ಅದ್ಭುತ ಭರತನಾಟ್ಯ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಣವಾಂಜಲಿ 'ನೃತ್ಯಸಂಹಿತಾ'
ಅದ್ಭುತ ಭರತನಾಟ್ಯ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಣವಾಂಜಲಿ ನೃತ್ಯಸಂಹಿತಾ
ಬೆಂಗಳೂರು, ಜುಲೈ 14: ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಸ್ಕೃತಿಗೆ ಗೌರವ ಸೂಚಿಸುವ ಸಲುವಾಗಿ, ಪ್ರಣವಾಂಜಲಿ ಅಕಾಡೆಮಿ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ 'ನೃತ್ಯಸಂಹಿತಾ - 2018' ಕಾರ್ಯಕ್ರಮದಲ್ಲಿ ಯುವಪ್ರತಿಭೆಗಳು ಅದ್ಭುತ ಭರತನಾಟ್ಯ ಪ್ರದರ್ಶನ ನೀಡಿ, ನೆರೆದವರ ಮನಸೆಳೆದರು.
ಶನಿವಾರ ಸಂಜೆ (ಜು 14) ನಗರದ ಪದ್ಮಿನಿರಾವ್ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ವಿವಿಧ ಗುರುಗಳ ಅಡಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಭರತನಾಟ್ಯ, ಕಥಕ್ ನೃತ್ಯ ಪ್ರದರ್ಶಿಸಿದರು. ಇದರ ಜೊತೆಗೆ, ಪ್ರಣವಾಂಜಲಿ ತಂಡದಿಂದ ವಿಶೇಷ ಭರತನಾಟ್ಯ ಪ್ರದರ್ಶನವೂ ನಡೆಯಿತು.
ಪ್ರಣವಾಂಜಲಿ ಅಕಾಡೆಮಿಯ ನಿರ್ದೇಶಕಿಯರಾದ ವಿದುಷಿ ಪವಿತ್ರ ಮಂಜುನಾಥ್ ಮತ್ತು ಗಾಯತ್ರಿ ಮಯ್ಯ ಸಹೋದರಿಯರು, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಈ ನೃತ್ಯಹಬ್ಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬಾಲ ಪ್ರತಿಭೆಗಳಿಂದ ಹಿಡಿದು, ಈಗಾಗಲೇ ನಾಡಿನ ವಿವಿದೆಡೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದ ವೃತ್ತಿಪರ ಕಲಾವಿದರೂ, ಕಲಾ ಪ್ರದರ್ಶನ ನೀಡಿದ್ದು ವಿಶೇಷ.
ಪ್ರಣವಾಂಜಲಿ ತಮ್ಮ ಅಕಾಡೆಮಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಹಲವು ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಆಯೋಜಿಸುತ್ತಾ ಬರುತ್ತಿದೆ. ಜೊತೆಗೆ, ವರ್ಷಕ್ಕೊಮ್ಮೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಭರತನಾಟ್ಯ ಕಲಾವಿದರಿಗೆ ವೇದಿಕೆ ಕಲ್ಪಿಸಿ, ವಿದ್ಯಾರ್ಥಿಗಳ ಕಲಾ ಪ್ರದರ್ಶನವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದೆ.
ಪೂನಾ ಸೇರಿದಂತೆ ವಿವಿದೆಡೆಯಿಂದ ಬಂದ, ಜೊತೆಗೆ ಪ್ರಣವಾಂಜಲಿ ಅಕಾಡೆಮಿಯ ವಿದ್ಯಾರ್ಥಿಗಳು ಸೇರಿದಂತೆ ಇಪ್ಪತ್ತು ತಂಡಗಳು, ಭರತನಾಟ್ಯ, ಕೂಚುಪುಡಿ ಮತ್ತು ಕಥಕ್ ನೃತ್ಯ ಪ್ರದರ್ಶಿಸಿದರು. ಗುರು ಅಮಿತ್ ಚೌಧುರಿ ಮತ್ತು ಗುರು ಕೀರ್ತಿ ರಾಮಗೋಪಾಲ್ ಅವರ ಶಿಷ್ಯೆ, ಬಾಂಗ್ಲಾ ದೇಶದ ವಿದ್ಯಾರ್ಥಿನಿ ಭರತನಾಟ್ಯ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಡಾ. ಸೌಂದರ್ಯ ಶ್ರೀವಾಸ್ತವ, ಗುರು ಮೈಸೂರು ನಾಗರಾಜ್, ಗುರು ಬಿ ಕೆ ವಸಂತಲಕ್ಷ್ಮಿ, ಗುರು ರಾಜಶ್ರೀ ಹೊಳ್ಳ, ಗುರು ಮಂಜುಳಾ ಪರಮೇಶ್, ಗುರು ರುಕ್ಮಿಣಿ ವಿಜಯಕುಮಾರ್, ಗುರು ಸೀತಾ ಗುರುಪ್ರಸಾದ್, ಬಿ ಭಾನುಮತಿ, ಶೀಲಾ ಚಂದ್ರಶೇಖರ್, ಗುರು ಅರ್ಚನಾ ಸುಂಜಯ್, ಗುರು ದೀಪಾ ಭಟ್ ಅವರ ಶಿಷ್ಯೆಯರು ಕಾರ್ಯಕ್ರಮವನ್ನು ನೀಡಿದರು.