ಇನ್ಫೋಸಿಸ್ ಗೆ ಬಂದ ನಿಲೇಕಣಿಗೆ ಮೂರ್ತಿ ಹೇಳಿದ ಕಿವಿಮಾತೇನು?
ಇನ್ಫೋಸಿಸ್ ಗೆ ಹಿಂದಿರುಗಿದ ನಂದನ್ ನಿಲೇಕಣಿ ಅವರಿಗೆ ನಾರಾಯಣ ಮೂರ್ತಿ ಕಿವಿಮಾತು. ಇನ್ಫೋಸಿಸ್ ಸಂಸ್ಥೆಯ ಸಹ- ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ. ಕಂಪನಿಯ ಆಡಳಿತದಲ್ಲಿ ಈವರೆಗೆ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಕಿವಿಮಾತು.
ಬೆಂಗಳೂರು, ಆಗಸ್ಟ್ 30: ಖ್ಯಾತ ಸಾಫ್ಟ್ ವೇರ್ ಸಂಸ್ಥೆಯಾದ ಇನ್ಫೋಸಿಸ್ ಗೆ ನೂತನ ಮುಖ್ಯಸ್ಥರಾಗಿ ಮರುನೇಮಕಗೊಂಡಿರುವ ನಂದನ್ ನಿಲೇಕಣಿಯವರನ್ನು ಅಭಿನಂದಿಸಿರುವ ಸಂಸ್ಥೆಯ ಸಹ-ಸಂಸ್ಥಾಪಕರಾದ ನಾರಾಯಣ ಮೂರ್ತಿ, ಅವರಿಗೊಂದು ಕಿವಿಮಾತನ್ನೂ ಹೇಳಿದ್ದಾರೆ.
ಇನ್ಫೋಸಿಸ್ ಮುಖ್ಯಸ್ಥರಾಗಿ ನಿಲೇಕಣಿ: ಅಧಿಕೃತ ಘೋಷಣೆ
ಆಂತರಿಕ ಆಡಳಿತದ ವಿಚಾರದಲ್ಲಿ ಇನ್ಫೋಸಿಸ್ ಸಂಸ್ಥೆಯು ಅನೇಕ ತಪ್ಪುಗಳನ್ನು ಮಾಡಿಕೊಂಡಿದ್ದು ಅದೆಲ್ಲವನ್ನೂ ಸರಿಪಡಿಸುವಂತೆ ನಂದನ್ ನಿಲೇಕಣಿಯವರಿಗೆ ಅವರು ಕಿವಿಮಾತು ಹೇಳಿದ್ದಾರೆ.
Recommended Video
ಇನ್ಫೋಸಿಸ್ ನಲ್ಲಿ ಆಡಳಿತಾತ್ಮಕ ದೋಷಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಸಂಸ್ಥೆಯ ಸಿಇಒ ಆಗಿದ್ದ ವಿಶಾಲ್ ಸಿಕ್ಕಾ ಅವರು ರಾಜಿನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ (ಕಳೆದ ವಾರ) ಆಡಳಿತ ಮಂಡಳಿಯ ನಾಲ್ವರು ಸದಸ್ಯರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥ ಆರ್. ಶೇಷಸಾಯಿ ಅವರು ಅಧಿಕಾರ ತ್ಯಜಿಸಿದ್ದರು.
ನಂದನ್ ಅವರಿಗೆ ಕಿವಿಮಾತು ಹೇಳುವಾಗ ಈ ಎಲ್ಲವನ್ನೂ ಪ್ರಸ್ತಾಪಿಸಿರುವ ನಾರಾಯಣ ಮೂರ್ತಿ, ಇತ್ತೀಚೆಗೆ ಕಂಪನಿ ತೊರೆದ ಆಡಳಿತ ಮಂಡಳಿಯ ಸದಸ್ಯರಾದ ಜೆಫ್ರಿ ಲೇಹ್ಮನ್ ಹಾಗೂ ರೂಪಾ ಕುಡ್ವಾ ಅವರ ವಿರುದ್ಧ ಹರಿಹಾಯ್ದರು.
ನಂದನ್ ನಿಲೇಕಣಿ ಮರುನೇಮಕ: ಇನ್ಫೋಸಿಸ್ ಷೇರು ಮೌಲ್ಯ ಹೆಚ್ಚಳ
''ಈ ಹಿಂದೆ, ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದ ರಾಜೀವ್ ಬನ್ಸಾಲ್ ಅವರು ಕಂಪನಿ ತೊರೆದಾಗ ಕಂಪನಿಯಿಂದ 17.38 ಕೋಟಿ ರು. ಪರಿಹಾರ ರೂಪವಾಗಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಬಳಿ ಉತ್ತರ ನೀಡಲು ಬಂದಿದ್ದ ಜೆಫ್ರಿ ಹಾಗೂ ರೂಪಾ, ಒಂದು ಒಪ್ಪಂದದ ಪ್ರತಿಯೊಂದನ್ನು ನನ್ನ ಮುಂದಿಟ್ಟು, ಇದಕ್ಕೆ ಸಹಿ ಹಾಕಿರಿ ಎಂದು ತಿಳಿಸಿದರು. ಇದೇನೆಂದು ನಾನು ಕೇಳಿದ್ದಕ್ಕೆ ಇದು ವಿಚಾರ ಗೌಪ್ಯವಾಗಿಡುವಂಥ ಒಪ್ಪಂದ ಎಂದು ತಿಳಿಸಿದರು. ಇಂಥವು ಅನೇಕ ಆಡಳಿತಾತ್ಮಕ ಲೋಪ ದೋಷಗಳು ಇವೆ. ಇಂಥವುಗಳನ್ನು ಸರಿಪಡಿಸಲೇಬೇಕಿದೆ'' ಎಂದು ಅವರು ತಿಳಿಸಿದರು.