ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ 4 ಹೆಚ್ಚುವರಿ ಸೇವೆ ಲಭ್ಯ!
ಬೆಂಗಳೂರು, ಮೇ 18: ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಶನಿವಾರದಿಂದಲೇ ಹೆಚ್ಚಿನ ಸೇವೆ ಲಭ್ಯವಾಗಲಿದೆ. ಸೇವಾ ಸಿಂಧು ಯೋಜನೆಯಡಿ 500 ಸೇವೆಗಳನ್ನು ಒದಗಿಸಲು ಇ-ಆಡಳಿತ ಇಲಾಖೆಯ ಇಡಿಸಿಎಸ್ ವಿಭಾಗ ಸಿದ್ಧತೆ ನಡೆಸಿದ್ದು, ಪ್ರಾಯೋಗಿಕವಾಗಿ ನಾಲ್ಕು ಸೇವೆಗಳು ಶನಿವಾರದಿಂದಲೇ ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಇತರ ಕೇಂದ್ರಗಳ ಮೂಲಕ ಲಭ್ಯವಾಗಲಿದೆ.
ಭೂಮಿ ಖರೀದಿಯ ದಾಖಲೆಗಳು, ನೋಂದಣಿ, ವ್ಯಾಪಾರ ಪರವಾನಗಿ ಹಾಗೂ ಆರೋಗ್ಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬೆಂಗಳೂರು ಒನ್ ಕೇಂದ್ರದ ಮೂಲಕ ಖಾತಾ ನೀಡಲಾಗುತ್ತಿದ್ದು, ರಾಜ್ಯಾದ್ಯಂತ ವಿವಿಧ ಸೇವೆಗಳನ್ನು ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ.
ಪಿಯುಸಿ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ ಎಂದ ಹೈಕೋರ್ಟ್
ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಸೇವೆ ಕೇಂದ್ರ ಮತ್ತು ರಾಜ್ಯದಲ್ಲಿರುವ 6 ಸಾವಿರ ಖಾಸಗಿ ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ಸೇವೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 19ರಿಂದ ನಾಲ್ಕು ಸೇವೆಗಳು ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತಿತರೆ ಸೇವಾ ಕೇಂದ್ರಗಳ ಮೂಲಮ ದೊರೆಯಲಿದೆ. ಹಿರಿಯ ನಾಗರಿಕರ ಗುರುತಿನ ಚೀಟಿ, ಗ್ರಂಥಾಲಯ ಗುರುತಿನ ಚೀಟಿ, ಅಂತಾರಾಷ್ಟ್ರೀಯ ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣಪತ್ರ ಸೇವೆಗಳನ್ನು ಪಡೆಯಬಹುದಾಗಿದೆ.
ಈಗಾಗಲೇ ಈ ಕೇಂದ್ರಗಳಲ್ಲಿ ಸಾಮಾನ್ಯ ಜನನ, ಮರಣ ಪತ್ರಗಳನ್ನು ನೀಡಲಾಗುತ್ತಿದೆ. ಈಗಾಗಲೇ ಇಡಿಸಿಎಸ್ ವಿಭಾಗವು ಖಾತೆಗಳನ್ನು ಬೆಂಗಳೂರು ಒನ್ ಕೇಂದ್ರದ ಮೂಲಕ ಒದಗಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಜಾರಿ ಮಾಡಿದೆ.
ಕಳೆದ ವರ್ಷ ಮೇನಲ್ಲಿ 60 ಕೇಂದ್ರಗಳ ಮೂಲಕ ಆರಂಭಗೊಂಡ ಸೇವಾ ಸಿಂಧು ಯೋಜನೆಯು ಇದೀಗ 6 ಸಾವಿರ ಕೇಂದ್ರಗಳನ್ನು ಹೊಂದಿದೆ.