ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!
ಬೆಂಗಳೂರು, ಸೆ.28: ಜಯನಗರ ವಾರ್ಡ್ ನ ಕಾರ್ಪೊರೇಟರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದ ಒಳಗೂ ಹೊರಗೂ ಸಾಕಷ್ಟು ವಿರೋಧವನ್ನು ಎದುರಿಸಿ ಹರಸಾಹಸ ಪಟ್ಟು ಬೆಂಗಳೂರಿನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಒಂದು ವರ್ಷದ ಅವಧಿಗೆ ಮೇಯರ್ ಆಗಿ ಕಾರ್ಯನಿರ್ವಹಣಿಸಲಿರುವ ಗಂಗಾಂಬಿಕೆ ಅವರ ಎದುರು ಬೆಟ್ಟದಷ್ಟು ಸವಾಲುಗಳಿವೆ. ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಬೆಂಗಳೂರು ನಗರವನ್ನು ಎಡೆಬಿಡದೆ ಕಾಡುವ ಮಳೆಯಿಂದ ಸಮಸ್ಯೆಗಳು ಆರಂಭವಾಗಿ ಆರ್ಥಿಕ ವರ್ಷದ ಕೊನೆಗೆ ಮಾರ್ಚ್ ಅಂತ್ಯದ ಆರ್ಥಿಕ ಕ್ರೋಢೀಕರಣದವರೆಗೆ ಮೇಯರ್ ಗಳು ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸವಾಲುಗಳು ಪ್ರತಿ ಮೇಯರ್ ಗೂ ಎದುರಾಗುತ್ತದೆ ಆದರೂ ಸಮ್ಮಿಶ್ರವ ಸರ್ಕಾರವಿರುವ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಬೆಂಗಳೂರು ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಗಂಗಾಂಬಿಕೆಯವರಿಗೆ ಬಹುದೊಡ್ಡ ಸವಾಲಾಗಿದೆ.
ಮೂಲಸೌಕರ್ಯಕ್ಕೆ ನೀಡಬೇಕಾಗಿದೆ ಆಧ್ಯತೆ
ಬೆಂಗಳೂರಿನ ಸರಿಸುಮಾರು 1.15 ಕೋಟಿ ಜನರಿಗೆ ಮೂಲ ಸೌಕರ್ಯವನ್ನು ಒದಗಿಸುವುದು, ಬೆಂಗಳೂರಿನ ಬಹುತೇಕ ವಾಣಿಜ್ಯ ಹಾಗೂ ಗೃಹಬಳಕೆಯ ನೀರಿನ ಬಳಕೆ, ಕಾವೇರಿ ನದಿ ನೀರಿನ ಯೋಜನೆ ಮೇಲೆ ಅವಲಂಬಿತವಾಗಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಹಾಗೂ ಕೈಗಾರಿಕೆಗಳಿಗೆ ಹಾಗೂ ಕುಡಿಯುವ ನೀರಿನ ಪೂರೈಕೆ ಬಹುದೊಡ್ಡ ಸವಾಲಾಗಿದೆ. ಈಗಾಗಲೇ ಮೂರು ಹಂತದ ಕಾವೇರಿ ನೀರಿನ ಯೋಜನೆ ಮುಗಿದಿದ್ದು, ನಾಲ್ಕು ಹಾಗೂ ಐದನೇ ಹಂತದ ಅನುಷ್ಠಾನದ ಮೂಲಕ ನೀರು ಒದಗಿಸುವುದು ಗಂಗಾಂಬಿಕೆ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಕಾವೇರಿ ನೀರಿನ ಅನುಷ್ಠಾನ ಜಲಮಂಡಳಿ ಯೋಜನೆಯಾಗಿದ್ದರೂ ಕುಡಿಯುವ ನೀರಿನ ಪೂರೈಸುವುದು ಬಿಬಿಎಂಪಿಯ ಹೊಣೆಗಾರಿಕೆ. ನೀರು, ರಸ್ತೆ, ಬೀದಿದೀಪ, ಸುಜ್ಜಿತ ಪಾರ್ಕ್ಗಳು ಹೀಗೆ ಹಲವು ಮೂಲಸೌಕರ್ಯಗಳನ್ನು ಜನರಿಗೆ ತಲುಪಿಸುವುದು ಬಿಬಿಎಂಪಿಯ ಬಹುಮುಖ್ಯ ಕರ್ತವ್ಯ.
ಬಿಬಿಎಂಪಿ ಚುನಾವಣೆ LIVE: ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ
ಹದಗೆಟ್ಟ ರಸ್ತೆಗಳು, ತುಂಬಿ ಹರಿಯುವ ರಾಜಕಾಲುವೆಗಳು
ಬೆಂಗಳೂರಿನ ಬಹುಮುಖ್ಯ ಸಮಸ್ಯೆಯೆಂದರೆ ಹದಗೆಟ್ಟ ರಸ್ತಗಳನ್ನು ಅದರಲ್ಲೂ ಮಳೆಗಾಲದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಮಾಡುವುದು ಬಿಬಿಎಂಪಿಯ ಬಹುದೊಡ್ಡ ಸವಾಲಾಗಿದೆ. ಈಗಾಗಲೇ ದಶಕಗಳಿಂದ ಬಿಬಿಎಂಪಿ ರಸ್ತೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದು ಇನ್ನು ಗುಟ್ಟಾಗಿ ಉಳಿದಿಲ್ಲ, ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಯನ್ನು ರಸ್ತೆಗುಂಡಿ ವಿಚಾರದಲ್ಲಿ ತಲೆಕೆಳಕಾಗಿ ನಿಲ್ಲಿಸಿದ್ದನ್ನು ಸ್ಮರಿಸಬಹುದು. ಸಾವಿರಾರು ಕೋಟಿ ರೂಗಳನ್ನು ರಸ್ತೆಗೆ ಸುರಿದರೂ ನಗರದ ಒಂದೇ ಒಂದು ರಸ್ತೆ ಸಂಪೂರ್ಣವಾಗಿ ಸರಿ ಇದೆ ಎನ್ನಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೇಯರ್ ಆಗಿರುವ ಗಂಗಾಂಬಿಕೆಯವರು ಬೆಂಗಳೂರು ನಗರದ ರಸ್ತೆ, ಒಳರಸ್ತೆಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ಜನರಲ್ಲಿ ತುಂಬಬೇಕಿದೆ.
ಆರ್ಥಿಕ ಸಂಪನ್ಮೂಲದ ಕ್ರೋಢೀಕರಣ
ಬೆಂಗಳೂರು ನಗರಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಪ್ರತಿ ವರ್ಷ ರಾಜ್ಯ ಸರ್ಕಾರದ ಬಜೆಟ್ ನಲ್ಲಿ 2 ಸಾವಿರ ಕೋಟಿ ರೂಗಳನ್ನು ಸರಾಸರಿ ಘೋಷನೆ ಮಾಡುತ್ತಾದರೂ ಬಿಡುಗಡೆ ಮಾಡುವುದು ಮಾತ್ರ 500ರಿಂದ 1 ಸಾವಿರ ಕೋಟಿ ಮಾತ್ರ, ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ನಿತ್ಯ ಪರಿತಪಿಸುತ್ತಿದೆ. ಸಧ್ಯದ ಆಸ್ತಿ ತೆರಿಗೆ ಹಾಗೂ ಇನ್ನಿತರೆ ತೆರಿಗೆ ಮೂಲಗಳಿಂದ ಸಂಗ್ರಹಿಸುತ್ತಿರುವ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ.ಹಾಗಾಗಿ ಹೊಸದಾಗಿ ಸಾರಿಗೆ ಸೆಸ್, ವಾಹನ ಸೆಸ್ ನಂತಹ ಹೊಸ ತೆರಿಗೆಗಳನ್ನು ಹೇರಲು ಬಿಬಿಎಂಪಿ ಆಲೋಚನೆ ನಡೆಸುತ್ತಿದೆ. ಹೀಗಾಗಿ ಆರ್ಥಿಕ ಸಂಪನ್ಮೂಲದ ಹೊಣೆಗಾರಿಕೆಯನ್ನು ಹೊಸ ಮೇಯರ್ ನಿಭಾಯಿಸುವುದು ಅನಿವಾರ್ಯವಾಗಿದೆ.
ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ
ಹಿಂದಿನ ಯೋಜನೆ ಮುಂದುವರಿಸುವುದು
ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು ಅಕ್ರಮ ತಡೆಯುವುದು, ಒಎಫ್ಸಿ, ಉದ್ದಿಮೆ ಪರವಾನಗಿಗಳಿಂದ ಆದಾಯ ತರುವ ಮೂಲಕ ಬಿಬಿಎಂಪಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಅಗತ್ಯವಿದೆ. ಸಂಪತ್ ರಾಜ್ ಅವರ ಅವಧಿಯಲ್ಲಿ ಇದಕ್ಕಾಗಿ ಬಹಳಷ್ಟು ಪ್ರಯತ್ನಗಳನ್ನು ಪಟ್ಟಿದ್ದರೂ, ಪೂರ್ಣ ಪ್ರಮಾಣದಲ್ಲಿ ಅವರು ಸಫಲರಾಗಿಲ್ಲ.
ಹೊಸ ಮೇಯರ್ ಗಂಗಾಂಬಿಕೆ ಅವರು ಎದುರಿಸಬೇಕಾದ ಎಲ್ಲಕ್ಕಿಂತ ದೊಡ್ಡ ಸವಾಲು ಎಂದರೆ ಭ್ರಷ್ಟಾಚಾರ ಮುಕ್ತ ಆಡಳಿತ. ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಹಗರಣದಿಂದ ಕುಖ್ಯಾತಿಯಾಗಿರುವ ಬಿಬಿಎಂಪಿ ಯನ್ನು ಸ್ವಚ್ಛ ಆಡಳಿತದ ಕಡೆಗೆ ಕೊಂಡೊಯ್ಯಬೇಕಿದೆ. ಅದನ್ನು ಗಂಗಾಂಬಿಕೆ ಮಾಡಬೇಕೆಂಬುದು ಬೆಂಗಳೂರು ನಾಗರಿಕರ ನಿರೀಕ್ಷೆ ಕೂಡ.