೆಪ್ಟೆಂಬರ್ 29ರ ಮಂಗಳವಾರದಂದು 900 ಲಾರಿಗಳು ಏಕಾಏಕಿ ಪ್ರವೇಶ ಪಡೆದಿವೆ.
ಕಳೆದ ವಾರ ಈರುಳ್ಳಿ ಚಿಲ್ಲರೆ ಮಾರುಕಟ್ಟೆಯಲ್ಲಿ ದಪ್ಪ ಈರುಳ್ಳಿಗೆ 70 ರೂ ಹಾಗೂ ಮಧ್ಯಮ ಗಾತ್ರದ ಈರುಳ್ಳಿಗೆ 64 ರೂ ನೀಡಬೇಕಿತ್ತು. ಒಟ್ಟಿನಲ್ಲಿ ಕೆಲವು ದಿನಗಳಿಂದ ಕೊಳ್ಳುವವರ ಕಣ್ಣಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆಯಲ್ಲಿ ಇಳಿತ ಕಂಡಿದ್ದು ಎಲ್ಲರಿಗೂ ಕೊಂಚ ಸಮಾಧಾನ ತಂದಿದೆ.[ಈರುಳ್ಳಿ ಇನ್ನು ಮುಂದೆ ಕಣ್ಣೀರು ತರಿಸಲ್ಲ]
ಈರುಳ್ಳಿ ಬೆಲೆ ದಿಢೀರ್ ಕುಸಿಯುತ್ತಿರುವುದನ್ನು ಮನಗಂಡ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಹಲವು ಈರುಳ್ಳಿ ಬೆಳೆಗಾರರು, ಈರುಳ್ಳಿ ಮಾರಾಟ ಮಾಡಲು ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಸಾಲುಗಟ್ಟಿ ನಿಂತವು. ಇದರ ಪರಿಣಾಮ ಯಶವಂತಪುರ, ಗುರೆಗುಂಟನ ಪಾಳ್ಯ, ಹೆಬ್ಬಾಳ ಇನ್ನಿತರ ಕಡೆ ಸಂಚಾರ ಸಾಕಷ್ಟು ಅಸ್ತವ್ಯಸ್ತವಾಗಿದೆ.
ಈರುಳ್ಳಿ ಬೆಲೆ ಏಕಾಏಕಿ ತನ್ನ ಬೆಲೆ ಕಳೆದುಕೊಳ್ಳುತ್ತಿರುವುದನ್ನು ಕಂಡು ಬೇಸತ್ತ ರೈತರು 'ರಾಜ್ಯ ಸರ್ಕಾರ ನಾವು ತಂದಿರುವ ಈರುಳ್ಳಿಗೆ ಸರಿಯಾದ ಬೆಲೆ ನಿಗದಿ ಮಾಡಬೇಕು. ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಆಂಧ್ರಪ್ರದೇಶ ಲಾರಿಗಳನ್ನು ತೆರವುಗೊಳಿಸಿದಷ್ಟು ಸುಲಭವಾಗಿ ಕರ್ನಾಟಕದ ಲಾರಿಗಳ ತೆರವಿಗೆ ಗಮನ ಹರಿಸುತ್ತಿಲ್ಲ, ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ' ಎಂದು ದೂರಿದ್ದಾರೆ.