ಪ್ಲಾಆಪ್ಯಾ ಗಣೇಶ ನಿಷೇಧ ಕಸದ ಬುಟ್ಟಿಯಲ್ಲಿ ವಿಸರ್ಜನೆ
ಬೆಂಗಳೂರು, ಸೆಪ್ಟೆಂಬರ್ 04 : ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ನಿಷೇಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕರಾಮಾನಿಮಂ) ಹೊರಡಿಸಿದ ಆದೇಶ ಕಾರ್ಯರೂಪಕ್ಕೆ ಬರುವ ಮುನ್ನವೇ ಕಸದ ಬುಟ್ಟಿಯಲ್ಲಿ ವಿಸರ್ಜನೆಯಾಗಿದೆ.
ಈ ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿಯನ್ನು ಮಾರಾಟ ಮಾಡಲು ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿದೆಯಂತೆ. ಹೀಗಾಗಿ, ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಹೊದಿಕೆ ಹೊದ್ದುಕೊಂಡು ಕುಳಿತಿರುವ ಗಣಪನ ಮೂರ್ತಿಗಳು ಬಿಂದಾಸ್ ಆಗಿ ಮಾರಾಟವಾಗುತ್ತಿವೆ. [ಸಂತಾನ ಕರುಣಿಸುವ ಕುದೇರು ಗ್ರಾಮದ ಹಿಟ್ಟಿನ ಗೌರಮ್ಮ]
ಪರಿಸರ ಉಳಿಕೆಯ ದೃಷ್ಟಿಯಿಂದ, ಸಾಕಷ್ಟು ಮಾಲಿನ್ಯ ಸೃಷ್ಟಿಸುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನನ್ನು ಮಾರಾಟ ಮಾಡಬಾರದೆಂದು ಆದೇಶ ನೀಡಲಾಗಿತ್ತು. ಆದರೆ, ಆದೇಶ ರವಾನಿಸುವ ಹೊತ್ತಿಗೆ ಶೇ.80ರಷ್ಟು ಮೂರ್ತಿಗಳು ತಯಾರಾಗಿ ಕುಳಿತಿದ್ದರಿಂದ ಮತ್ತು ನಿಷೇಧಿಸಿದರೆ ಸಾಕಷ್ಟು ನಷ್ಟ ಆಗುತ್ತದೆಂಬ ದೃಷ್ಟಿಯಿಂದ ನಿಯಮವನ್ನು ಸಡಿಲ ಮಾಡಲಾಗಿದೆ.
ಸನ್ಮಾನ್ಯ ಸಿದ್ದರಾಮಯ್ಯನವರು ಪೇಪರುಗಳಲ್ಲೆಲ್ಲ ಮಣ್ಣಿನ ಗಣಪನನ್ನೇ ಕೊಂಡು ಪೂಜಿಸಿ, ಪರಿಸರವನ್ನು ಉಳಿಸಿ ಎಂದು ಜಾಹೀರಾತು ಕೊಟ್ಟಿದ್ದಾರೆ. ಹಲವಾರು ಕಡೆಗಳಲ್ಲಿ ಬ್ಯಾನರ್ ಹಾಕಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನನ್ನು ಕೊಳ್ಳಬೇಡಿ ಎಂದೂ ಮನವಿ ಮಾಡಿದ್ದಾರೆ. ಆದರೆ, ಈ ಬಾರಿ ಅದು ಜಾರಿಗೆ ಬರುವುದು ಬಲು ಕಷ್ಟ. ಹೀಗಾಗಿ ಪರಿಸರ ಮಾಲಿನ್ಯ ಗ್ಯಾರಂಟಿ. [ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ]
ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣೇಶನೇ ಆಗಬೇಕು
ಮಣ್ಣಿನ ಗಣಪನನ್ನು ಐದಡಿಯವರೆಗೆ ತಯಾರಿಸಬಹುದು. ಅದಕ್ಕಿಂತಲೂ ದೊಡ್ಡದಾದ ಗಣಪತಿ ಬೇಕೆಂದರೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣೇಶನೇ ಆಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ, ಅಪಾರ್ಟ್ ಮೆಂಟುಗಳಲ್ಲಿ ಕೂಡಿಸುವ ಗಣಪತಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದ ಗಜಾನನರೇ ಆಗಿರುತ್ತಾರೆ. [ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!]
ಗ್ರಾಹಕರಿಗೆ ಪರಿಸರದ ಬಗ್ಗೆ ಕಾಳಜಿ ಇದ್ದರೆ
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮಾರಾಟಕ್ಕೆ ಮತ್ತು ಕೊಳ್ಳುವಿಕೆಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಈ ವರ್ಷ ತೆರವೇನೋ ಮಾಡಿರಬಹುದು. ಆದರೆ. ಗ್ರಾಹಕರಿಗೆ ಪರಿಸರದ ಬಗ್ಗೆ ಕಾಳಜಿ ಇದ್ದರೆ ಮಣ್ಣಿನಿಂದ ಮಾಡಿದ ಸುಂದರ ಗಣೇಶನ ಮೂರ್ತಿಯನ್ನೇ ಕೊಂಡು ಪೂಜಿಸಬೇಕು.
ಪರಿಸರ ಮಾಲಿನ್ಯಕ್ಕೆ ನಿಮ್ಮ ಕೊಡುಗೆ ನೀಡಬೇಡಿ
ಮಣ್ಣಿನ ಗಣೇಶ ಬಕೇಟಿನಲ್ಲಾಗಲೀ, ಕೆರೆಯಲ್ಲಾಗಲಿ, ಬಿಬಿಎಂಪಿಯವರು ನಿರ್ಮಿಸಿರುವ ಹೊಂಡದಲ್ಲಾಗಲಿ ಸಲೀಸಾಗಿ ಮುಳುಗುತ್ತಾನೆ ಮತ್ತು ನೀರಿನಲ್ಲಿ ಬೆರೆತು ಹೋಗುತ್ತಾನೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಹಂಗಲ್ಲ. ಆತ ನೀರಲ್ಲಿ ಮುಳುಗುವುದೂ ಇಲ್ಲ, ನೀರಲ್ಲಿ ಬೆರೆಯುವುದೂ ಇಲ್ಲ. ಅದರ ಮೇಲೆ ಸ್ಪ್ರೇ ಮಾಡಲಾಗಿದ್ದ ಬಣ್ಣವೂ ಸೇರಿ ಪರಿಸರ ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನೂ ನೀಡುತ್ತಾನೆ. [ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಎಂಥ ಗಣೇಶನನ್ನು ಕೊಳ್ಳಬೇಕೆಂದಿದ್ದೀರಿ?
ನೀವು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಬೃಹದಾಕಾರದ ಮೂರ್ತಿಯನ್ನೇ ಪೂಜಿಸಿ, ಮಣ್ಣನಿಂದ ತಯಾರಿಸಿದ ಪುಟಾಣಿ ಗಣಪನನ್ನೇ ಪೂಜಿಸಿ, ನಿಮಗೆ ಗಜಾನನ ಒಂದೇ ಬಗೆಯ ವರವನ್ನು ಕೊಡುತ್ತಾನೆ. ಮಣ್ಣಿನ ಗಣಪನನ್ನು ಕೊಂಡರೆ ಹಣವೂ ಉಳಿತಾಯ. ಸ್ವಲ್ಪ ಯೋಚಿಸಿ ಭಕ್ತಾದಿಗಳೇ, ಎಂಥ ಗಣೇಶನನ್ನು ಕೊಳ್ಳಬೇಕೆಂದಿದ್ದೀರಿ?