ಲಕ್ಷ ನೋಟ್ ಪುಸ್ತಕ ಉಚಿತ ವಿತರಿಸಿದ ರಾಮಮೂರ್ತಿ 'ರಕ್ಷಾ ಫೌಂಡೇಷನ್'
ಬೆಂಗಳೂರು, ಜೂನ್ 30: ಒಂದು ಲಕ್ಷ ನೋಟ್ ಪುಸ್ತಕ, ವಿಶಿಷ್ಟ ಚೇತನರಿಗೆ ದ್ವಿಚಕ್ರ ವಾಹನ, ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಐಪ್ಯಾಡ್ ಗಳು, ನಗದು ಬಹುಮಾನ, ಅಲೆಮಾರಿ ಸಮುದಾಯಕ್ಕೆ ಸೇರಿದ ಸಾಧಕ ಯುವತಿಗೆ ಪ್ರೋತ್ಸಾಹ...ಇದಕ್ಕೆ ಸಾಕ್ಷಿಯಾಗಿ ನಾನಾ ಶಾಲೆಗಳ ಸಾವಿರಾರು ಮಕ್ಕಳು.
-ಇಲ್ಲಿನ ಜಯನಗರ ಹನ್ನೊಂದನೇ ಮುಖ್ಯರಸ್ತೆಯ ಆಟದ ಮೈದಾನದಲ್ಲಿ ಶನಿವಾರ ರಕ್ಷಾ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು. ರಕ್ಷಾ ಫೌಂಡೇಷನ್ ಸಂಸ್ಥಾಪಕರೂ ಆದ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಅವರ ಸಂಕಲ್ಪ ಶಕ್ತಿ 'ಅಬ್ಬಾ!' ಎನಿಸುವುದು ಇದೇ ಕಾರಣಕ್ಕೆ.
ರಕ್ಷಾ ಫೌಂಡೇಷನ್ ಶುರುವಾಗಿ ಎಂಟನೇ ವರ್ಷದ ಕಾರ್ಯಕ್ರಮವಿದು. ಅದನ್ನು ಇನ್ನಷ್ಟು ಜಿಲ್ಲೆ ಹಾಗೂ ತಾಲೂಕುಗಳಿಗೆ ವಿಸ್ತರಿಸುವ ಮಾತನಾಡಿದರು ರಾಮಮೂರ್ತಿ. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ವಿಧಾನಪರಿಷತ್ ಸದಸ್ಯೆ ತಾರಾ ಸೇರಿದಂತೆ ಹಲವರು ಪಾಲ್ಗೊಂಡರು.
ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಪುಟಾಣಿ ಮಕ್ಕಳು ತುಂಬ ಸೊಗಸಾಗಿ ರಂಜನೆ ನೀಡಿದರು. ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಮಕ್ಕಳೊಂದಿಗೆ ಪುಟ್ಟ ಸಂವಾದವನ್ನೇ ನಡೆಸಿದರು. ಸುದೀರ್ಘ ಭಾಷಣವೊಂದರಲ್ಲಿ ದಾಟಿಸಲಾಗದ ಎಷ್ಟೋ ವಿಚಾರಗಳನ್ನು ಪ್ರಶ್ನೋತ್ತರ ರೂಪದಲ್ಲಿ ಮಕ್ಕಳ ಎದುರು ಅವರು ನಿರೂಪಿಸಿದರು.
ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಮಕ್ಕಳಿಗೆ ತುಂಬ ಚೆನ್ನಾಗಿ ಅರ್ಥವಾಗುವ ರೀತಿಯಲ್ಲೇ ಹಲವು ವಿಚಾರಗಳನ್ನು ತಿಳಿಸಿಕೊಟ್ಟರು. ಎಷ್ಟಾದರೂ ಆದಿ ಚುಂಚನಗಿರಿ ಮಠವು ಅದೆಷ್ಟೋ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಅದರ ಅನುಭವದಲ್ಲಿ ಮಕ್ಕಳಿಗೆ ಉಪಯುಕ್ತವಾದ ವಿಚಾರಗಳನ್ನು ತಿಳಿಸಿಕೊಟ್ಟರು.
ಮನುಷ್ಯನ ಬದುಕು ನಶ್ವರ, ಅಷ್ಟರಲ್ಲಿ ಒಳ್ಳೆಯದನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಅದಕ್ಕೆ ರಕ್ಷಾ ಫೌಂಡೇಷನ್ ಒಳ್ಳೆ ಉದಾಹರಣೆ. ಇಂಥ ಒಳ್ಳೆ ಕೆಲಸದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್.
ಟಿವಿ ನೈನ್ ವಾಹಿನಿಯ ಮಾರುವೇಷ ಕಾರ್ಯಕ್ರಮದಲ್ಲಿ ಗಂಗಮ್ಮ ಎಂಬ ಹೆಣ್ಣುಮಗಳ ಬಗ್ಗೆ ಕಾರ್ಯಕ್ರಮ ಪ್ರಸಾರವಾಗಿತ್ತಂತೆ. ಆಕೆ ಬಡತನದ ಮಧ್ಯೆಯೇ ಐಎಎಸ್ ಗೆ ಓದಿಕೊಳ್ಳುತ್ತಿದ್ದು, ಆಕೆಗೆ ನೆರವಾಗಬೇಕು ಅನ್ನೋ ಕಾರಣಕ್ಕೆ ರಕ್ಷಾ ಫೌಂಡೇಷನ್ ನಿಂದ ಐವತ್ತು ಸಾವಿರ ನಗದು ಪುರಸ್ಕಾರ ನೀಡಲಾಯಿತು.
ವೇದಿಕೆ ಮೇಲೆ ಜಯನಗರ ವಿಧಾನಸಭಾ ಕ್ಷೇತ್ರದ ದಿವಂಗತ ಶಾಸಕ ಬಿ.ಎನ್.ವಿಜಯ್ ಕುಮಾರ್ ಭಾವಚಿತ್ರ ಇದ್ದಿದ್ದು, ಅವರಿಗೆ ಗೌರವ ಸಲ್ಲಿಸಿದಂತಿತ್ತು. ಇನ್ನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿ.ಎನ್.ಪ್ರಹ್ಲಾದ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ತುಂಬ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಲಾಗಿತ್ತು.
ನಿರ್ಮಲಾನಂದನಾಥ ಸ್ವಾಮೀಜಿ, ಅನಂತ ಕುಮಾರ್ ಹಾಗೂ ಆರ್.ಅಶೋಕ್, ತಾರಾ ಮತ್ತಿತರರು ವೇದಿಕೆಯಿಂದ ಹೊರಟ ಮೇಲೆ ನಟ ಧ್ರುವ ಸರ್ಜಾ ಬಂದರು. ಅವರು ಮೈದಾನದ ಗೇಟಿನ ಬಳಿ ಬರುತ್ತಿದ್ದಂತೆಯೇ ಖುಷಿಗೊಂಡ ಮಕ್ಕಳು ಎದ್ದುಬಿದ್ದು ಅತ್ತ ಓಡಿದರು. ಕಾರ್ಯಕ್ರಮಕ್ಕೆ ಬಂದಿದ್ದವರು ಸೆಲ್ಫಿ ತೆಗೆದುಕೊಂಡ ಖುಷಿಪಟ್ಟರು.