ಛೇ..ಛೇ... ಸಿಎಂ, ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ: ಪರಂ
ಸಿದ್ದರಾಮಯ್ಯ ಜತೆ ಯಾವುದೇ ಮನಸ್ತಾಪವಿಲ್ಲ ಎಂದ ಜಿ. ಪರಮೇಶ್ವರ್. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಕೆಪಿಸಿಸಿ ಅಧ್ಯಕ್ಷ.
Recommended Video
ಬೆಂಗಳೂರು, ಸೆ. 4: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
''ಹಲವಾರು ಮಾಧ್ಯಮಗಳಲ್ಲಿ, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಳಿವೆ ಎಂದು ಹೇಳಲಾಗಿದೆ. ಆದರೆ, ಆ ರೀತಿ ಏನೂ ಇಲ್ಲ. ನಮ್ಮಿಬ್ಬರ ಸ್ನೇಹ ಉತ್ತಮವಾಗಿದೆ. ಇತ್ತೀಚೆಗೆ ನಡೆದ ಮಂತ್ರಿ ಮಂಡಲ ವಿಸ್ತರಣೆ ವಿಚಾರದಲ್ಲಿ ನನ್ನ ಮಾತನ್ನು ಸಿದ್ದರಾಮಯ್ಯ ಅವರು ಮಾನ್ಯ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದು ವಾಸ್ತವಕ್ಕೆ ದೂರ. ನಾನು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ರಾವ್ ಹಾಗೂ ಸಿದ್ದರಾಮಯ್ಯ ಅವರು ಪರಸ್ಪರ ಚರ್ಚಿಸಿಯೇ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದೆವು. ಹಾಗಾಗಿ, ಭಿನ್ನಾಭಿಪ್ರಾಯದ ಮಾತೇ ಇಲ್ಲ'' ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಭಿನ್ನಮತ ಸ್ಫೋಟ!
ಇತ್ತೀಚೆಗೆ ನಡೆದ ರಾಜ್ಯ ಮಂತ್ರಿ ಮಂಡಲ ವಿಸ್ತರಣೆ ವೇಳೆ, ತಮ್ಮ ಆಪ್ತರಾಗಿರುವ ಎಂಎಲ್ ಸಿ ಷಡಕ್ಷರಿ ಅವರಿಗೆ ಸಚಿವ ಸ್ಥಾನವನ್ನು ನೀಡಲು ಮುಖ್ಯಮಂತ್ರಿ ಮನಸ್ಸು ಮಾಡಲಿಲ್ಲ ಎಂಬ ಕೊರಗು ಪರಮೇಶ್ವರ್ ಅವರನ್ನು ಕಾಡುತ್ತಿದೆ ಎಂದು ಹೇಳಲಾಗಿತ್ತು.
ಸೆ. 1ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಅವರು ಗೈರು ಹಾಜರಾಗಿದ್ದು ಪರಮೇಶ್ವರ್ ಅವರ ಬಗೆಗಿನ ಅಭಿಪ್ರಾಯಕ್ಕೆ ಪುಷ್ಟಿ ನೀಡಿತ್ತು.
ಹೈಕಮಾಂಡ್ ಗೆ ದೂರು ?
ಇದೆಲ್ಲರ ಬೆಳವಣಿಗೆಗಳ ಹಿಂದೆ, ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಅಧ್ಯಕ್ಷರಾದ ತಮ್ಮ ಸಲಹೆಗಳಿಗೆ ಗೌರವ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದರೆಂದೂ ಹೇಳಲಾಗಿತ್ತು.
ದೂರವಾಣಿಯಲ್ಲಿ ಖರ್ಗೆ ಜತೆ ಮಾತು
ಅದಕ್ಕೆ ಪೂರ್ವಭಾವಿಯಾಗಿ ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗಿರುವ ರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಲ್ಲೂ ಪರಮೇಶ್ವರ್ ಅವರು ದೂರವಾಣಿಯಲ್ಲಿ ತಮ್ಮ ನೋವು ತೋಡಿಕೊಂಡಿದ್ದರೆಂದು ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಊಹಾಪೋಹಗಳಿಗೆ ಸಂಪೂರ್ಣ ತೆರೆ
ಆದರೆ, ಈಗ, ತಮ್ಮ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳುವ ಮೂಲಕ ಪರಮೇಶ್ವರ್ ಅವರು ಈ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ ತೊರೆಯುವುದಿಲ್ಲ
ಏತನ್ಮಧ್ಯೆ, ಸಿದ್ದರಾಮಯ್ಯ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜಿನಾಮೆ ನೀಡಲು ಸಿದ್ಧರಾಗಿರುವ ಬಗ್ಗೆ ಎದ್ದಿರುವ ವಿಚಾರವೂ ಕೇವಲ ಗಾಳಿಸುದ್ದಿಯಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.