ಪಿಎಫ್ಐ ನಿಷೇಧದ ಬಗ್ಗೆ ಸರ್ಕಾರ ಚಿಂತಿಸಿಲ್ಲ : ರಾಮಲಿಂಗಾರೆಡ್ಡಿ
ಬೆಂಗಳೂರು, ಜನವರಿ 15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಈ ಬಗ್ಗೆ ಕರ್ನಾಟಕ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
'ಪಿಎಫ್ಐ ಸೇರಿದಂತೆ ಕೆಲ ಸಂಘಟನೆಗಳನ್ನು ನಿಷೇಧಿಸುವಂತೆ ಬೇಡಿಕೆಗಳು ಬಂದಿವೆ. ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಆದರೆ, ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಿದ್ದರಾಮಯ್ಯ ಅವರು ಸಮಾವೇಶ ಮುಗಿಸಿಕೊಂಡು ಬಂದ ಬಳಿಕ, ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಸರ್ಕಾರದ ನಿರ್ಧಾರ ಪ್ರಕಟಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಪಿಎಫ್ಐ, ಎಸ್ ಡಿ ಪಿಐ ನಿಷೇಧಕ್ಕೆ ಹಿಂದೂ ಪರ ಸಂಘಟನೆಗಳು, ಬಿಜೆಪಿ ಆಗ್ರಹಿಸಿರುವ ಹಿನ್ನಲೆಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕರಾವಳಿಯಲ್ಲಿನ ಹಿಂದೂ ಪರ ಕಾರ್ಯಕರ್ತರ ಕೊಲೆಗಳಿಗೆ ಪಿಎಫ್ ಐ, ಎಸ್ ಡಿ ಪಿಐ ಕಾರಣ ಎಂದು ಬಿಜೆಪಿ ಆರೋಪಿಸುತ್ತಾ ಬಂದಿದೆ. ಆದರೆ, ಸಂಘ ಪರಿವಾರದಿಂದ ಶಾಂತಿ ಕದಡುತ್ತಿದೆ ಎಂದು ಪಿಎಫ್ಐ ಪ್ರತಿಕ್ರಿಯಿಸಿದೆ.
ಪಿಎಫ್ ಐ ನಿಷೇಧದ ಬಗ್ಗೆ ಚರ್ಚೆ ನಡೆಸುವಾಗ ಎಸ್ ಡಿ ಪಿಐ ಅಲ್ಲದೆ, ಭಜರಂಗ ದಳ, ಆರೆಸ್ಸೆಸ್, ಶ್ರೀರಾಮಸೇನೆ ಸೇರಿದಂತೆ ಕೋಮು ಗಲಭೆ, ಪ್ರಚೋದನೆಗೆ ಕಾರಣವಾಗುವಾ ಎಲ್ಲಾ ಸಂಘಟನೆಗಳ ಮೇಲೆ ನಿರ್ಬಂಧ, ನಿಷೇಧ ಹೇರಿಕೆ ಬಗ್ಗೆ ಚರ್ಚಿಸಲಾಗುವುದು ಎಂದರು.