ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ರಂಗಪ್ಪ ನೇಮಕ ಇಲ್ಲ: ಜಿಟಿಡಿ
ಬೆಂಗಳೂರು, ಜೂನ್ 23: ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ರಂಗಪ್ಪ ಅವರನ್ನು ನೇಮಕ ಮಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈ ಬಗ್ಗೆ ಹೇಳಿದ್ದಾರೆ, ಯಾವುದೇ ಕಾರಣಕ್ಕೂ ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ನೇಮಕ ಮಾಡುವುದಿಲ್ಲ, ಆದರೆ ಅವರ ಸಲಹೆಗಳನ್ನು ಪಡೆಯುತ್ತೇವೆ ಎಂದರು.
ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ
ಕರ್ನಾಟಕ ಮುಕ್ತ ವಿವಿ 2013-14 ರಿಂದ ಮಾನ್ಯತೆ ಕಳೆದುಕೊಂಡಿದೆ. ಇದುವರೆಗೂ ವಿವಿಗೆ ಮಾನ್ಯತೆ ದೊರೆತಿಲ್ಲ. ಅಂದಿನಿಂದ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದೇ ವಿವಿ ಕೋಮಾ ಸ್ಥಿತಿಯಲ್ಲಿದೆ. ಇದಕ್ಕೆ ರಂಗಪ್ಪ ಅವರೇ ನೇರವಾಗಿ ಕಾರಣರಾಗಿದ್ದು ಇಂಥವರನ್ನು ಉನ್ನತ ಶಿಕ್ಷಣ ಮಂಡಳಿಗೆ ನೇಮಿಸಬಾರದು ಎನ್ನುವ ವಿರೋಧದ ಮಾತುಗಳು ಕೇಳಿಬಂದಿದ್ದವು.
ಈ ವಿಚಾರದ ಕುರಿತು ದೇವೇಗೌಡ ಅವರು ಮಾತನಾಡಿ ರಂಗಪ್ಪ ಅವರ ಕುರಿತು ಇನ್ನಷ್ಟು ಚರ್ಚೆಗಳು ಬೇಡ, ಅವರು ತಪ್ಪು ಮಾಡಿದ್ದರೆ ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸುತ್ತಾರೆ, ಆದರೆ ಅವರನ್ನು ಇಲಾಖೆಯ ಸಲಹೆಗಾರರನ್ನು ಮಾಡುವ ವಿಚಾರವೇ ಇಲ್ಲ ಎಂದು ತಿಳಿಸಿದರು.