ಹೈಕಮಾಂಡ್ ಲೆಕ್ಕಕ್ಕಿಲ್ಲ, ಸಿದ್ರಾಮಯ್ಯನೇ ಎಲ್ಲ: ಕಾಂಗ್ರೆಸ್ ಮುಖಂಡ ವಾಗ್ದಾಳಿ
Recommended Video
ಕೆಲವು ದಿನಗಳ ಹಿಂದೆ ರೆಹಮಾನ್ ಖಾನ್, ಜಾಫರ್ ಷರೀಫ್ ಆದಿಯಾಗಿ ಹಿರಿಯ ಮುಸ್ಲಿಂ ಕಾಂಗ್ರೆಸ್ ಮುಖಂಡರು ಒಂದೆಡೆ ಸಭೆ ಸೇರಿ ತಮ್ಮ ಸಮುದಾಯದವರಿಗೆ ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಸೂಕ್ತ ಸ್ಥಾನಮಾನ ಸಿಗುವಂತಾಗಬೇಕು, ಅದಕ್ಕಾಗಿ ಹೈಕಮಾಂಡ್ ಭೇಟಿ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ಇದಾದ ನಂತರ ಅದೇನು ಬೆಳವಣಿಗೆ ನಡೆಯಿತೋ, ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಷರೀಫ್ ಅವರು ಸಿಎಂ ವಿರುದ್ದ ಅಸಮಾಧಾನ ಹೊರಹಾಕುವುದು ಹೊಸದಲ್ಲದಿದ್ದರೂ, ಅವರು ನೀಡಿದ ಹೇಳಿಕೆ ಹೈಕಮಾಂಡ್ ಮಾತು ಕರ್ನಾಟಕದಲ್ಲಿ ನಡೆಯುವುದಿಲ್ಲ ಎನ್ನುವ ಅರ್ಥ ಬರುವಂತಿದೆ.
ಜಾಫರ್ ಷರೀಫ್ ಅವರ ಮೊಮ್ಮಗ ಸಿ ಕೆ ಅಬ್ದುಲ್ ರೆಹಮಾನ್ ಷರೀಫ್ ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ, ಷರೀಫ್ ಮೊಮ್ಮಗನಿಗೆ ಟಿಕೆಟ್ ಸಿಗುವುದು ಡೌಟಿರುವ ಹಿನ್ನಲೆಯಲ್ಲಿ ಷರೀಫ್ ಸಿಎಂ ವಿರುದ್ದ ಕಿಡಿಕಾರಿರುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಎರಡು ಕಾಂಗ್ರೆಸ್ ಇದೆ ಒಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇನ್ನೊಂದು ಸಿದ್ದರಾಮಯ್ಯ ಕಾಂಗ್ರೆಸ್. ಕರ್ನಾಟಕದಲ್ಲಿ ಏನಿದ್ದರೂ ಸಿದ್ದರಾಮಯ್ಯ ಕಾಂಗ್ರೆಸ್ಸಿನದ್ದೇ ದರ್ಬಾರ್, ಇಲ್ಲಿ ಹೈಕಮಾಂಡ್ ಮಾತಿಗೆ ಯಾವುದೇ ಬೆಲೆಯಿಲ್ಲ, ಲೆಕ್ಕವೂ ಇಲ್ಲ ಎಂದು ಜಾಫರ್ ಷರೀಫ್ ಹೇಳಿದ್ದಾರೆ.
ನಮ್ಮ ಸಮುದಾಯದವರಿಗೂ ಟಿಕೆಟ್ ನೀಡಬೇಕೆಂದು ಬೇಡಿಕೆ ಇಡುತ್ತಲೇ ಬಂದಿದ್ದೇವೆ, ಆದರೆ ಅದಕ್ಕೆ ಯಾರೂ ಸೊಪ್ಪು ಹಾಕುತ್ತಿಲ್ಲ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್, ಕೆ ಆರ್ ಪುರಂನಲ್ಲಿ ಭೈರತಿ ಬಸವರಾಜ್ ಮತ್ತು ಹೆಬ್ಬಾಳದಲ್ಲಿ ಭೈರತಿ ಸುರೇಶ್. ಇವರೆಲ್ಲರೂ ಮುಖ್ಯಮಂತ್ರಿಗಳ ಸಮುದಾಯದವರು (ಕುರುಬ ಜನಾಂಗ) ಎಂದು ಜಾಫರ್ ಷರೀಫ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಜಾಫರ್ ಷರೀಫ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮೊಮ್ಮಗನಿಗೆ ಹೆಬ್ಬಾಳ ಕ್ಷೇತ್ರದ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು.
2013ರ ಚುನಾವಣೆಯಲ್ಲಿ ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತರಾದ ಆರ್.ಜಗದೀಶ್ ಕುಮಾರ್ ಗೆಲುವು ಸಾಧಿಸಿದ್ದರು. ಅವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ನಡೆದಿತ್ತು. ಆಗ, ಬಿಜೆಪಿಯ ವೈ.ನಾರಾಯಣ ಸ್ವಾಮಿ ಜಯಗಳಿಸಿದ್ದರು. ಈ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಬ್ದುಲ್ ರೆಹಮಾನ್ ಷರೀಫ್ ಸೋಲು ಅನುಭವಿಸಿದ್ದರು.