ಕರ್ನಾಟಕದ ಸಾಲಮನ್ನಾಕ್ಕೆ ನೆರವು ನೀಡಲು ಮೋದಿಗೆ ಎಂಇಪಿ ಆಗ್ರಹ
ಬೆಂಗಳೂರು, ಮೇ 31: ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರ ತನ್ನ ಇತಿಮಿತಿಯಲ್ಲಿ ರೈತರ ಸಾಲಮನ್ನಾ ಮಾಡಲು ದಿಟ್ಟ ನಿರ್ಧಾರ ತೆಗೆದುಕೊಂಡಿರುವುದನ್ನು ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾಶೇಕ್ ಸ್ವಾಗತಿಸಿದ್ದಾರೆ.
ಎಂಇಪಿ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಈ ಭರವಸೆ ರೈತರ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಿತ್ತು. ರಾಜ್ಯದ ಹಣಕಾಸು ಪರಿಸ್ಥಿತಿಯ ಇತಿಮಿತಿಯಲ್ಲಿ ಹಂತ ಹಂತವಾಗಿ ಎಲ್ಲ ರೈತರ ಸಾಲ ಮನ್ನಾ ಮಾಡುವ ಹಾಗೂ ಅವರನ್ನು ಆತ್ಮಹತ್ಯೆ ಗಳಿಂದ ಪಾರು ಮಾಡುವ ಅಗತ್ಯವಿದೆ. ವೈಜ್ಞಾನಿಕ, ಆಧುನಿಕ ಹಾಗೂ ಪರ್ಯಾಯ ಕೃಷಿ ಪದ್ದತಿಗಳ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ಹಾಗೂ ಸ್ವಾವಲಂಬಿ ಬದುಕಿಗೆ ನಾಂದಿ ಹಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ರೈತರ ಸಾಲಮನ್ನಾ ಕುರಿತ ಸಭೆಯಲ್ಲಿ ಏನೇನಾಯಿತು? ಇಲ್ಲಿದೆ ಪೂರ್ತಿ ವಿವರ
ಈ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಕರ್ನಾಟಕದ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು ರಾಜ್ಯ ಸರ್ಕಾರವೂ ಹಂತ-ಹಂತವಾಗಿ ಅನ್ನದಾತ ರೈತರ ಸಾಲ ಮನ್ನಾ ಮಾಡಲು ರೂಪುರೇಷೆ ಸಿದ್ದಪಡಿಸಲು ತೆಗೆದುಕೊಂಡಿರುವ ಕ್ರಮಗಳು ಆಶಾಯದಾಯಕ ಬೆಳವಣಿಗೆ ಆಗಿವೆ.
ರೈತರ ಸಾಲಮನ್ನಾ ನಿಜವಾದ ಬಡವರಿಗೆ ಮತ್ತು ಅರ್ಹ ರೈತರಿಗೆ ಮುಟ್ಟಬೇಕು, ತಲುಪಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಈ ಸುವರ್ಣ ಅವಕಾಶವನ್ನು ನಾಡಿನ ರೈತ ಸಮುದಾಯ ಸದುಪಯೋಗ ಪಡಿಸಿಕೊಳ್ಳಬೇಕು ಕೂಡಲೇ ನೋಡಲ್ ಅಧಿಕಾರಿಗಳಿಗೆ ಸಾಲದ ದಾಖಲಾತಿಗಳನ್ನು ಸಲ್ಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ರೈತರ ಸಾಲಮನ್ನಾದ ವಿಚಾರ ನಿಜಕ್ಕೂ ಜಟಿಲ ಸಮಸ್ಯೆ ಎಂಬುದರಲ್ಲಿ ಬೇರೆ ಮಾತೆಯಿಲ್ಲ ನಾಡಿನ ಬುದ್ಧಿಜೀವಿಗಳು, ಪ್ರಗತಿಪರ ರೈತರು, ಆರ್ಥಿಕ ಕ್ಷೇತ್ರದ ಪರಿಣಿತರು, ಬ್ಯಾಂಕಿಂಗ್ ಕ್ಷೇತ್ರದ ತಜ್ಞರು ಎಲ್ಲರು ಒಟ್ಟಾಗಿ ಸೇರಿ ಈ ಸಮಸ್ಯೆಗೆ ಪರಿಹಾರ ಹುಡುಕಿ ಅನ್ನದಾತನನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ.
ರೈತರ ಸಾಲಮನ್ನಾ ಮಾಡುವುದು ಎಷ್ಟರ ಮಟ್ಟಿಗೆ ಸರಿ: ಈ ಪ್ರಶ್ನೆಗಳು ಹಲವು ದಿನಗಳಿಂದ ಕೇಳಿ ಬರುತ್ತಲೇ ಇವೆ ಬರಿ ಚರ್ಚೆ ಮಾಡಿಕೊಂಡು ಕಾಲಹರಣ ಮಾಡುವುದು ಸರಿಯಲ್ಲ ಅನ್ನದಾತ ತೀರ ಕಷ್ಟದಲ್ಲಿದ್ದಾನೆ. ಮುಂಗಾರು ಹೊಸ ಭರವಸೆ ಹುಟ್ಟಿಸಿದೆ ಇದಕ್ಕೆ ತಕ್ಕಂತೆ ಸಮಿಶ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಅದಕ್ಕೆ ರೈತರ ಹಿತ ರಕ್ಷಣೆ ದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲರ ಸಹಕಾರವು ತುಂಬ ಅಗತ್ಯವಾಗಿದೆ.
ಇನ್ನು ಮುಂದೆ ರೈತರಿಗೆ ಬೆಳೆನಷ್ಟವಾದ ಸಮಯದಲ್ಲೇ ಸೂಕ್ತ ವಿಮಾ ಸೌಲಭ್ಯ ಕಲ್ಪಿಸುವುದು ಹಾಗೂ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ ಮುಂದೆ ಸಾಲಮನ್ನಾ ಮಾಡಬೇಕಾದ ಪ್ರಮೇಯವೇ ಬರುವುದಿಲ್ಲ ಈ ನಿಟ್ಟಿನಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಗಮನಹರಿಸಿ ಕಾರ್ಯಕ್ರಮ ರೂಪಿಸಬೇಕೆಂದು ಡಾ.ನೌಹೀರಾ ಶೇಕ್ ಮನವಿ ಮಾಡಿಕೊಂಡಿದ್ದಾರೆ.