ಬೆಂಗಳೂರು ಮಾನ ಕಳೆದ ಪುಂಡರು, ಅಸಹಾಯಕ ಪೊಲೀಸರು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಹೆಣ್ಣುಮಕ್ಕಳನ್ನು ಕೆಲವು ಕಿಡಿಗೇಡಿಗಳು ಎಳೆದಾಡಿದ್ದಾರೆ, ಚುಡಾಯಿಸಿದ್ದಾರೆ. ಆದರೆ ದೂರು ದಾಖಲಾಗಿಲ್ಲ. ಗೃಹಸಚಿವ ಪರಮೇಶ್ವರ್ ಅವರೇನೋ ಇಂಥದ್ದೆಲ್ಲ ಮಾಮೂಲಿ, ಅಗತ್ಯ ಕ್ರಮ ತೆಗೆದುಕೊಂಡಿದ್ದೆವು ಅಂತಾರೆ
ಬೆಂಗಳೂರು, ಜನವರಿ 2: ಹೊಸ ವರ್ಷದ ಸ್ವಾಗತಕ್ಕೆ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸೇರಿದ್ದ ಪುರುಷರು-ಮಹಿಳೆಯರ ಮೇಲೆ ಗುಂಪುಗಳಲ್ಲಿದ್ದ ಕೆಲವರು ದಾಳಿ ನಡೆಸಿದ್ದಾರೆ. ಸಿಸಿ ಟಿವಿ ಕ್ಯಾಮೆರಾ, ಸಾವಿರಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ನಿಯೋಜನೆ ಆಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಹೊಡೆಯುವುದು, ಚುಡಾಯಿಸುವುದು ಮತ್ತು ರೌಡಿಯಿಸಂ ಮಾಡಿರುವುದಕ್ಕೆ ಆ ರಾತ್ರಿ ಸಾಕ್ಷಿಯಾಗಿದೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಮಾಹಿತಿ ನೀಡಿರುವುದು ಬಿಟ್ಟರೆ ಅಧಿಕೃತವಾಗಿ ಪೊಲೀಸರ ಬಳಿ ಯಾವುದೇ ದೂರು ದಾಖಲಾಗಿಲ್ಲ. "ಆ ಗುಂಪು ಮದ್ಯಪಾನ ಮಾಡಿತ್ತು. ಹೇಗೆಂದರೆ ಹಾಗೆ ನಡೆದುಕೊಳ್ಳುತ್ತಿದ್ದರು.[ಸಂಭ್ರಮಕ್ಕೆ ತಡೆಯಿಲ್ಲ, ನಿಯಮ ಉಲ್ಲಂಘಿಸಿದರೆ ಬಿಡಲ್ಲ!]
"ಮಹಿಳೆಯರು-ಪುರುಷರ ಮೇಲೆ ದಾಳಿ ಮಾಡುತ್ತಿದ್ದರು. ಗುಂಪನ್ನು ಚದುರಿಸಬೇಕು ಎಂಬ ಕಾರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಆದರೆ ವಿಪರೀತ ಜನರಿದ್ದರು. ಅಷ್ಟು ಜನರ ಮಧ್ಯೆ ಪೊಲೀಸರು ನಿಸ್ಸಹಾಯಕರಾಗಿದ್ದರು." ಎಂದು ಸ್ಥಳದಲ್ಲಿನ ಹುಚ್ಚಾಟಕ್ಕೆ ಸಾಕ್ಷಿಯಾದ ಪತ್ರಕರ್ತ ಮುಷ್ತಾಕ್ ಷಾ ಹೇಳಿದ್ದಾರೆ.
Such incidents do happen on #NewYear day and on #Christmas. We take a lot of precautions: G Parmeshwara,Karnataka Home Minister pic.twitter.com/RzHqHQLPgr
— ANI (@ANI_news) 2 January 2017
ಮುಷ್ತಾಕ್ ಷಾ ಸೇರಿದಂತೆ ಇತರ ಪತ್ರಕರ್ತರು ದೊಂಬಿಯಲ್ಲಿ ಸಿಕ್ಕಿಕೊಂಡವರನ್ನು ರಕ್ಷಿಸಿದ್ದಾರೆ. ನೂರಾರು ಸಿಸಿಟಿವಿ ಕ್ಯಾಮೆರಾ ಇದ್ದು, ಟಿವಿ ಚಾನಲ್ ಗಳ ಕ್ಯಾಮೆರಾಗಳಿದ್ದರೂ ಮನಸೋ ಇಚ್ಛೆ ನಡೆದುಕೊಳ್ಳುತ್ತಾ ಜೋಡಿಗಳು, ಮಹಿಳೆಯರು ಮತ್ತು ಮಕ್ಕಳ ಜೊತೆ ಹೇಗೆಂದರೆ ಹಾಗೆ ವರ್ತಿಸುತ್ತಿದ್ದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಪ್ರತ್ಯಕ್ಷದರ್ಶಿಗಳು ಹೇಳಿದ ಪ್ರಕಾರ, ಹೆಂಗಸರ ಬಟ್ಟೆಗಳನ್ನು ಎಳೆದಾಡಿ ಅಸಭ್ಯವಾಗಿ ವರ್ತಿಸಲಾಗಿದೆ. ಕೆಲವರಂತೂ ಗುಂಪಿನಿಂದ ಹೊರಬರಲು ಪೊಲೀಸರ ಸಹಾಯ ಕೇಳುತ್ತಿದ್ದರು. ಆದರೆ ಅಲ್ಲಿರುವ ಜನರನ್ನು ಸಂಭಾಳಿಸುವುದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದರು. ಅಧಿಕೃತವಾಗಿ ಯಾವುದೂ ದೂರು ದಾಖಲಾಗಿಲ್ಲ. ಆದರೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಹೊಸ ವರ್ಷದ ಸಂಭ್ರಮ.[ಹೊಸ ವರ್ಷಾಚರಣೆ: ಬೆಂಗಳೂರು ಮದ್ಯಪ್ರಿಯರಿಗೆ ಸಿಹಿಸುದ್ದಿ]
ಆದ್ದರಿಂದ ಬೆಂಗಳೂರು ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಕೊಳ್ಳಬೇಕು. ಮತ್ತು ಇಂಥ ಘಟನೆಗಳು ರಾಜಧಾನಿ ನಗರದಲ್ಲಿನ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ ಮಧ್ಯೆ ಗೃಹಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಹೊಸ ವರ್ಷ ಹಾಗೂ ಕ್ರಿಸ್ ಮಸ್ ವೇಳೆ ಇಂಥ ಘಟನೆಗಳು ನಡೆಯುತ್ತವೆ. ನಾವು ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.
ಈ ರೀತಿ ವರದಿಗಳು ಬಂದಿರುವುದರಿಂದ ನಾವು ತಪ್ಪಿತಸ್ಥರನ್ನು ಗುರುತಿಸಿ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕರ್ನಾಟಕ ಡಿಜಿಪಿ ಓಂ ಪ್ರಕಾಶ್ ಹೇಳಿದ್ದಾರೆ.