ಬೆಂಗಳೂರಿಗರೇ, ನಮ್ಮ ಬೆಂಗಳೂರು ಪ್ರಶಸ್ತಿಗೆ ಹೆಸರು ಸೂಚಿಸಿ
ಬೆಂಗಳೂರು, ನವೆಂಬರ್ 07 : ಬೆಂಗಳೂರಿನ ಗತವೈಭೋಗ ಮರುಕಳಿಸುವಂತೆ ಮಾಡಲು ಬೆಂಗಳೂರು ನಗರದ ಸುಧಾರಣೆಗೆ ಹಗಲಿರುಳು ಶ್ರಮಿಸುತ್ತಿರುವ ಎಲೆ ಮರೆಯ ಕಾಯಿಯಂತೆ ದುಡಿಯುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಬೆನ್ನು ತಟ್ಟುವ ಪ್ರತಿಷ್ಠಿತ ನಮ್ಮ ಬೆಂಗಳೂರು ಅವಾರ್ಡ್ 2017 ನಾಮ ನಿರ್ದೇಶನ ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರು ನಗರದ ನಾಗರಿಕರ ಬದುಕಿನ ಗುಣಮಟ್ಟ ಮತ್ತು ಸೌಲಭ್ಯಗಳ ಸುಧಾರಣೆ ಹೀಗೆ ನಾನಾ ರೀತಿಯಲ್ಲಿ ಶ್ರಮಿಸುತ್ತಿರುವ ನಮ್ಮ ಬೆಂಗಳೂರು ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತಿದೆ. ಇದು ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರಶಸ್ತಿಯ 9ನೇ ಆವೃತ್ತಿ.
ಬೆಂಗಳೂರು ಸದಾ ಕ್ರಿಯಾಶೀಲ, ಜಾಗೃತ, ಬದಲಾವಣೆಗೆ ಹಾತೊರೆಯುವ ಮತ್ತು ನಾಗರಿಕರ ಬದುಕನ್ನು ಸಹ್ಯ ಹಾಗೂ ಸುಂದರಗೊಳಿಸಲು ಹಾತೊರೆಯುತ್ತಿರುವ ನಿಸ್ವಾರ್ಥ ಮನೋಭಾವದ ವ್ಯಕ್ತಿಗಳನ್ನು ನೀವು ಪ್ರಶಸ್ತಿಗೆ ಸೂಚಿಸಬಹುದು.
ಕಾರ್ಯಕ್ರಮದಲ್ಲಿ 'ಯು-ಟರ್ನ್' ಕನ್ನಡ ಚಲನಚಿತ್ರ ಖ್ಯಾತಿಯ ನಟಿ ಶ್ರಶ್ರೀನಾಥ್ ಅವರು ಸಾಧಕರ ಹೆಸರನ್ನು ನಾಮ ನಿರ್ದೇಶನ ನಮೂನೆಯಲ್ಲಿ ಸೂಚಿಸಿ ಪೆಟ್ಟಿಗೆಗೆ ಹಾಕುವ ಮೂಲಕ ನಾಮ ನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ನವೆಂಬರ್ 30ರ ಒಳಗೆ ನಗರದಲ್ಲಿರುವ ಅಸಾಧಾರಣ ವ್ಯಕ್ತಿಗಳನ್ನು ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಮಾಡಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನ ಘೋಷಿಸಿದೆ.
ಯಾವ ಯಾವ ಕ್ಷೇತ್ರಕ್ಕೆ ಈ ಬಾರಿಯ ಪ್ರಶಸ್ತಿ : ವರ್ಷದ ಸರ್ಕಾರಿ ಅಧಿಕಾರಿ, ವರ್ಷದ ನಾಗರಿಕ, ವರ್ಷದ ಉದಯೋನ್ಮುಖ ತಾರೆ, ವರ್ಷದ ಸಾಮಾಜಿಕ ಉದ್ಯಮಿ ಹಾಗೂ ವರ್ಷದ ಪತ್ರಕರ್ತ ಹಾಗೂ 2017ನೇ ಸಾಲಿನ ನಮ್ಮ ಬೆಂಗಳೂರಿಗ ಪ್ರಶಸ್ತಿಗಳಿಗೆ ಸೂಕ್ತ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ.
ಪ್ರಶಸ್ತಿ ಆಯ್ಕೆ ಮಾನದಂಡಗಳಿಗೆ ಅನುಗುಣವಾಗಿ ತೀರ್ಪುಗಾರರ ಸಮಿತಿಯು ಚರ್ಚೆ ಮಾಡಿ ಪ್ರತಿ ವಿಭಾಗದಲ್ಲಿ 5-6 ಮಂದಿಯನ್ನು ಅಂತಿಮಗೊಳಿಸುತ್ತದೆ. ಈ ಹಂತದಲ್ಲಿ ಆಯ್ಕೆಯಾದವರನ್ನು ತೀರ್ಪುಗಾರರ ಸಮಿತಿ ಸದಸ್ಯರೊಡನೆ ವಯಕ್ತಿಕವಾಗಿ ಚರ್ಚೆ ನಡೆಸಲು ಆಹ್ವಾನಿಸಲಾಗುತ್ತದೆ.
ಡಿಸೆಂಬರ್ನಲ್ಲಿ ನಾಮ ನಿರ್ದೇಶನವನ್ನು ಪರಿಶೀಲಿಸಲಾಗುತ್ತದೆ. ವಿವಿಧ ಕ್ಷೇತ್ರಗಳ 23 ಮಂದಿ ಸಾಧಕರನ್ನು ಒಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಗೆ ಸೂಕ್ತ ಸಾಧಕರನ್ನು ಆಯ್ಕೆ ಮಾಡಲಿದೆ.
ಕಾರ್ಯಕ್ರಮದಲ್ಲಿ ಕವಿ ಪ್ರೊ. ಜಿ.ಎಸ್ ಸಿದ್ದಲಿಂಗಯ್ಯ, ಸಿಟಿಜನ್ ಆಕ್ಷನ್ ಫೋರಂ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್. ಮುಕುಂದ, ಲೇಖಕಿ ಉಷಾ ರಾಜಗೋಪಾಲನ್ ಪಾಲ್ಗೊಂಡಿದ್ದರು.