ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಐಷಾರಾಮಕ್ಕೆ ಕತ್ತರಿ
ಬೆಂಗಳೂರು, ನ. 21: ಪ್ರಸಕ್ತ ವರ್ಷ ಬೆಳಗಾವಿಯಲ್ಲಿ ಆಯೋಜಿಸಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಶಾಸಕರಿಗೆ ಐಷಾರಾಮಿ ಸೌಲಭ್ಯ ಸಿಗುವುದು ಅನುಮಾನ.
ಹಿಂದಿನ ಅಧಿವೇಶನಗಳಲ್ಲಿ ಶಾಸಕರಿಗಾಗಿ ಉನ್ನತ ದರ್ಜೆಯ ಹೋಟೆಲ್ನಲ್ಲಿ ಕೋಣೆ ಕಾಯ್ದಿರಿಸಲಾಗಿತ್ತು. ಓಡಾಟಕ್ಕಾಗಿ ವಿಶೇಷ ಕಾರು ಹಾಗೂ ಭೂರಿ ಬೋಜನ ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚವಾಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಐಷಾರಾಮಿ ಸೌಲಭ್ಯಗಳನ್ನು ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ. [ಸಾಲು ಸಾಲು ಪ್ರತಿಭಟನೆಗೆ ಸಜ್ಜು]
ಏನೇನು ಸಿಗಲ್ಲ?: ಬೆಳಗಾವಿಯಿಂದ ಸುವರ್ಣ ಸೌಧಕ್ಕೆ ತೆರಳಲು ಪ್ರತ್ಯೇಕ ಕಾರು ಬದಲು, ಸಾಮೂಹಿಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನ ಸಾಮಾನ್ಯ ಊಟ ನೀಡಲಾಗುವುದು. ಆದರೆ, ರಾತ್ರಿ ಊಟದ ವ್ಯವಸ್ಥೆ ಶಾಸಕರದ್ದೇ ಜವಾಬ್ದಾರಿ. ಬೆಂಬಲಿಗರಂತೂ ಸರ್ಕಾರಕ್ಕೆ ಸಂಬಂಧವಿಲ್ಲ. ಶಾಸಕರಿಗೆ ವಿಶೇಷ ಭತ್ಯೆ ನೀಡುವುದಿಲ್ಲ. ಅಧಿಕಾರಿಗಳು ಹಾಗೂ ಪತ್ರಕರ್ತರಿಗೂ ಇದೇ ವ್ಯವಸ್ಥೆ. [10 ದಿನಕ್ಕೆ 14 ಕೋಟಿ ಖರ್ಚು]
ಈ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.