ನೋಟ್ ನಿಷೇಧ ಎಫೆಕ್ಟ್ : ಮನೆ ಕೊಳ್ಳುವವರಿಗೆ ಆಮಿಷ
ಮನೆಸಾಲ ಬಡ್ಡಿದರ ಶೇ.1ರಿಂದ 2ರಷ್ಟು ಕಡಿಮೆಯಾದರೆ ಮನೆಸಾಲದ ಇಎಂಐ ಶೇ.10ರಿಂದ 15ರಷ್ಟು ಕಡಿಮೆಯಾಗಲಿದೆ. ಇದರಿಂದ ಮನೆ ಕೊಳ್ಳುವ ಗ್ರಾಹಕರಿಗೆ ಭಾರೀ ಉತ್ತೇಜನ ನೀಡಿದಂತಾಗುತ್ತದೆ.
ಬೆಂಗಳೂರು, ಡಿಸೆಂಬರ್ 08 : ಹಳೆ ನೋಟುಗಳ ನಿಷೇಧ ದೇಶಾದ್ಯಂತ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಭಾರೀ ಹೊಡೆತ ನೀಡಿದೆ. ಮನೆ, ನಿವೇಶನಗಳ ಮಾರಾಟ ಪಾತಾಳಕ್ಕೆ ಕುಸಿದಿದ್ದು, ಕೊಳ್ಳುವವರಿಗೆ ಉತ್ತೇಜನ ನೀಡಲು ಬಿಲ್ಡರ್ ಗಳು ಹೊಸಬಗೆಯ ಆಮಿಷ ನೀಡಲು ಆರಂಭಿಸಿದ್ದಾರೆ.
ಮನೆ ಕೊಳ್ಳುವ ಕನಸು ಕಾಣುತ್ತಿದ್ದ ಜನರು ಅಪನಗದೀಕರಣ ಆರಂಭವಾಗುತ್ತಿದ್ದಂತೆ ಆಸ್ತಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಪ್ಪುಹಣದ ಮೇಲೆಯೇ ಕೊಡುಕೊಳ್ಳುವಿಕೆ ನಿಂತಿರುವುದರಿಂದ ಸಹಜವಾಗಿ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ.
ಈ ಹಿನ್ನೆಲೆಯಲ್ಲಿ, ದರಗಳು ಇನ್ನಷ್ಟು ಕುಸಿದರೆ ಹೂಡಿಕೆ ಹಾಕಿದವರಿಗೆ ಪರಿಹಾರ ನೀಡಲಾಗುವುದು ಅಥವಾ ಅಡ್ಜಸ್ಟ್ ಮೆಂಟ್ ಮಾಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಬಿಲ್ಡರ್ ಗಳು ನೀಡುತ್ತಿದ್ದಾರೆ. ಈ ಕಾರಣದಿಂದಲಾದರೂ ಕೊಳ್ಳುವವರು ಮುಂದೆ ಬರುತ್ತಾರೆ ಎಂಬ ಆಶಯದಿಂದ. [ನಿಮ್ಮ ಕನಸಿನ ಮನೆ ಹುಡುಕ್ತಿದ್ದೀರಾ, ಅದೀಗ ಇನ್ನೂ ಸುಲಭ!]
ಹಳೆ 500 ಮತ್ತು 1000 ನೋಟುಗಳನ್ನು ನಿಷೇಧಿಸಿ ಕಪ್ಪುಹಣದ ಮೇಲೆ ನರೇಂದ್ರ ಮೋದಿ ಸರಕಾರ ಯುದ್ಧ ಸಾರಿರುವುದರಿಂದ ಬೆಂಗಳೂರು ಸೇರಿದಂತೆ ಮುಂಬೈ, ಪುಣೆ, ದೆಹಲಿಗಳಲ್ಲಿ ವ್ಯಾಪಾರ ಮತ್ತು ವಿಚಾರಣೆ ಶೇ.40ರಷ್ಟು ಕುಸಿದಿದೆ. ಇಂತಹ ಹೊಡೆತ ಬೀಳುತ್ತದೆಂದು ಬಿಲ್ಡರ್ ಗಳು ಎಣಿಸಿರಲಿಲ್ಲ.
ಮಾರುವವರು ಮತ್ತು ಕೊಳ್ಳುವವರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿರುವುದರಿಂದ ಸೆಕಂಡರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಿಂತ ನೀರಿನಂತಾಗಿದೆ. ಮುಂಬೈನಲ್ಲಿ ಗ್ರಾಹಕರು ದರಗಳು ಇನ್ನೂ ಕುಸಿಯುತ್ತವಾ ಎಂದು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇದು ಗೊಂದಲದಿಂದ ಸೃಷ್ಟಿಯಾಗಿದೆ ಎಂದು ಕರ್ಮಾ ರಿಯಲ್ಟರ್ನ ನಿರ್ದೇಶಕ ಪ್ರಕಾಶ್ ರೋಹಿರಾ ಅಭಿಪ್ರಾಯಪಡುತ್ತಾರೆ.
ಮನೆಸಾಲ ಬಡ್ಡಿದರ ಶೇ.1ರಿಂದ 2ರಷ್ಟು ಕಡಿಮೆಯಾದರೆ ಮನೆಸಾಲದ ಇಎಂಐ ಶೇ.10ರಿಂದ 15ರಷ್ಟು ಕಡಿಮೆಯಾಗಲಿದೆ. ಇದರಿಂದ ಮನೆ ಕೊಳ್ಳುವ ಗ್ರಾಹಕರಿಗೆ ಭಾರೀ ಉತ್ತೇಜನ ನೀಡಿದಂತಾಗುತ್ತದೆ. ಆದರೆ, ಆ ರೀತಿಯಾಗುವುದಿಲ್ಲ ಎಂಬ ಆಶಾಭಾವನೆ ಹೊಂದಿದ್ದಾರೆ ಕಟ್ಟಡ ನಿರ್ಮಾತೃಗಳು.
ಬೆಂಗಳೂರಿನಲ್ಲಿ ಸನ್ನಿವೇಶ ವಿಭಿನ್ನವಾಗೇನೂ ಇಲ್ಲ. ಸಿಟ್ರಸ್ ವೆಂಚರ್ಸ್ ನಂಥ ಬಿಲ್ಡರ್ ಗಳು, ಒಂದು ವೇಳೆ ದರಗಳು ಕುಸಿದರೆ ನಿಗದಿತ ಹಣವನ್ನು ಮರಳಿಸುವ ಸ್ಕೀಂಗಳನ್ನು ಹರಿಯಬಿಟ್ಟಿದ್ದಾರೆ. ಇಂಥ ಸ್ಕೀಂಗಳಿಂದ ಬಿಲ್ಡರ್ ಗಳ ಉತ್ತರದಾಯಿತ್ವ ಹೆಚ್ಚುತ್ತದೆ ಮತ್ತು ಗ್ರಾಹಕರಲ್ಲಿಯೂ ವಿಶ್ವಾಸ ಗಳಿಸಿದಂತಾಗುತ್ತದೆ ಎನ್ನುತ್ತಾರೆ ಕಂಪನಿಯ ಸಿಇಓ ವಿನೋದ್ ಮೆನನ್.