ಬಿಬಿಎಂಪಿ ಮೂವರು ಅಧಿಕಾರಿಗಳ ವಿರುದ್ಧ ದೂರು ದಾಖಲು
ಬೆಂಗಳೂರು, ಜೂನ್ 13: ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ನೆಪದಲ್ಲಿ ಕಿವಿ, ವಿವಿಧ ಭಾಗಗಳನ್ನು ಕತ್ತರಿಸಿ ಅವುಗಳಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ಮೂರು ಅಧಿಕಾರಿಗಳ ವಿರುದ್ಧ ಸರ್ಕಾರೇತರ ಸಂಸ್ಥೆಯೊಂದು ದೂರು ದಾಖಲಿಸಿದೆ.
ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಆನಂದ್, ಸಹಾಯಕ ನಿರ್ದೇಶಕ ಬಸವರಾಜ್, ಪ್ರಾಣಿ ಸಂತಾನ ನಿಯಂತ್ರಣಾ ಕೇಂದ್ರದ ಅಭಿಲಾಷ್ ಮದ್ದೂರ್ ಮೇಲೆ ಸಿವಿಲ್ ಆಂಡ್ ಗ್ರೀನ್ ವಾರಿಯರ್ಸ್ ಎಂಬ ಸಂಸ್ಥೆ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಂಗಳೂರಿನಲ್ಲಿ ನಾಯಿ ಸಾಕಲು ಇನ್ನು ಲೈಸೆನ್ಸ್ ಕಡ್ಡಾಯ
ಬೀದಿ ನಾಯಿಗಳನ್ನು ಪಾಲಿಕೆ ಅಧಿಕಾರಿಗಳು ಹಿಡಿದುಕೊಂಡು ಹೋಗಿ ಸಂತಾನಶಕ್ತಿ ಹರಣ ನೆಪದಲ್ಲಿ ಕಿವಿ ಕತ್ತರಿಸಿದ್ದಾರೆ. ನಂತರ ಕನಕಪುರ ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಅಭಿಲಾಷ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ನಾವು ಸಂತಾನಶಕ್ತಿ ಹರಣದ ಪ್ರಕ್ರಿಯೆಯ ಫೋಟೊ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ನಾವು ತಪ್ಪು ಮಾಡುತ್ತಿದ್ದರೆ ಫೋಟೊ ತೆಗೆದುಕೊಳ್ಳಲು ಏಕೆ ಬಿಡುತ್ತಿದ್ದವು ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿರುವುದರಿಂದ ಸಂತತಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಪಾಲಿಕೆಯು ಬೀದಿ ನಾಯಿಗಳಿಗೆ ಸಂತಾನಹರಣ ಮಾಡುತ್ತಿತ್ತು, ಬೀದಿನಾಯಿಗಳು ಹೆಚ್ಚಾಗಿರುವುದರಿಂದ ದಿನನಿತ್ಯ ಶಾಲೆಗೆ ಹೋಗುವ ಮಕ್ಕಳು ಭಯದಿಂದಲೇ ತೆರಳಬೇಕಾಗಿತ್ತು. ಒಂದೊಂದು ಬೀದಿಯಲ್ಲಿ 50ಕ್ಕೂ ಹೆಚ್ಚು ನಾಯಿಗಳು ಕಂಡುಬರುತ್ತಿತ್ತು.