ಸಿನಿಮಿಯ ಶೈಲಿ ದಾಳಿ: ಪೊಲೀಸ್ ಫೈರಿಂಗ್ ನಲ್ಲಿ ರೌಡಿ ಬಲಿ
ಬೆಂಗಳೂರು, ನವೆಂಬರ್, 7: ಹಲ್ಲೆಗೆ ಯತ್ನಿಸಿದ ರೌಡಿಗಳ ಮೇಲೆ ಪೊಲೀಸರು ನಡೆಸಿದ ಫೈರಿಂಗ್ ನಲ್ಲಿ ಕುಖ್ಯಾತ ರೌಡಿಯೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿಯ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಇಲ್ಲಿಯ ಉಲ್ಲಾಳ ಉಪನಗರದ ವಿದ್ಯಾನಿಕೇತನ ಶಾಲೆ ಬಳಿ ಈ ಘಟನೆ ನಡೆದಿದ್ದು, ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ರೌಡಿಗಳನ್ನು ಪೋಲಿಸರು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ.
ಪೊಲೀಸರು ಬಂಧಿಸಲು ಬಂದಿರುವ ವಿಷಯ ತಿಳಿದ ರೌಡಿಗಳು ಸಿನಿಮಿಯ ಶೈಲಿಯಲ್ಲಿ ಪೊಲೀಸರ ಮೇಲೆ ಮಚ್ಚುಲಾಂಗ್ ಗಳಿಂದ ಮರಣಾಂತಿಕವಾಗಿ ದಾಳಿ ಮಾಡಿದ್ದಾರೆ.
ರೌಡಿಗಳ ದಾಳಿಯಿಂದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಭರ್ಮಪ್ಪ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿಗಳ ಮಚ್ಚು ಲಾಂಗ್ ಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ ಎಂದು ಉತ್ತರ ವಲಯ ಡಿಸಿಪಿ ಲಬೂರಾಮ್ ತಿಳಿಸಿದರು.
ಘಟನೆಯಲ್ಲಿ ಮೃತಪಟ್ಟ ರೌಡಿಯನ್ನು ಆಶಿಸ್(32) ಎಂದು ಗುರುತಿಸಲಾಗಿದೆ. ಉಳಿದ ಮೂವರನ್ನು ಕೂಡ ಈ ದಾಳಿಯಲ್ಲಿ ಬಂಧಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಗಳು ಅಡ್ಡಾದಿಡ್ಡಿಯಾಗಿ ವಾಹನ ಚಾಲಾಯಿಸಿ ಓರ್ವ ಮಹಿಳೆ ಮೇಲೆ (ಮಾರುತಿ ಸ್ವಿಫ್ಟ್ ಕೆಎ. 04 ಎಎ 9089) ವಾಹನ ಹರಿಸಿದ್ದಾರೆ. ನಂತರ ಪೊಲೀಸ್ ವಾಹನಕ್ಕೂ ಗುದ್ದಿದ್ದಾರೆ.