ಬರದ ಮೂಲಕ ಮಾನವನ ಮೇಲೆ ಪ್ರಕೃತಿಯ ಸೇಡು : ಕಂಬಾರ
ಬೆಂಗಳೂರು, ಏಪ್ರಿಲ್ 22 : ಪ್ರಕೃತಿ ತನ್ನ ಮೇಲೆ ಮಾನವ ಎಸಗುತ್ತಿರುವ ನಿರಂತರ ದೌರ್ಜನ್ಯದ ಸೇಡನ್ನು ಬರದ ಮೂಲಕ ತೀರಿಸಿಕೊಳ್ಳುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿರುವ ದೇಶದ ಅತಿದೊಡ್ಡ ಸಾವಯವ ಹಬ್ ಗ್ರೀನ್ ಪಾಥ್ ಹಸಿರು ತೋಟದಲ್ಲಿ ಆಯೋಜಿಸಲಾಗಿದ್ದ 'ಭೂಮಿ ಹಬ್ಬ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಗಳಿಗಿಂತ ಸಾವಯವ ಕೃಷಿಗೆ ಸರಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. [ಸಾವಿನ ದವಡೆಯಿಂದ ಪಾರಾದ ಮರದಲ್ಲಿ ಮರುಜೀವ!]
ಬ್ರಿಟೀಷರ ಕಾಲದಲ್ಲಿ ಅನುಸರಿಸುತ್ತಿದ್ದ ಅಧಿಕಾರಶಾಹಿ ಆರ್ಥಿಕತೆಯನ್ನೇ ಇಂದಿಗೂ ನಮ್ಮ ಸರಕಾರಗಳು ಅನುಸರಿಸುತ್ತಿವೆ. ಆ ಕಾಲದಲ್ಲಿ 97ರಷ್ಟು ಜನರು ವ್ಯವಸಾಯವನ್ನು ಅವಲಂಬಿಸಿದ್ದರು. ಆಗಲೂ ಕೂಡಾ ಅಂದಿನ ಅಧಿಕಾರಶಾಹಿಗಳು ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. 5 ಏಕರೆ ಜಮೀನಿನಲ್ಲಿ ವರ್ಷಪೂರ್ತಿ ಶ್ರಮಪಡುವ ರೈತ ಕೇವಲ 2 ಲಕ್ಷ ರೂಪಾಯಿ ಲಾಭ ಪಡೆದರೆ. ಐಎಎಸ್ ಅಧಿಕಾರಿಗಳು ತಿಂಗಳಿಗೆ 2 ಲಕ್ಷ ರುಪಾಯಿ ಸಂಬಳ ಪಡೆದುಕೊಳ್ಳುತ್ತಾರೆ. ಯಾವ ಪರಿಶ್ರಮದ ಆಧಾರದ ಮೇಲಿನ ಆರ್ಥಿಕತೆ ಇದು ಎಂದು ಪ್ರಶ್ನಿಸಿದರು.
ಭಾರತದ ಸಂಪ್ರದಾಯದಲ್ಲಿ ಮೊದಲಿನಿಂದಲೂ ಪ್ರಕೃತಿಯನ್ನು ದೇವರೆಂದು ಪೂಜಿಸಲಾಗುತ್ತಿತ್ತು. ಅಲ್ಲದೆ ಪ್ರಕೃತಿ ಬಗ್ಗೆ ಭಯ ಭಕ್ತಿ ಇರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆಗಿರುವ ಮನಸ್ಥಿತಿಯ ಬದಲಾವಣೆಗಳು ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯವೆಸಗುವಂತೆ ಮಾಡುತ್ತಿವೆ. ಹೀಗೆ ನಿರಂತರ ದೌರ್ಜನ್ಯದಿಂದ ಬಳಲಿರುವ ಪ್ರಕೃತಿ ಬರದಂತಹ ಪರಿಣಾಮಗಳ ಮೂಲಕ ಮನುಕುಲದ ಮೇಲೆ ತನ್ನ ಸೇಡನ್ನು ತೀರಿಸಿಕೊಳ್ಳುತ್ತಿದೆ ಎಂದರು. [ಕಾಶ್ಮೀರದಲ್ಲೇ ಬರಗಾಲವಿದೆ ಮಂಡ್ಯದಲ್ಲಿರಲ್ವಾ? : ಅಂಬಿ]
ಸಾವಯವ ಕೃಷಿ ನಮ್ಮ ಮೂಲಭೂತ ಪದ್ದತಿಯಾಗಿದೆ. ರಾಸಾಯನಿಕ ಅಂಶಗಳು ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿಯಾಗಿ ಉಪಯೋಗ ಮಾಡುವ ಮೂಲಕ ನಮ್ಮ ದೇಹದಲ್ಲಿ ವಿಷಕಾರಕ ಅಂಶಗಳನ್ನು ನಾವೇ ಸೇರಿಸಿಕೊಳ್ಳುತ್ತಿದ್ದೇವೆ. ನಮ್ಮ ಮೂಲ ಸಾಂಪ್ರದಾಯಿಕ ಪದ್ದತಿಯಾಗಿರುವ ಸಾವಯವ ಪದ್ದತಿಯನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಸರಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಚಂದ್ರಶೇಖರ ಕಂಬಾರರು ಅಭಿಪ್ರಾಯಪಟ್ಟರು. [ಚಿತ್ರಗಳಲ್ಲಿ: ನೇಪಾಳದಲ್ಲಿ ಮತ್ತೆ ಭೂಕಂಪ, ಉತ್ತರ ಭಾರತ ತತ್ತರ]
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಪಾಥ್ ಎಕೋ ಫೌಂಡೇಶನ್ನ ಸಂಸ್ಥಾಪಕ ಜಯರಾಮ್ ಮಾತನಾಡಿ, ಕಳೆದ 9 ವರ್ಷಗಳಿಂದ ನಿರಂತರವಾಗಿ 'ಭೂಮಿ ಹಬ್ಬ'ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪರಿಸರವನ್ನು ಉಳಿಸಲು 'ಭೂಮಿ ಹಬ್ಬ'ದ ಆಚರಣೆ ಬಹಳ ಪ್ರಾಮುಖ್ಯ. ಈ ಹಬ್ಬದ ಮೂಲಕ ಜನರಲ್ಲಿ ಪರಿಸರ ಉಳಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರು ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅನುಸೂಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.