ಕನ್ನಡ ನೆಲ-ಜಲ, ನಾಳಿನ ಅರಿವು ಕುರಿತು ಒಂದು ವಿಚಾರ ಮಂಥನ
ಬೆಂಗಳೂರು, ಜು.16: ನವಕರ್ನಾಟಕ ಪ್ರಕಾಶನ ಹಾಗೂ ಇ-ಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಕನ್ನಡ ನೆಲ-ಜಲ: ನಾಳಿನ ಅರಿವು ವಿಷಯ ಕುರಿತು ವಿಚಾರ ಸಂಕಿರಣ ಜುಲೈ 29ರಂದು ಬೆಳಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿದೆ.
'ಕಲಿಕೆಗೆ ಕೊಡುಗೆ' ಯೋಜನೆಯಡಿ ಶಾಲೆಗಳಿಗೆ ಪುಸ್ತಕ ವಿತರಣೆ ಕೂಡ ಇದೇ ವೇಳೆ ಹಮ್ಮಿಕೊಳ್ಳಲಾಗಿದೆ. ಡಾ.ಎಚ್.ಆರ್.ಅಪ್ಪಣ್ಣಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಟಿ.ಎಸ್.ಗೋಪಾಲ್ ಅವರ 'ಜ್ಞಾನ ಪೀಠಕೆ ಮೆರಗು- ಕನ್ನಡದ ಬೆಡಗು' ಹಾಗೂ ಮತ್ತಿತರ ಪುಸ್ತಕಗಳನ್ನು ಡಾ.ಪದ್ಮಶೇಖರ್ ಅನಾವರಣಗೊಳಿಸುವರು.
ಕೆ.ಎಸ್.ನವೀನ್ ಕೃತಿಗಳನ್ನು ಪರಿಚಯಿಸುವರು. ಕನ್ನಡ ನೆಲ-ಜಲ: ನಾಳಿನ ಅರಿವು ವಿಷಯ ಕುರಿತು ಎಚ್.ಎನ್.ಎ.ಪ್ರಸಾದ್, ವೈ.ಬಿ.ರಾಮಕೃಷ್ಣ ಹಾಗೂ ಡಾ.ನಾ.ಸೋಮೇಶ್ವರ ಮಾತನಾಡುವರು. ಭಾರತೀ ಪ್ರಕಾಶನ, ಸಹಬಾಳ್ವೆ ಹಾಗೂ ಹೆಮ್ಮರ ಪ್ರಕಾಶನಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಲಿವೆ ಎಂದು ತಿಳಿಸಿದೆ.ಇಜ್ಞಾನ ಟ್ರಸ್ಟ್ ಕುರಿತು
ಇಜ್ಞಾನ ಟ್ರಸ್ಟ್ ಒಂದು ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದ್ದು ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಸ್ಥೆಯನ್ನು ಆಗಸ್ಟ್ 3, 2016ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು. ಸಾಮಾನ್ಯ ಜನರ ನಡುವೆ ವಿಜ್ಞಾನ-ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವುದು ಹಾಗೂ ಕನ್ನಡ ಭಾಷೆ - ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರಮಿಸುವುದು ಇಜ್ಞಾನ ಟ್ರಸ್ಟ್ನ ಧ್ಯೇಯ.
ಕನ್ನಡದ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಜಾಲತಾಣವಾದ ಇಜ್ಞಾನ ಡಾಟ್ ಕಾಮ್ ಅನ್ನು ಟಿ. ಜಿ. ಶ್ರೀನಿಧಿಯವರ ಸಂಪಾದಕತ್ವದಲ್ಲಿ ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಕಳೆದ ವರ್ಷ (2017) 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ'ವನ್ನು - ಪುಸ್ತಕ ಹಾಗೂ ಆನ್ಲೈನ್ ಎರಡೂ ರೂಪಗಳಲ್ಲಿ - ಪ್ರಕಟಿಸಿದ್ದು ಇಜ್ಞಾನ ಟ್ರಸ್ಟ್ನ ಮಹತ್ವದ ಸಾಧನೆಗಳಲ್ಲೊಂದು. ವಿದ್ಯಾರ್ಥಿಗಳಿಗೆ 'ಮಾಹಿತಿ ತಂತ್ರಜ್ಞಾನ ಹಾಗೂ ಕನ್ನಡ' ಕುರಿತ ಕಾರ್ಯಾಗಾರಗಳನ್ನು ಆಯೋಜಿಸುವಲ್ಲೂ ಇಜ್ಞಾನ ಟ್ರಸ್ಟ್ ಸಕ್ರಿಯವಾಗಿದೆ. ಸುರಾನಾ ಕಾಲೇಜಿನ ಸಹಯೋಗದಲ್ಲಿ ಇದೇ ವಿಷಯ ಕುರಿತ 'ನುಡಿಯ ನಾಳೆಗಳು' ಎಂಬ ಪುಸ್ತಕವನ್ನೂ ಹೊರತರಲಾಗಿದೆ.