ಸ್ನೇಹಿತರೇ ಉಮೇಶ್ ಬೆಳಗೋಡ್ ಹತ್ಯೆ ಮಾಡಿದರು
ಬೆಂಗಳೂರು, ನವೆಂಬರ್ 23 : ನಾಯಂಡಹಳ್ಳಿ ವಾರ್ಡ್ ಮಾಜಿ ಕಾರ್ಪೊರೇಟರ್ ರಾಜೇಶ್ವರಿ ಅವರ ಪತಿ ಉಮೇಶ್ ಬೆಳಗೋಡ್ ಅವರನ್ನು ಹತ್ಯೆ ಮಾಡಿದವರು ಸಿಕ್ಕಿಬಿದಿದ್ದಾರೆ. ಆತ್ಮೀಯ ಸ್ನೇಹಿತನಿಂದಲೇ ಉಮೇಶ್ ಹತ್ಯೆ ನಡೆದಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ನವೆಂಬರ್ 19ರ ಗುರುವಾರ ರಾತ್ರಿ ಉಮೇಶ್ ಬೆಳಗೋಡ್ ಅವರನ್ನು ಹತ್ಯೆ ಮಾಡಲಾಗಿತ್ತು. ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಉಮೇಶ್ ಅವರನ್ನು ರಾಜರಾಜೇಶ್ವರಿ ನಗರದ ಬಾಟಾ ಶೋ ರೂಂ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು, ನಡುರಸ್ತೆಯಲ್ಲೇ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. [ಉಮೇಶ್ ಬೆಳಗೋಡು ಹತ್ಯೆ]
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಅವರ ಸ್ನೇಹಿತ ಅರುಣ್ ಗೌಡ (32) ಹಾಗೂ ಆತನ ಸಹಚರರಾದ ನಾಯಂಡಹಳ್ಳಿಯ ನಿವಾಸಿಗಳಾದ ಜಯರಾಮ್, ಅವಿನಾಶ್, ಪಾಗಲ್ ಸೀನನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನವೀನ್ಗಾಗಿ ಹುಡುಕಾಟ ನಡೆಯುತ್ತಿದೆ. [ಬೆಂಗಳೂರು : ಛೋಟಾ ಶಕಿಲ್ ಸಹಚರನ ಬಂಧನ]
ಸ್ನೇಹಿತನಿಂದಲೇ ಕೊಲೆ : ಉಮೇಶ್ ಅವರನ್ನು ಆಪ್ತ ಸ್ನೇಹಿತ ಅರುಣ್ ಗೌಡ ಇತರರೊಂದಿಗೆ ಸೇರಿ ಕೊಲೆ ಮಾಡಿದ್ದಾರೆ. ಮೂಲತಃ ಮದ್ದೂರಿನವರಾದ ಅರುಣ್ ನಾಯಂಡಹಳ್ಳಿಯಲ್ಲಿ ವಾಸವಾಗಿದ್ದರು, ಮೊದಲು ಆಟೋ ಓಡಿಸುತ್ತಿದ್ದ ಅವರು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಆಗ ಅದೇ ವ್ಯವಹಾರದಲ್ಲಿ ತೊಡಗಿದ್ದ ಉಮೇಶ್ ಪರಿಚಯವಾಗಿತ್ತು.
ಕೆಲವು ದಿನಗಳ ನಂತರ ಉಮೇಶ್ ಮತ್ತು ಅರುಣ್ ಗೌಡ ಒಟ್ಟಾಗಿ ವ್ಯವಹಾರ ನಡೆಸುತ್ತಿದ್ದರು. ರಾಜಕೀಯದಲ್ಲಿ ಉಮೇಶ್ ಸಕ್ರಿಯವಾಗಿದ್ದರಿಂದ ಹಲವು ಕೆಲಸಗಳನ್ನು ಅರುಣ್ ಗೌಡ ಮಾಡುತ್ತಿದ್ದರು.ಇತ್ತೀಚೆಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂರೆ ಅರುಣ್ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಪೊಲೀಸರು ಅರುಣ್ ಗೌಡನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ತಮಗೆ ಜಾಮೀನು ನೀಡಿ ಬಿಡಿಸುವಂತೆ ಅರುಣ್ ಉಮೇಶ್ಗೆ ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಆದರೆ, ಉಮೇಶ್ ಇದಕ್ಕೆ ಸ್ಪಂದಿಸಿರಲಿಲ್ಲ.
ದ್ವೇಷಕ್ಕಾಗಿ ಕೊಲೆ : ಉಮೇಶ್ ತನ್ನನ್ನು ಬಿಡಿಸಲಿಲ್ಲ ಎಂದು ಅರುಣ್ ಕೋಪಗೊಂಡಿದ್ದರು. ತಮ್ಮನ್ನು ಜೈಲಿನಲ್ಲಿ ಬಿಟ್ಟು ಒಬ್ಬರೇ ವ್ಯವಹಾರ ಮಾಡುತ್ತಿದ್ದಾರೆ ಎಂದು ದ್ವೇಷ ಸಾಧಿಸ ತೊಡಗಿದ್ದರು. ಜಮೀನು ಪಡೆದು ಹೊರಬಂದ ಅವರು ಉಮೇಶ್ ಹತ್ಯೆಗೆ ಸ್ನೇಹಿತರ ಜೊತೆ ಸೇರಿ ಸಂಚು ರೂಪಿಸಿದ್ದರು.
ಕಾರಿನಿಂದಾಗಿ ಸಿಕ್ಕಿಬಿದ್ದ ಆರೋಪಿಗಳು : ಉಮೇಶ್ ಹತ್ಯೆಗೆ ಸಂಚು ರೂಪಿಸಿದ ಅರುಣ್ ಗೌಡ ಅವರು ಗುರುವಾರ ಸಂಜೆ ಸ್ನೇಹಿತ ಶಿವಮೂರ್ತಿ ಎಂಬಾತನನ್ನು ಭೇಟಿ ಮಾಡಿ, ಅರುಣ್, ಸ್ನೇಹಿತರನ್ನು ಕರೆದುಕೊಂಡು ಬರಬೇಕು ಎಂದು ಹೇಳಿ ಅವರ ಕಾರನ್ನು ತೆಗೆದುಕೊಂಡು ಹೋಗಿದ್ದರು.
ರಾಜರಾಜೇಶ್ವರಿ ನಗರದ ಬಾಟಾ ಶೋ ರೂಂ ಬಳಿ ಉಮೇಶ್ ಹತ್ಯೆ ಮಾಡಿದ ಬಳಿಕ ಕಾರನ್ನು ಅಲ್ಲೇ ಬಿಟ್ಟು ಪರಾಗಿಯಾಗಿದ್ದರು. ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಕಾರಿನ ಮಾಲೀಕ ಶಿವಮೂರ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದರು.
ಆಗ, ಅರುಣ್ಗೆ ಕಾರು ನೀಡಿರುವುದಾಗಿ ಶಿವಮೂರ್ತಿ ಪೊಲೀಸರಿಗೆ ಹೇಳಿದ್ದರು. ನಂತರ ಅರುಣ್ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹಣೆ ಮಾಡಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನವೀನ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.