ನಮ್ಮ ಕುಟುಂಬದಿಂದ ಯಾರೂ ಚುನಾವಣೆ ಸ್ಪರ್ಧಿಸಲ್ಲ: ಶಿವರಾಜ್ ಕುಮಾರ್
Recommended Video
ದೊಡ್ಡಬಳ್ಳಾಪುರ, ಡಿಸೆಂಬರ್ 13: ಮುಂಬರುತ್ತಿರುವ 2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂದು ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರಕ್ಕೆ ಗ್ರೀನ್ ವ್ಯಾಲಿ ಬಡಾವಣೆ ಉದ್ಘಾಟನೆಗೆಂದು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಮಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ, ಒಂದು ಪಕ್ಷಕ್ಕೆ ಸೀಮಿತವಾಗುವುದು ಇಷ್ಟವಿಲ್ಲ, ಹಾಗಾಗಿ ಈ ಬಾರಿ ನಮ್ಮ ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದರು. ಕಳೆದ ಚುನಾವಣೆಯಲ್ಲಿ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಜೆಡಿಎಸ್ ನಿಂದ ಚುನಾವಣೆಯಿಂದ ಸ್ಪರ್ಧಿಸಿ ಸೋತಿದ್ದರು.
ಹೊಸ ಪಕ್ಷ ಕಟ್ಟಿರುವ ತಮ್ಮ ಸ್ನೇಹಿತ, ನಟ ಉಪೇಂದ್ರ ಅವರಿಗೆ ಶುಭ ಕೋರಿದ ಶಿವರಾಜ್ ಕುಮಾರ್, 'ಉಪೇಂದ್ರ ಅವರಿಗೆ ರಾಜಕೀಯ ಮುನ್ನೋಟ ಚೆನ್ನಾಗಿದೆ, ಸಾಕಷ್ಟು ಕನಸುಗಳಿವೆ, ಅವರು ರಾಜಕೀಯದಲ್ಲಿ ಯಶಸ್ಸು ಕಾಣಲಿ, ಅವರಿಗೆ ನನ್ನ ಬೆಂಬಲ ಇದೆ' ಎಂದರು.
'ದೊಡ್ಡಬಳ್ಳಾಪುರಕ್ಕೂ ನನಗೂ ತುಂಬಾ ನಂಟಿದೆ, ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ' ಎಂದ ಅವರು ಮಫ್ತಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿರುವವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು, ಸೆಲ್ಫಿ ತೆಗೆದುಕೊಳ್ಳಲು, ಕೈಕುಲುಕಲು ನೂಕುನುಗ್ಗಲು ಉಂಟಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.