ಬಾರ್ ಮತ್ತು ರೆಸ್ಟೋರೆಂಟ್ ಗಳ ಅಗ್ನಿ ಸುರಕ್ಷತೆಗೆ ಹೊಸ ನಿಯಮ!
ಬೆಂಗಳೂರು, ಜನವರಿ 10: ಕಲಾಸಿಪಾಳ್ಯದ ಕೈಲಾಶ್ ಬಾರ್ ಅಗ್ನಿ ದುರಂತದ ಬಳಿಕ ಎಚ್ಚೆತ್ತಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ರಾಜ್ಯದ ಬಾರ್ ಹಾಗೂ ರೆಸ್ಟೋರೆಂಟ್ ಗೆ ಅನ್ವಯವಾಗುವಂತೆ ಹೊಸ ಅಗ್ನಿಶಾಮಕ ನಿಯಂತ್ರಣ ಕಾಯ್ದೆ ರೂಪಿಸಲು ಮುಂದಾಗಿದೆ.
ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಗಳಲ್ಲಿ ವಿದ್ಯುತ್ ಅಲಂಕಾರ, ಸ್ಪಿರಿಟ್, ಅಡುಗೆ ಮನೆ ಕಿಡಿ ಹಾಗೂ ಧೂಮಪಾನದಿಂದ ಅಗ್ನಿ ದುರಂತ ಸಂಭವಿಸುತ್ತದೆ. ಬಾರ್ ಗಳಿಗೆ ಅನ್ವಯವಾಗುವಂತೆ ಹೊಸ ಕಾಯ್ದೆ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮೂಲಗಳು ತಿಳಿಸಿವೆ.
ಬೆಂಕಿ ದುರಂತ ನಂತರ ಚೇತರಿಕೆಯತ್ತ ಕೆ.ಆರ್. ಮಾರ್ಕೆಟ್: ಚಿತ್ರಗಳು
ಮುಂಬೈ ಪಬ್ ಅಗ್ನಿ ಅನಾಹುತದ ಬಳಿಕ ರಾಜ್ಯದಲ್ಲಿ ಬಹುಮಹಡಿ ಕಟ್ಟಡದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಬಾರ್, ಪಬ್ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಕೋರಮಂಗಲ, ಜೆಪಿ ನಗರ, ಇಂದಿರಾನಗರ, ಅಶೋಕನಗರ ಸೇರಿ ವಿವಿಧೆಡೆ ೮೦ಕ್ಕೂ ಹೆಚ್ಚು ಪಬ್ ಗಳಿಗೆ ಅಗ್ನಿ ಅನಾಹುತ ತಡೆಯಲು ಮುಂಜಾಗೃತೆ ಕ್ರಮ ತೆಗೆದುಕೊಳ್ಳುವಂತೆ ನೋಟಿಸ್ ನೀಡಲಾಗಿದೆ. ಕಾನೂನು ಪ್ರಕಾರ 90 ದಿನಗಳ ಕಾಲಾವಧಿ ನೀಡಲಾಗಿದೆ.
ಬೆಂಗಳೂರು, ಮೈಸೂರು, ಮಂಗಳೂರು ಸೇರಿ ನಗರ, ಪಟ್ಟಣಗಳಲ್ಲಿ ಬಹುಮಹಡಿ (45 ಅಡಿಗೂ ಎತ್ತರ) ಕಟ್ಟಡಗಳಲ್ಲಿ 5 ಅಥವಾ 6 ನೇ ಮಹಡಿಯಲ್ಲಿ ಪಬ್ ತೆರೆದಿರುವುದು ಕಂಡುಬಂದಿದೆ. ಅಗ್ನಿ ದುರಂತ ತಪ್ಪಿಸಲು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ. ಬೆಂಕಿ ಹೊತ್ತಿಕೊಂಡಾಗ ಸಿಬ್ಬಂದಿ ಮತ್ತು ಗ್ರಾಹಕರು ಹೊರ ಬರಲು ಅವಕಾಶವಿರುವುದಿಲ್ಲ. ಅಗ್ನಿ ಶಾಮಕ ಸಿಬ್ಬಂದಿಯ ಕಾರ್ಯಾಚರಣೆಗೂ ಅಡ್ಡಿಯಾಗಿ ಪ್ರಾಣ ಹಾನಿ ಉಂಟಾಗಲಿದೆ.
ಸ್ಥಳೀಯ ಸಂಸ್ಥೆಗಳ ಜತೆಗೆ ಚರ್ಚೆ: ಹೊಸ ಕಾಯ್ದೆ ತರುವ ಸಂಬಂಧ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ಮದ್ಯದಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಪಬ್ ಗೆ ಪರವಾನಗಿ ನೀಡುವ ಅಬಕಾರಿ ಇಲಾಖೆ, ಬಿಬಿಎಂಪಿ, ಬಿಡಿಎ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಹೊಸ ಕಾಯ್ದೆಗೆ ಪ್ರಸ್ತಾವನೆ ಸಲ್ಲಿಸಲಿದೆ.