ಅಭದ್ರತೆಯಲ್ಲಿ ನಂದಿ ಬೆಟ್ಟ: ಆತಂಕದಲ್ಲಿ ಪ್ರವಾಸಿಗರು
ಬೆಂಗಳೂರು, ಮೇ 22: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ನಂದಿ ಗಿರಿಧಾಮವಾಗಿದೆ. ದಿನಕ್ಕೆ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಸುರಕ್ಷತೆಯೇ ದೊಡ್ಡ ತಲೆನೋವಾಗಿದೆ.
ಇತ್ತೀಚೆಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು 350 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದರು. ಹೀಗಾಗಿ ಪ್ರವಾಸಿಗರಿಗೆ ಅಸುರಕ್ಷತೆ ಭಾವ ಕಾಡುವಂತೆ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಮುಸ್ಸ್ಂಜೆಯ ಸೂರ್ಯಾಸ್ತ ನೋಡುವುದಕ್ಕೆ, ಬಿಳಿ ಮೋಡಗಳು ಹೀಗೆ ಅಲ್ಲಿಯ ಸೊಬಗನ್ನು ಸವಿಯಲು ಪ್ರವಾಸಿಗರು ಭೇಟಿ ನೀಡುತ್ತಾರೆ.
ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ
ರಾಜ್ಯ ತೋಟಗಾರಿಕೆ ಇಲಾಖೆಯು 3 ವರ್ಷಗಳ ಹಿಂದೆ ನಂದಿ ಗಿರಿಧಾಮದ ಸುತ್ತಮುತ್ತ ಕಬ್ಬಿಣದ ಗ್ರಿಲ್ ನಿರ್ಮಾಣ ಮಾಡುವ ಯೋಜನೆ ಕೈಗೆತ್ತಿಕೊಂಡಿತ್ತು. ಆದರೆ, ಇಲ್ಲಿಯವರೆಗೂ ಕಬ್ಬಿಣದ ತಡೆಗೋಡೆ ಹಾಕುವ ಕೆಲಸ ಪೂರ್ಣಗೊಂಡಿಲ್ಲ. ಪ್ರತಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ವಾರಾಂತ್ಯದಲ್ಲಿ ನವ-ಯುವ ಜೋಡಿಗಳು, ಐಟಿ ಉದ್ಯೋಗಿಗಳು ಮತ್ತು ಹೊರ ರಾಜ್ಯದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಈ ವೇಳೆ ಅವರ ಸುರಕ್ಷತೆ ಕಡೆಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ ಹಾಗಾಗಿ ಕಬ್ಬಿಣದ ತಡೆಗೋಡೆ ನಿರ್ಮಿಸಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ನಂದಿ ಬೆಟ್ಟದ ನಂದೀಶ್ವರ ದೇವಸ್ಥಾನದಿಂದ ಟಿಪ್ಪು ಡ್ರಾಪ್ವರೆಗೆ ಅಂದಾಜು 1 ಕಿ.ಮೀವರೆಗೂ ಕಬ್ಬಿಣದ ಕಂಬಿಗಳನ್ನು ನೆಟ್ಟು ರಕ್ಷಣೆ ಒದಗಿಸಲಾಗಿದೆ. ತಂತಿಬೇಲಿ ಅಳವಡಿಸಲು ಇನ್ನೂ 50 ಲಕ್ಷ ರೂ. ಅಗತ್ಯವಿದೆ. ಆ ಅನುದಾನ ಬಿಡುಗಡೆ ಮಾಡಿದರೆ ಉಳಿದ ಸ್ಥಳಗಳಲ್ಲಿ ಹಾಕಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲಿ ಕಬ್ಬಿಣದ ತಡೆಗೋಡೆ ಅಥವಾ ಇನ್ಯಾವುದೇ ಭದ್ರತಾ ಕ್ರಮ ಕೈಗೊಳ್ಳದಿದ್ದರೆ ಸಾವಿನ ಸಂಖ್ಯೆ ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.