ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದಿದ್ದ ನಾರಾಯಣಸ್ವಾಮಿಗೆ ಜಾಮೀನು
ಬೆಂಗಳೂರು, ಮಾರ್ಚ್ 03: ಹೊರಮಾವು ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಪಟ್ಟು ಬಂಧಿತನಾಗಿದ್ದ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿಗೆ ಇಂದು ಜಾಮೀನು ನೀಡಲಾಗಿದೆ.
ಘಟನೆ ಬಳಿಕ 'ಪೆಟ್ರೋಲ್ ನಾರಾಯಣಸ್ವಾಮಿ' ಎಂದೇ ಖ್ಯಾತನಾದ ಈತನಿಗೆ ನಗರದ 58ನೇ ಸಿವಿಲ್, ಸೆಷನ್ಸ್ ನ್ಯಾಯಾಲಯ ಶರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದ್ದು, ಶೂರಿಟಿ, 1 ಲಕ್ಷ ಬಾಂಡ್ ಪಡೆದುಕೊಂಡಿದೆ ಹಾಗೂ ಸಾಕ್ಷ ನಾಶ ಪಡಿಸದಂತೆ ಎಚ್ಚರಿಕೆ ಸಹ ನೀಡಿದೆ.
ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಹೊರಮಾವು ಬಿಬಿಎಂಪಿ ಕಚೇರಿಯಲ್ಲಿ ಫೆ.16ರಂದು ನಾರಾಯಣಸ್ವಾಮಿ ಗಲಾಟೆ ಮಾಡಿದ್ದ, ಕಚೇರಿಯ ಒಳಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿದ್ದ. ಘಟನೆ ನಡೆದ ಎರಡು ದಿನ ನಂತರ ನಾರಾಯಣಸ್ವಾಮಿ ಯ ವಿಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಫೆಬ್ರವರಿ 19ರಂದು ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕಾಂಗ್ರೆಸ್ ಮುಖಂಡ 'ಪೆಟ್ರೋಲ್' ನಾರಾಯಣಸ್ವಾಮಿ ಪೊಲೀಸರಿಗೆ ಶರಣು
ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಸಹ ಆಗಿತ್ತು, ಬಿಜೆಪಿಯು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರವನ್ನು ಮುಜುಗರಕ್ಕೆ ದೂಡಿತ್ತು. ಘಟನೆ ತುಳಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಅವರ ಆಪ್ತನೂ, ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೂ ಆಗಿದ್ದ ನಾರಾಯಣಸ್ವಾಮಿ ಪೊಲೀಸರು ಕೇಸು ದಾಖಲಿಸುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ. ಆ ನಂತರ ಫೆಬ್ರವರಿ 23ರಂದು ಪೊಲೀಸರಿಗೆ ಶರಣಾಗಿದ್ದ. ಇಂದು (ಮಾರ್ಚ್ 03) ರಂದು ಸೆಷನ್ಸ್ ಕೋರ್ಟ್ ಜಾಮೀನು ನೀಡಿದ್ದು, ಪ್ರಕರಣ ಏನಾಗುತ್ತದೆಯೋ ಕಾದು ನೋಡಬೇಕಿದೆ.
ಗೂಂಡಾಗಿರಿ ತೋರಿದ ಕೈ ಮುಖಂಡ ನಾರಾಯಣಸ್ವಾಮಿ ಮೇಲೆ 6 ಕೇಸು