ಮಕ್ಕಳ ಚಪ್ಪಲಿಯಲ್ಲಿ ಸಾಗಿಸುತ್ತಿದ್ದ ಒಂದೂವರೆ ಕೇಜಿ ಚಿನ್ನ ವಶಕ್ಕೆ
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಮಾರ್ಚ್ 27 : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡು, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದವರು ಬಂಧಿಸಿದ್ದಾರೆ.
ಮಂಗಳೂರು: ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಚಿನ್ನ ವಶ, 4 ಬಂಧನ
ದುಬೈನಿಂದ ಬೆಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ ಹೆಣ್ಣುಮಕ್ಕಳ ಚಪ್ಪಲಿ, ಸೌಂದರ್ಯ ಆಭರಣಗಳಲ್ಲಿ ಅಡಿಗಿಸಿಟ್ಟಿದ್ದ ಸುಮಾರು ಅರ್ಧ ಕೆ.ಜಿ. ಚಿನ್ನವನ್ನು ಸಾಗಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯನ್ನು ಕಸ್ಟಮ್ಸ್ ಆಯುಕ್ತ ಶಿವಪ್ರಕಾಶ್ ಬಡ್ಡಿ, ಸೂಪರಿಂಟೆಂಡೆಂಟ್ ವಸಂತ್ ಮಗೋಡ್, ಭಾನು ಶ್ರೀನಿವಾಸ್, ಇನ್ ಸ್ಪೆಕ್ಟರ್ ರಣಧೀರ್, ಹರ್ ಪ್ರೀತ್, ನವೀನ್ ಭಾಗವಹಿಸಿದ್ದರು.
ಅದೇ ದಿನ ಗೋಧಿ ಹಿಟ್ಟಿನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಸೂಡಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು. ಅವರಿಂದ ಒಂದು ಕೆ.ಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದರು. ಎಮರೇಟ್ಸ್ ವಿಮಾನದಲ್ಲಿ ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಖದೀಮರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಕಳ್ಳ ಸಾಗಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎರಡು ದಿನಗಳಲ್ಲಿ ಒಂದೂವರೆ ಕೆ.ಜಿ ಚಿನ್ನವನ್ನು ವಶಕ್ಕೆ ತೆಗೆದುಕೊಂಡು ಮೂವರನ್ನು ಜೈಲಿಗಟ್ಟಲಾಗಿದೆ.
ಇನ್ನು ಈ ರೀತಿ ಕಸ್ಟಮ್ಸ್ ಕೈಗೆ ಸಿಕ್ಕಿಬೀಳುವ ಬಹುತೇಕ ಖದೀಮರು ದುಬೈನಿಂದ ಬರುವ ವಿಮಾನಗಳಲ್ಲಿ ಬರುತ್ತಿದ್ದು, ಅಲ್ಲಿ ಅಕ್ರಮವಾಗಿ ಚಿನ್ನ ರವಾನಿಸುವವರ ಗುಂಪು ಇದೆಯಾ ಎಂಬ ಸಂಶಯಕ್ಕೆ ಕಾರಣವಾಗಿದೆ.