ಕನ್ನಡ ವಿರೋಧಿ ಐಎಎಸ್ ಅಧಿಕಾರಿಯ ಬಣ್ಣ ಪಬ್ಲಿಕ್ ಆಯ್ತು
ಬೆಂಗಳೂರು, ಮಾರ್ಚ್ 16: ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ ಎಂಬುದು ಗೋಡೆ ಬರಹ ಅಷ್ಟೇನಾ ಎಂಬ ಅನುಮಾನ ಮೂಡುವಂಥ ವರದಿ ಇದು. ಹತ್ತು ವರ್ಷದಿಂದ ಕರ್ನಾಟಕದಲ್ಲಿ ಇರುವ ಐಎಎಸ್ ಅಧಿಕಾರಿ- ಸಾರ್ವಜನಿಕ ಉದ್ದಿಮೆಗಳ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅವರ ಕನ್ನಡದ ಬಗ್ಗೆ ಇರುವ ಧೋರಣೆಯನ್ನು ತಿಳಿಯುವ ಸನ್ನಿವೇಶ ಬಂದಿದೆ.
ದೆಹಲಿ ಮೂಲದ ಇವರಿಗೆ ಕನ್ನಡ ಅಂದರೆ ಆಗಲ್ಲವಂತೆ. ಕಚೇರಿ ಕಡತಗಳನ್ನು ಇಂಗ್ಲಿಷ್ ನಲ್ಲಿ ನೀಡುವಂತೆ ಕಿರಿಯ ಅಧಿಕಾರಿಗಳಿಗೆ ಜಬರ್ ದಸ್ತ್ ಕೂಡ ಮಾಡುತ್ತಾರೆ ಎಂಬುದು ಆರೋಪ. ಅಷ್ಟೇ ಅಲ್ಲ, ಅವರ ಈ ಧೋರಣೆಯಿಂದಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಸ್ ಕೂಡ ಪಡೆದಿದ್ದಾರೆ.[ಕನ್ನಡದಲ್ಲೇ ಮಾಹಿತಿ ನೀಡಿದ್ರೆ ಮಾತ್ರ ಉತ್ಪನ್ನ ಕೊಳ್ತೇನೆ!]
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಗುರುವಾರ ಬೆಳಗ್ಗೆ ವರದಿ ಪ್ರಕಟವಾಗಿದ್ದು, ಆ ವೇಳೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ, ಈ ಬಗ್ಗೆ ನಮ್ಮ ಗಮನಕ್ಕೆ ಬಂದು, ಕಾರಣ ಕೇಳಿ ನೋಟಿಸ್ ನೀಡಿದ್ದೀವಿ. ಇಂಥ ಅಧಿಕಾರಿಗಳಿಗೆ ದಂಡನೆ ಆಗದ ಹೊರತು ಬುದ್ಧಿ ಬರುವುದಿಲ್ಲ. ಅವರು ತಿದ್ದುಕೊಳ್ಳದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಶಿಫಾರಸು ಮಾಡ್ತೀವಿ ಎಂದಿದ್ದಾರೆ. ಇನ್ನೊಂದು ವಿಚಾರ ಏನೆಂದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರಂತೆ.[ಕನ್ನಡ ಬಳಸಲು ನಿರಾಕರಿಸಿದ ಅಮೆಜಾನ್ ಗೆ ನೋಟಿಸ್]
ಆದರೆ, ಇದು ಒಬ್ಬ ಐಎಎಸ್ ಅಧಿಕಾರಿಯ ಕನ್ನಡ ವಿರೋಧಿ ಧೋರಣೆಯಾ ಎಂಬುದು ಪ್ರಶ್ನೆ. ಏಕೆಂದರೆ ಇದೊಂದು ಆರೋಪ ಯಾವಾಗಲೂ ಕೇಳಿಬರುತ್ತದೆ. ಅಧಿಕಾರಿಗಳ ಕನ್ನಡ ವಿರೋಧಿ ಧೋರಣೆ ಬಗ್ಗೆ ಒಂದು ಸಲ ಗಂಭೀರ ಕ್ರಮ ಕೈಗೊಂಡು, ಆ ನಂತರ ಸುಮ್ಮನಾಗುವುದು ಸರಿಯಲ್ಲ. ಇಂಥವರ ವಿರುದ್ಧ ಉಳಿದವರೂ ಎಚ್ಚರವಾಗುವಂಥ ಕ್ರಮ ತೆಗೆದುಕೊಳ್ಳಬೇಕು.