'ಓಖಿ' ಅಬ್ಬರ : ಮಳೆ, ಚಳಿಗೆ ನಡುಗುತ್ತಿದೆ ಬೆಂಗಳೂರು
ಬೆಂಗಳೂರು, ಡಿಸೆಂಬರ್ 01 : ತಡರಾತ್ರಿಯಿಂದ ತುಂತುರು ಮಳೆ. ಛತ್ರಿ ಇಲ್ಲದೇ ಹೊರಗೆ ಕಾಲಿಡುವಂತಿಲ್ಲ. ಮಳೆಯ ಜೊತೆಗೆ ಚಳಿ, ಗಾಳಿ. ಇದು ಬೆಂಗಳೂರಿನ ಈಗಿನ ಪರಿಸ್ಥಿತಿ. ಇದಕ್ಕೆ ಕಾರಣ 'ಓಖಿ' ಚಂಡಮಾರುತ.
ತಮಿಳುನಾಡಿನ ಸೈಕ್ಲೋನ್ ಎಫೆಕ್ಟ್: ರಾಜ್ಯದಲ್ಲಿ ಮೂರು ದಿನ ತುಂತುರು ಮಳೆ
ಶುಕ್ರವಾರ ಮುಂಜಾನೆಯ ತುಂತುರು ಮಳೆ ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ನಗರದಲ್ಲಿ ಗುರುವಾರ ರಾತ್ರಿಯಿಂದ ಮಳೆಯಾಗುತ್ತಿದೆ.
'ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನ ತುಂತುರು ಮಳೆ ಮುಂದುವರೆಯಲಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಎಂ.ಮೇತ್ರಿ ಹೇಳಿದ್ದಾರೆ.
'ಓಖಿ' ಅಬ್ಬರಕ್ಕೆ ತಮಿಳುನಾಡು, ಕೇರಳ ತತ್ತರ
ಬೆಂಗಳೂರು, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಸಾಧಾರಣ ಮಳೆಯಾಗಲಿದೆ. ತೇವಾಂಶ ಭರಿತ ಗಾಳಿ ಬೀಸುತ್ತಿರುವುದರಿಂದ ಚಳಿಯ ಅನುಭವವಾಗುತ್ತಿದೆ ಎಂದು ಇಲಾಖೆ ಹೇಳಿದೆ.
ತಮಿಳುನಾಡಿನಲ್ಲಿ ಭಾರೀ ಮಳೆ : 'ಓಖಿ' ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. 8 ಜನರು ಇದುವರೆಗೂ ಮಳೆಗೆ ಬಲಿಯಾಗಿದ್ದಾರೆ. ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕೇರಳ ರಾಜ್ಯದಲ್ಲಿಯೂ ಭಾರೀ ಮಳೆಯಾಗುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಶಬರಿಮಲೆ ಯಾತ್ರಿಕರು ಸಂಜೆ 6 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಕಾಡಿನ ಹಾದಿಯಲ್ಲಿ ಸಂಚಾರ ಮಾಡಬಾರದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಯಾತ್ರಿಕರಿಗೆ ಎಚ್ಚರಿಕೆ ನೀಡಿದೆ.