ಸೋರುತಿಹುದು ನಾಯಂಡಹಳ್ಳಿ ಅಂಡರ್ ಪಾಸ್ ಮಾಳಿಗೆ
Recommended Video
ಬೆಂಗಳೂರು, ಅಕ್ಟೋಬರ್ 14 : ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಅಂಡರ್ ಪಾಸ್ ಮೂಲಕ ಸಾಗುವ ಪ್ರತಿಯೊಬ್ಬರು ಮಾಳಿಗೆಯಿಂದ ಸೋರುತ್ತಿರುವ 'ಪವಿತ್ರ' ಜಲವನ್ನು ಪ್ರೋಕ್ಷಣೆ ಮಾಡಿಸಿಕೊಳ್ಳದೆ ಮನೆಯನ್ನು ತಲುಪಲು ಸಾಧ್ಯವೇ ಇಲ್ಲ.
ಮಳೆಯಿಂದ ಮಹಿಳೆಯ ರಕ್ಷಣೆ ಮಾಡಿದ ವಿಡಿಯೋ ವೈರಲ್
ದಿ ಆರ್ಕಿಟೆಕ್ಟ್ ಆಫ್ ಮಾಡರ್ನ್ ಬೆಂಗಳೂರು ಅಲಿಯಾಸ್ ಬಿಡಿಎ ಹೊರವರ್ತುಲ ರಸ್ತೆಯಲ್ಲಿ ನಿರ್ಮಿಸಿರುವ ಈ ಅಂಡರ್ ಪಾಸ್ ಯಾವ ಪರಿ ಸೋರುತ್ತಿದೆಯೆಂದರೆ, ನೀವೇನೇ ಹರಸಾಹಸ ಮಾಡಿ ಅದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರೋಕ್ಷಣೆ ಮಾಡಿಸಿಕೊಳ್ಳದೆ ಪಾರಾಗುವುದು ಅಸಾಧ್ಯ.
ಮೊದಲೇ, ಮೈಸೂರು ರಸ್ತೆಯಲ್ಲಿ ಓಡಾಡುವವರ ಪಾಲಿಗೆ ನಾಯಂಡಹಳ್ಳಿ ಜಂಕ್ಷನ್ ಮೃತ್ಯುಕೂಪವಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದೆ ನಟೋರಿಯಸ್ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಓರ್ವ ಮಹಿಳೆ ಯಮನ ಪಾದ ಸೇರಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಟೆಂಪೋ ಬಲಿ ತೆಗೆದುಕೊಂಡಿತ್ತು.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಇನ್ನು ಟ್ರಾಫಿಕ್ ಜಾಮ್ ಬಗ್ಗೆ ಹೇಳುವುದೇ ಬೇಡ. ಇದೀಗ ಮತ್ತೊಂದು ಕುಖ್ಯಾತಿಗೆ ನಾಯಂಡಹಳ್ಳಿ ಜಂಕ್ಷನ್ ಪಾತ್ರವಾಗಿದೆ. ಮಳೆ ಬಂದರೆ ಸಾಕು ಮಾಳಿಗೆಯಿಂದ ಸತತವಾಗಿ ನೀರು ಸುರಿಯಲು ಪ್ರಾರಂಭಿಸುತ್ತದೆ. ಕೆಲವೊಂದೆಡೆಯಲ್ಲಿ ಜಲಪಾತದಂತೆ ನೀರು ಬೀಳುತ್ತದೆ. ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ ಎಂಬ ಷರೀಫರ ಹಾಡು ಮನಸಿಗೆ ಬಂದೇಬರುತ್ತದೆ.
ಬೆಂಗಳೂರಲ್ಲಿ ಮಳೆಗೆ 4 ಬಲಿ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ಹೀಗೆ ಆಗುತ್ತಿರುವುದು ಇಂದು ನಿನ್ನೆಯದಲ್ಲ, ಪ್ರತಿ ಮಳೆಗಾಲದಲ್ಲಿ ಮಾಳಿಗೆ ಸೋರುವುದು ಸರ್ವೇಸಾಮಾನ್ಯ. ಒಂದು ಸಣ್ಣ ಮಳೆ ಸುರಿದರೂ ಸಾಕು, ಮಾಳಿಗೆಯಿಂದ ನೀರು ಸೋರುವುದು ಶತಸಿದ್ಧ. ಇಷ್ಟೆಲ್ಲ ಆದರೂ, ಇದನ್ನು ರಿಪೇರಿ ಮಾಡುವ ಗೋಜಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೋಗಿಲ್ಲದಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಅಂಡರ್ ಪಾಸ್ ನಿರ್ಮಾಣದ ಗುಣಮಟ್ಟ ಅಷ್ಟು ಕೆಟ್ಟದಾಗಿದೆ. ಅದೆಷ್ಟು ವರ್ಷ ಹೀಗೇ ಇರಲು ಸಾಧ್ಯ? ಮುಂದೊಂದು ದಿನ ಭಾರೀ ಅನಾಹುತವಾಗುವ ಮೊದಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂಡರ್ ಪಾಸ್ ಅನ್ನು ದುರಸ್ತಿ ಮಾಡುವುದೊಳಿತು.
ಇಷ್ಟು ಸಾಲದೆಂಬಂತೆ, ನಾಗರಬಾವಿಯಿಂದ ಮೈಸೂರು ರಸ್ತೆ ಕೂಡಿಕೊಳ್ಳುವ ಮಾರ್ಗದಲ್ಲಿ, ಫ್ಲೈಓವರ್ ಏರುವ ಮುನ್ನ ಒಂದು ದೊಡ್ಡದಾದ ರಸ್ತೆ ಗುಂಡಿ ಕೂಡ ಬಾಯಿ ತೆರೆದುಕೊಂಡಿದೆ. ಕೆಲ ದಿನಗಳವರೆಗೆ ಅದನ್ನು ತಪ್ಪಿಸಲೆಂದು ಗ್ರಿಲ್ ಇಡಲಾಗಿತ್ತು. ಈಗ ಅದನ್ನೂ ತೆಗೆಯಲಾಗಿದ್ದು, ಅದರ ಬಗ್ಗೆ ಗೊತ್ತಿಲ್ಲದಿರುವುದು ಬೀಳುವುದು ಗ್ಯಾರಂಟಿ.
ಅದ್ಯಾವ ಇಂಜಿನಿಯರ್ ನಾಯಂಡಹಳ್ಳಿ ಜಂಕ್ಷನ್ ಡಿಸೈನ್ ಮಾಡಿದ್ದನೋ, ಅರ್ಧ ಗಂಟೆ ಜೋರಾಗಿ ಮಳೆ ಬಂದ್ರೂ ಸಾಕು, ಇಬ್ಬರು ಮುಳುಗುವಷ್ಟು ಕೆರೆ ನಿರ್ಮಾಣವಾಗುತ್ತದೆ. ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಒಂದು ಕಾರು ಮುಳುಗುವ ಹಂತದಲ್ಲಿದ್ದಾಗ ಸಾರ್ವಜನಿಕರೇ ಹೋಗಿ ಅವರನ್ನು ಪಾರು ಮಾಡಿ ಸಾಹಸ ಮೆರೆದಿದ್ದಾರೆ.